ಬೀದರ್ | ರಾಜ್ಯದ ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲಿ ಆಯುರ್ವೇದಿಕ್ ಕ್ಯಾನ್ಸರ್ ಚಿಕಿತ್ಸಾ ಕೇಂದ್ರ ಆರಂಭಿಸಲಿ : ಡಾ.ಡಿ.ಪಿ.ರಮೇಶ್
15ನೇ ಪಾರಂಪರಿಕ ವೈದ್ಯ ಸಮ್ಮೇಳನ

ಬೀದರ್ : ರಾಜ್ಯದ ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲಿ ಆಯುರ್ವೇದಿಕ್ ಕ್ಯಾನ್ಸರ್ ಚಿಕಿತ್ಸಾ ಕೇಂದ್ರಗಳನ್ನು ಆರಂಭಿಸುವ ಮೂಲಕ ಸರ್ಕಾರ ಪಾರಂಪರಿಕ ವೈದ್ಯರಿಗೆ ತರಬೇತಿ ನೀಡಬೇಕು ಎಂದು ಬೆಂಗಳೂರಿನ ಖ್ಯಾತ ಪಂಚಗವ್ಯ ತಜ್ಞ ಡಾ.ಡಿ.ಪಿ.ರಮೇಶ್ ಅವರು ಒತ್ತಾಯಿಸಿದರು.
ಇಂದು ಜಿಲ್ಲಾಡಳಿತ, ಕರ್ನಾಟಕ ಜೀವ ವೈವಿಧ್ಯ ಮಂಡಳಿ, ಪಾರಂಪರಿಕ ವೈದ್ಯ ಪರಿಷತ್ತು ಹಾಗೂ ಲಿಂಗಸುಗೂರಿನ ಕಲ್ಯಾಣ ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್ತು ಇವರ ಸಂಯುಕ್ತಾಶ್ರಯದಲ್ಲಿ ನಗರದ ಡಾ.ಚನ್ನಬಸವ ಪಟ್ಟದೇವರು ರಂಗಮಂದಿರದಲ್ಲಿ ನಡೆಯುತ್ತಿರುವ ʼ15ನೇ ಪಾರಂಪರಿಕ ವೈದ್ಯ ಸಮ್ಮೇಳನʼದಲ್ಲಿ ಅವರು ಮಾತನಾಡಿದರು.
ಕ್ಯಾನ್ಸರ್ ಚಿಕಿತ್ಸೆ ಎಂದರೆ ಕೇವಲ ಕಿಮೋತೆರಪಿ, ರೆಡಿಯೋತೆರಪಿ ಅಲ್ಲ. ಅವುಗಳಿಗೂ ಮೀರಿದ ಅಡ್ಡ ಪರಿಣಾಮಗಳಿಲ್ಲದ ಚಿಕಿತ್ಸೆ ಭಾರತೀಯ ಆಯುರ್ವೇದದಲ್ಲಿದೆ. ಪಂಚಗವ್ಯ ಚಿಕಿತ್ಸೆ ಅತ್ಯಂತ ಕಡಿಮೆ ಹಣದಲ್ಲಿ ಪಡೆಯಬಹುದು. ಇದಕ್ಕೆ ಸರ್ಕಾರ ಅವಕಾಶ ನೀಡಬೇಕಾಗಿದೆ. ಕ್ಯಾನ್ಸರ್ ಬರದಂತೆ ತಡೆಯಬೇಕಾದರೆ ನಮ್ಮ ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ಪ್ಲಾಸ್ಟಿಕ್ ಬಾಟಲಿ ನೀರು, ಸಿಂಟ್ಯಾಕ್ಸ್ ಒಳಗಿನ ನೀರು, ಮಿನರಲ್, ಚಹಾ ಕಪ್ ಇವು ಕ್ಯಾನ್ಸರ್ ರೋಗಕ್ಕೆ ಮೂಲ ಕಾರಣವಾಗಿವೆ. ಚಿಕ್ಕ ಮಕ್ಕಳು ಕುರಕುರೆ ತಿನ್ನುವುದರಿಂದ ಮಕ್ಕಳ ದೇಹದ ಮೇಲೆ ಅತಿಯಾದ ದುಷ್ಪರಿಣಾಮ ಬೀರುತ್ತಿದೆ. ಇದಕ್ಕೆ ಆಯುರ್ವೇದ ಸೂಕ್ತ ಚಿಕಿತ್ಸೆಯಾಗಿದೆ ಎಂದು ತಿಳಿಸಿದರು.
ಗದಗ ಜಿಲ್ಲೆಯ ವೈದ್ಯ ಹನುಮಂತ ಮಳಲಿ ಮಾತನಾಡಿ, ಭಾರತೀಯ ಆಯುರ್ವೇದದ ಬಗ್ಗೆ ಸಂವಿಧಾನದಲ್ಲಿ ಉಲ್ಲೇಖವಾಗಿದೆ. ಪ್ರಾಕೃತಿಕ ವೈದ್ಯ ಪದ್ಧತಿಯನ್ನು ಸಾಂಸ್ಕೃತಿಕ ಪದ್ಧತಿಯೆಡೆಗೆ ಕೊಂಡೊಯ್ಯುವುದೇ ಭಾರತದ ಆಯುರ್ವೇದ ವೈದ್ಯ ಪದ್ಧತಿಯಾಗಿದೆ. ಭಾರತದಲ್ಲಿ ಒಟ್ಟು 6 ಲಕ್ಷ ಪಾರಂಪರಿಕ ವೈದ್ಯರಿದ್ದಾರೆ. ಕರ್ನಾಟಕದಲ್ಲಿ 31 ಸಾವಿರ ವೈದ್ಯರಿದ್ದಾರೆ. ಇವರಿಗೆಲ್ಲಾ ಸರ್ಕಾರ ಮಾನ್ಯತೆ ನೀಡಿದರೆ ಜನರ ರೋಗ ವಾಸಿಯಾಗಿ ಆರೋಗ್ಯಯುತ ರಾಷ್ಟ್ರ ನಿರ್ಮಾಣವಾಗುವುದರಲ್ಲಿ ಸಂದೇಹವಿಲ್ಲ ಎಂದರು.
ಆಯುರ್ವೇದದ ಮೇಲಿನ ದಾಳಿ ಇಡೀ ಭಾರತದ ಮೇಲಿನ ದಾಳಿಯಾಗಿದೆ. ಅದು ತಡೆಗಟ್ಟಲು ಸರ್ಕಾರ ಕ್ರಮ ವಹಿಸಬೇಕು. ಹಿರಿಯ ವೈದ್ಯರು ತಮ್ಮ ಪಾರಂಪರಿಕ ಜ್ಞಾನವನ್ನು ಮುಂದಿನ ಪೀಳಿಗೆಗೆ ಹೇಳಿಕೊಡಬೇಕು. ಯಾವುದೇ ಕಾರಣಕ್ಕೂ ಮುಚ್ಚಿಡಬಾರದು ಎಂದು ತಿಳಿ ಹೇಳಿದರು.
ಈ ಸಂದರ್ಭದಲ್ಲಿ ಚನ್ನಬಸವಂತ ರೆಡ್ಡಿ, ವೈದ್ಯ ಹಾದಿಮನಿ ದಾವಣಗೇರೆ, ಹರೀಶ್ ಸಾಮುಗ್, ಗೋಪಾಲಕೃಷ್ಣ, ವಿಶ್ವನಾಥ್ ಕಾಂಬಳೆ, ಮಲ್ಲಿಕಾರ್ಜುನಯ್ಯ, ವೈದ್ಯೆ ಸವಿತಾ ಧಾರವಾಡ್, ಬಸವರಾಜ್ ಗೋರನಳ್ಳಿ, ವೈದ್ಯ ಲಿಂಗಪ್ಪ ಮಡಿವಾಳ್, ಮಹಾರುದ್ರ ಡಾಕುಳಗೆ ಹಾಗೂ ಶಿವಶರಣಪ್ಪ ಗಣೇಶಪುರ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.







