Bidar | ವಿದ್ಯುತ್ ಅವಘಡ ತಡೆಗೆ ಕ್ರಮ ಕೈಗೊಳ್ಳದಿದ್ದರೆ ಹೋರಾಟ: ಭೀಮ್ ಆರ್ಮಿ ಎಚ್ಚರಿಕೆ

ಬೀದರ್: ಜಿಲ್ಲೆಯಲ್ಲಿ ವಿದ್ಯುತ್ ತಂತಿ ಕಳಚಿ ಬಿದ್ದು ಸಂಭವಿಸುತ್ತಿರುವ ಅವಘಡಗಳಿಂದ ಬಡ ಕೂಲಿ ಕಾರ್ಮಿಕರು ಪ್ರಾಣ ಕಳೆದುಕೊಳ್ಳುತ್ತಿರುವ ಘಟನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜೆಸ್ಕಾಂ ಇಲಾಖೆ ತಕ್ಷಣ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಜೆಸ್ಕಾಂ ಕಚೇರಿ ಎದುರು ಉಗ್ರ ಹೋರಾಟ ನಡೆಸಲಾಗುವುದು ಎಂದು ಇಂಡಿಯನ್ ನ್ಯಾಷನಲ್ ಭೀಮ್ ಆರ್ಮಿ ಎಚ್ಚರಿಕೆ ನೀಡಿದೆ.
ಈ ಕುರಿತು ಜೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದ ಸಂಘಟನೆಯ ಮುಖಂಡರು, ಜಿಲ್ಲೆಯಲ್ಲಿ ವಿದ್ಯುತ್ ಕಂಬಗಳು, ತಂತಿಗಳು ಹಾಗೂ ಇನ್ಸುಲೇಟರ್ಗಳು ಶಿಥಿಲಗೊಂಡಿರುವುದರಿಂದ ನಿರಂತರವಾಗಿ ಅವಘಡಗಳು ಸಂಭವಿಸುತ್ತಿದ್ದು, ಇದಕ್ಕೆ ಇಲಾಖೆಯ ನಿರ್ಲಕ್ಷ್ಯವೇ ಕಾರಣವಾಗಿದೆ ಎಂದು ಆರೋಪಿಸಿದರು.
ಇತ್ತೀಚೆಗೆ ಬೀದರ್ ದಕ್ಷಿಣ ಕ್ಷೇತ್ರದ ಮನ್ನಳ್ಳಿ ಗ್ರಾಮದಲ್ಲಿ ವಿದ್ಯುತ್ ತಂತಿ ಕಳಚಿ ಬಿದ್ದ ಪರಿಣಾಮ ದಲಿತ ಕುಟುಂಬದ ದಂಪತಿ ಮೃತಪಟ್ಟಿದ್ದರು. ಭಾಲ್ಕಿ ತಾಲೂಕಿನ ಮಳಚಾಪೂರ್, ಕಮಠಾಣ, ಮದಕಟ್ಟಿ, ಅಂಬೇಸಾಂಗವಿ ಹಾಗೂ ಹುಮನಾಬಾದ್ ತಾಲೂಕಿನ ಉಡಮನಳ್ಳಿ ಗ್ರಾಮಗಳಲ್ಲಿಯೂ ವಿದ್ಯುತ್ ಅವಘಡಗಳಿಗೆ ಹಲವು ಬಡ ಕೂಲಿ ಕಾರ್ಮಿಕರು ಬಲಿಯಾಗಿರುವುದನ್ನು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಹಳೆಯ ವಿದ್ಯುತ್ ಕಂಬಗಳು, ಶಿಥಿಲಗೊಂಡ ತಂತಿಗಳು ಹಾಗೂ ದುರಸ್ತಿಗೆ ಒಳಪಡದ ಇನ್ಸುಲೇಟರ್ಗಳನ್ನು ತಕ್ಷಣ ಬದಲಾಯಿಸಬೇಕು. ಹಿರಿಯ ಅಧಿಕಾರಿಗಳು ನಿರಂತರ ಪರಿಶೀಲನೆ ನಡೆಸಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಜಾರಿಗೊಳಿಸಿದರೆ ಮಾತ್ರ ಇಂತಹ ಅವಘಡಗಳನ್ನು ತಡೆಯಲು ಸಾಧ್ಯ ಎಂದು ಒತ್ತಾಯಿಸಿದರು.
ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೆ ಇಲಾಖೆಯ ನಿರ್ಲಕ್ಷ್ಯ ಮುಂದುವರಿದರೆ ಜೆಸ್ಕಾಂ ಕಚೇರಿ ಎದುರು ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಇಂಡಿಯನ್ ನ್ಯಾಷನಲ್ ಭೀಮ್ ಆರ್ಮಿ ಎಚ್ಚರಿಕೆ ನೀಡಿದೆ.
ಈ ಸಂದರ್ಭದಲ್ಲಿ ಸಂಸ್ಥಾಪಕ ರಾಜ್ಯಾಧ್ಯಕ್ಷ ದೀಲಿಪಕುಮಾರ್ ವರ್ಮಾ, ರಾಜ್ಯ ಉಪಾಧ್ಯಕ್ಷ ಅಶೋಕ್ ಭಾವಿದೊಡ್ಡಿ, ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜಶೇಖರ್ ಶೇರಿಕಾರ್, ಬೀದರ್ ದಕ್ಷಿಣ ತಾಲೂಕು ಅಧ್ಯಕ್ಷ ಶ್ರೀಕಾಂತ್ ಸಾಗರ್, ಸದಸ್ಯ ಮಿಥುನ್ ವರ್ಮಾ, ಜಿಲ್ಲಾ ಗೌರವಾಧ್ಯಕ್ಷ ವಿಜಯಕುಮಾರ್ ಮೇತ್ರೆ, ಬೀದರ್ ದಕ್ಷಿಣ ತಾಲೂಕು ಉಪಾಧ್ಯಕ್ಷ ಅನೀಲಕುಮಾರ್ ಬಾಜಿ ಹಾಗೂ ಯುವ ಮುಖಂಡ ಸಂದೀಪ್ ಕಟ್ಟಿಮನಿ ಉಪಸ್ಥಿತರಿದ್ದರು.






