Bidar | ಚಿತ್ರಕಲೆ ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ, ಆತ್ಮವಿಶ್ವಾಸ ಬೆಳೆಸುತ್ತದೆ: ಸುರೇಖಾ ಮರುರಕರ್

ಬೀದರ್: ಚಿತ್ರಕಲೆ ವಿದ್ಯಾರ್ಥಿಗಳಲ್ಲಿ ಗಮನ, ತಾಳ್ಮೆ, ಸೃಜನಶೀಲತೆ ಹಾಗೂ ಆತ್ಮವಿಶ್ವಾಸವನ್ನು ಬೆಳೆಸುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಒಬ್ಬ ಕಲಾವಿದನಿದ್ದು, ಆ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ಡಾ. ಎಸ್.ಎಂ. ಪಂಡಿತ ಚಿತ್ರಕಲಾ ಮಹಾವಿದ್ಯಾಲಯದ ಪ್ರಾಂಶುಪಾಲೆ ಸುರೇಖಾ ಮರುರಕರ್ ಹೇಳಿದರು.
ನಗರದ ಕರ್ನಾಟಕ ಸಾಹಿತ್ಯ ಸಂಘದಲ್ಲಿ ರಾಜಕುಮಾರ್ ಹೆಬ್ಬಾಳ್ಕರ್ ಅವರ ನೇತೃತ್ವದಲ್ಲಿ ಶುಕ್ರವಾರ ಆಯೋಜಿಸಿದ್ದ ಸರ್ದಾರ ವಲ್ಲಭಭಾಯಿ ಪಟೇಲ್ ಅವರ 150ನೇ ಜನ್ಮಶತಮಾನೋತ್ಸವ ಹಾಗೂ ಚಿತ್ರಕಲಾ ಸ್ಪರ್ಧೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಚಿತ್ರಕಲೆ ಭಾವನೆ, ಕಲ್ಪನೆ, ಆಲೋಚನೆ ಹಾಗೂ ಸೃಜನಶೀಲತೆಯನ್ನು ವ್ಯಕ್ತಪಡಿಸುವ ಸುಂದರ ಭಾಷೆಯಾಗಿದೆ ಎಂದರು.
ಮಾತಿನಲ್ಲಿ ಹೇಳಲಾಗದ ಹಲವು ಭಾವನೆಗಳನ್ನು ಚಿತ್ರಗಳ ಮೂಲಕ ಪರಿಣಾಮಕಾರಿಯಾಗಿ ವ್ಯಕ್ತಪಡಿಸಬಹುದು. ಪ್ರಕೃತಿ, ಸಂಸ್ಕೃತಿ, ಇತಿಹಾಸ ಹಾಗೂ ಸಾಮಾಜಿಕ ಬದುಕನ್ನು ಚಿತ್ರಕಲೆಯ ಮೂಲಕ ಪರಿಚಯಿಸಬಹುದು ಎಂದು ಹೇಳಿದರು.
ವಿದ್ಯಾರ್ಥಿಗಳಲ್ಲಿರುವ ಕಲಾ ಪ್ರತಿಭೆ ಹಾಗೂ ಸೃಜನಶೀಲತೆಯನ್ನು ಪ್ರೋತ್ಸಾಹಿಸುವ ಇಂತಹ ಕಾರ್ಯಕ್ರಮಗಳು ಅವರ ಆತ್ಮವಿಶ್ವಾಸ ಹೆಚ್ಚಿಸಲು ಸಹಕಾರಿಯಾಗುತ್ತವೆ ಎಂದು ಅಭಿಪ್ರಾಯಪಟ್ಟರು.
ಚಿತ್ರಕಲಾ ಸ್ಪರ್ಧೆಯಲ್ಲಿ ಶಂಕರ್ ಕಾಂಬ್ಳೆ, ಓಂಕಾರ್ ಮೇತ್ರೆ, ಸಂಜುಕುಮಾರ್ ಬಂಡೆ, ಶಿವಕುಮಾರ್ ಮೇತ್ರೆ, ಸಂತೋಷ್ ಸಂಗುಳಗಿ, ರಾಜಕುಮಾರ್ ಮೇತ್ರೆ, ಮಲ್ಲಿಕಾರ್ಜುನ್ ಮರಗುಂಡಾ, ಗುರುನಾಥ್, ವಿಜಯಶ್ರೀ ಕುದರೆ, ಪ್ರತೀಕ್ ಹುಬಾಳೆ, ಭಾರತ್ ಬಂಡೆ ಹಾಗೂ ಜಾಸುವ ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸ್ಪರ್ಧೆಯಲ್ಲಿ ಪಾಲ್ಗೊಂಡ ಎಲ್ಲ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಚಂದ್ರಕಾಂತ್ ದರ್ಗಾ, ಸಂಜುಕುಮಾರ್ ಬಂಡೆ, ರಾಜಕುಮಾರ್ ಹೆಬ್ಬಾಳ್ಕರ್ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.






