ಬೀದರ್ | ವಿಸ್ಮಯ, ಕೌತುಕಗಳು ತೇಜಸ್ವಿಯವರ ಸಾಹಿತ್ಯದ ಸತ್ವ : ಶಶಿಕಾಂತ್ ಶೆಂಬೆಳ್ಳಿ

ಬೀದರ್ : ವಿಸ್ಮಯ ಮತ್ತು ಕೌತುಕಗಳು ತೇಜಸ್ವಿ ಅವರ ಸಾಹಿತ್ಯದ ಸತ್ವವಾಗಿವೆ. ನಿಸರ್ಗ ಸಹಜ ಬದುಕನ್ನು ಕಟ್ಟಿಕೊಂಡ ಹಲವು ಜೀವಿಗಳೇ ತೇಜಸ್ವಿ ಸಾಹಿತ್ಯದ ಕೇಂದ್ರಬಿಂದು ಎಂದು ಹಿರಿಯ ಪತ್ರಕರ್ತ ಶಶಿಕಾಂತ್ ಶೆಂಬೆಳ್ಳಿ ಅವರು ಹೇಳಿದರು.
ಬಸವಕಲ್ಯಾಣ ನಗರದ ಎಸ್ ಎಸ್ ಕೆ ಬಿ ಕಾಲೇಜಿನಲ್ಲಿ ಬೆಂಗಳೂರಿನ ಕರ್ನಾಟಕ ಸಾಹಿತ್ಯ ಅಕಾಡೆಮಿ, ಜಿಲ್ಲಾ ಚಕೋರ ಸಾಹಿತ್ಯ ವಿಚಾರ ವೇದಿಕೆ ಹಾಗೂ ಎಸ್ ಎಸ್ ಕೆ ಬಸವೇಶ್ವರ್ ಪದವಿ ಕಾಲೇಜು ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಹೊಸ ವಿಚಾರಗಳು ಕುರಿತ ವಿಶೇಷ ಉಪನ್ಯಾಸ ಸಮಾರಂಭದಲ್ಲಿ ಅವರು ಮಾತನಾಡಿದರು.
ತೇಜಸ್ವಿ ಅವರು ಕನ್ನಡದ ಬಹುದೊಡ್ಡ ಓದುಗ ಬಳಗ ಹೊಂದಿದ ಲೇಖಕರಾಗಿದ್ದರು. ಅವರ ಬರಹದಲ್ಲಿ ಕಾಡು, ನೆಲ, ನಿಸರ್ಗದ ವಿಸ್ಮಯ ಮತ್ತು ಕೌತುಕಗಳು ಅಡಕವಾಗಿದೆ ಎಂದರು.
ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಡಾ.ಸಂಜೀವಕುಮಾರ್ ಅತಿವಾಳೆ ಅವರು ಮಾತನಾಡಿ, ಕನ್ನಡ ಸಾಹಿತ್ಯಕ್ಕೆ ಎರಡು ಸಾವಿರಕ್ಕೂ ಹೆಚ್ಚು ವರ್ಷಗಳ ಚರಿತ್ರೆಯಿದೆ. ಶ್ರೇಷ್ಠ ಸಾಹಿತ್ಯ ಕೃತಿಗಳ ಓದಿನಿಂದ ಅರಿವು ವಿಸ್ತರಿಸಿಕೊಳ್ಳಬಹುದು ಎಂದು ಹೇಳಿದರು.
ಪ್ರಾಚಾರ್ಯ ಡಾ. ಭೀಮಾಶಂಕರ್ ಬಿರಾದಾರ್ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಾದ ಶಬನಮ್ ಹಾಗೂ ಜಯಶ್ರೀ ಸ್ವಾಮಿ ಅವರಿಗೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಪ್ರಾಚಾರ್ಯ ಡಾ.ಶಿವಕುಮಾರ್ ಪಾಟೀಲ್, ಭಾಲ್ಕಿಯ ನಿವೃತ್ತ ಗ್ರಂಥಪಾಲಕ ಉಮೇಶ್ ಮಾಸಿಮಾಡೆ, ಪ್ರೊ.ವಿಠೋಬಾ ಡೊಣ್ಣೆಗೌಡರ್, ಚಕೋರ ಸಾಹಿತ್ಯ ವಿಚಾರ ವೇದಿಕೆ ಸಂಯೋಜಕಿ ಡಾ.ಮಕ್ತುಂಬಿ ಎಂ, ಡಾ.ಸುರೇಶ್ ಎಚ್.ಆರ್., ಕಲ್ಯಾಣಪ್ಪಾ ನಾವದಗಿ, ನಾಗಪ್ಪಾ ನಿಣ್ಣೆ, ಸೂರ್ಯಕಾಂತ್ ನಾಸೆ, ಭಾರತಿ ಮಠ, ಶಿಲ್ಪಾ ಬಿರಾದಾರ್, ಪೂಜಾ, ಭೀಮಾಶಂಕರ್ ಪೂಜಾರಿ ಹಾಗೂ ಡಾ.ರಮೇಶ್ ಕೆ.ಬಿ. ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.