ಬೀದರ್ | ಎಟಿಎಂ ದರೋಡೆ ಪ್ರಕಾರಣ : ಗುಂಡೇಟಿನಲ್ಲಿ ಮೃತಪಟ್ಟ ಗಿರೀಶ್ ನಿವಾಸಕ್ಕೆ ಈಶ್ವರ್ ಖಂಡ್ರೆ ಭೇಟಿ

ಬೀದರ್ : ನಿನ್ನೆ ನಡೆದ ಎಟಿಎಂ ದರೋಡೆ ಘಟನೆಯಲ್ಲಿ ಗುಂಡೇಟಿನಲ್ಲಿ ಮೃತಪಟ್ಟ ಗಿರೀಶ್ ಅವರ ಬೆಂಬಳಖೇಡಾ ಗ್ರಾಮದ ಮನೆಗೆ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ದರೋಡೆಯಾದ ಸ್ಥಳ ಪರಿಶೀಲನೆ ಮಾಡಿ, ಮೃತರ ಕುಟುಂಬಕ್ಕೆ ಭೇಟಿ ನೀಡಿದ ಅವರು, ಸರಕಾರ ಸಮಗ್ರ ಪರಿಹಾರ ಒದಗಿಸಲು ಬದ್ಧವಾಗಿದೆ. ಸಮಾಜ ಕಲ್ಯಾಣ ಇಲಾಖೆಯಿಂದ 8 ಲಕ್ಷ ರೂ. ಪರಿಹಾರ ಮತ್ತು ಸರಕಾರ ದಿಂದ ಹೆಚ್ಚುವರಿಯಾಗಿ 10 ಲಕ್ಷ ರೂ. ನೀಡಲಾಗುವುದು. ಪಿಂಚಣಿ ಹಾಗೂ ಕುಟುಂಬದ ಸದಸ್ಯರಿಗೆ ಉದ್ಯೋಗ ನೀಡುವ ಸಂಬಂಧ ಮುಖ್ಯಮಂತ್ರಿಗಳ ಜೊತೆ ಮಾತನಾಡಿ, ಕ್ರಮ ಕೈಗೊಳ್ಳಲಾಗುವುದು. ಸರಕಾರದಿಂದ ಏನೇನು ಸವಲತ್ತುಗಳು ನೀಡಬೇಕೋ ಅದೆಲ್ಲ ಸವಲತ್ತು ಕುಟುಂಬಕ್ಕೆ ನೀಡಲಾಗುತ್ತದೆ ಎಂದು ತಿಳಿಸಿದರು.
ಸದ್ಯಕ್ಕೆ ತಾತ್ಕಾಲಿಕವಾಗಿ ಕುಟುಂಬದವರಿಗೆ ಉದ್ಯೋಗ ನೀಡುವಂತೆ ಹಾಗೂ ಸಮಾಜ ಕಲ್ಯಾಣ ಇಲಾಖೆಯಿಂದ ದೊರಕಬೇಕಾದ ಪರಿಹಾರ ಸಹಾಯಗಳನ್ನು ತಕ್ಷಣವೇ ಒದಗಿಸುವಂತೆ ಸ್ಥಳದಲ್ಲೇ ಉಪಸ್ಥಿತರಿದ್ದ ಉಪ ನಿರ್ದೇಶಕರಿಗೆ ಸೂಚಿಸಿದರು.
ದುರಂತಕ್ಕೆ ಕಾರಣವಾದ ದುಷ್ಕರ್ಮಿಗಳನ್ನು ಶೀಘ್ರವಾಗಿ ಪತ್ತೆಹಚ್ಚಿ ಕಠಿಣ ಶಿಕ್ಷೆಗೆ ಒಳಪಡಿಸಲಾಗುವುದು. ಕುಟುಂಬದ ನೋವಿನಲ್ಲಿ ಸರಕಾರ ಮತ್ತು ನಾವೂ ಕೂಡ ಸದಾ ಜೊತೆಯಲ್ಲಿದ್ದೆವೆ ಎಂದರು.
ಈಗಾಗಲೇ ಹೈದಾರಾಬಾದ್ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಿವಕುಮಾರ್ ಅವರ ಚಿಕಿತ್ಸೆ ವೆಚ್ಚ ಭರಿಸಲು ಸಹ ಕ್ರಮ ಕೈಗೊಳ್ಳಲಾಗುವುದೆಂದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಶಿವಕುಮಾರ್ ಶೀಲವಂತ ಸೇರಿ ಗ್ರಾಮಸ್ಥರು ಉಪಸ್ಥಿತರಿದ್ದರು.







