Bidar | ಬೀದಿ ವ್ಯಾಪಾರಿಗಳ ಶುಲ್ಕ ಹೆಚ್ಚಳ ಖಂಡಿಸಿ ಬಿಜೆಪಿ ಪ್ರತಿಭಟನೆ
ಬಡ ವ್ಯಾಪಾರಿಗಳ ಮೇಲೆ ಹೆಚ್ಚುವರಿ ಶುಲ್ಕದ ಹೊರೆ ಹಾಕಬೇಡಿ : ಸೋಮನಾಥ್ ಪಾಟೀಲ್

ಬೀದರ್: ಬೀದಿ ವ್ಯಾಪಾರಿಗಳಿಂದ ನಗರ ಪಾಲಿಕೆ ವಸೂಲಿ ಮಾಡುತ್ತಿದ್ದ ಶುಲ್ಕವನ್ನು 20 ರೂ. ನಿಂದ 60 ರೂ. ಗೆ ಏರಿಸಿರುವುದನ್ನು ವಿರೋಧಿಸಿ ಭಾರತೀಯ ಜನತಾ ಪಕ್ಷದ ವತಿಯಿಂದ ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ನಗರದ ಗಣೇಶ್ ಮೈದಾನದಿಂದ ಮಹಾನಗರ ಪಾಲಿಕೆ ಕಚೇರಿವರೆಗೆ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿ, ಶುಲ್ಕ ಹೆಚ್ಚಳವನ್ನು ಕೂಡಲೇ ಹಿಂಪಡೆಯುವಂತೆ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ್ ಪಾಟೀಲ್, ಬಡ ಬೀದಿ ವ್ಯಾಪಾರಿಗಳಿಂದ ದಿನಕ್ಕೆ 60 ರೂ. ಶುಲ್ಕ ವಸೂಲಿ ಮಾಡುವುದು ಅನ್ಯಾಯವಾಗಿದೆ ಎಂದು ಹೇಳಿದರು. ಶುಲ್ಕ ವಸೂಲಿ ಮಾಡುವ ಅಧಿಕಾರ ಯಾರಿಗೆ ನೀಡಲಾಗಿದೆ, ಟೆಂಡರ್ ಪ್ರಕ್ರಿಯೆ ಹೇಗೆ ನಡೆದಿದೆ, ಎಷ್ಟು ಮೊತ್ತಕ್ಕೆ ಟೆಂಡರ್ ನೀಡಲಾಗಿದೆ ಹಾಗೂ ವ್ಯಾಪಾರಿಗಳಿಂದ ಎಷ್ಟು ಹಣ ವಸೂಲಿ ಮಾಡಲಾಗುತ್ತಿದೆ ಎಂಬುದನ್ನು ನಗರ ಪಾಲಿಕೆ ಅಧಿಕಾರಿಗಳು ಸಾರ್ವಜನಿಕರಿಗೆ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.
ಕೇವಲ ಸಚಿವರೊಬ್ಬರನ್ನೇ ಈ ವಿಚಾರದಲ್ಲಿ ಹೊಣೆಗಾರರನ್ನಾಗಿ ಮಾಡುವುದು ಸರಿಯಲ್ಲ. ನಗರ ಪಾಲಿಕೆ ಅಧಿಕಾರಿಗಳಿಗೂ ಸಮಾನ ಜವಾಬ್ದಾರಿ ಇದೆ ಎಂದು ಅವರು ಆರೋಪಿಸಿದರು.
ಶುಲ್ಕ ವಸೂಲಿ ವ್ಯವಸ್ಥೆಯಲ್ಲಿ ಸಂಪೂರ್ಣ ಪಾರದರ್ಶಕತೆ ಇರಬೇಕು. ನಕಲಿ ರಸೀದಿ ಮೂಲಕ ಹಣ ವಸೂಲಿ ಮಾಡಲಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಬೇಕು. ವ್ಯಾಪಾರಿಗಳಿಂದ ಹಣ ಪಡೆಯುವಾಗ ಅಧಿಕೃತ ರಸೀದಿ ನೀಡುವುದರ ಜೊತೆಗೆ, ಸಾಧ್ಯವಾದರೆ ಕ್ಯೂಆರ್ ಕೋಡ್ ಮೂಲಕ ಡಿಜಿಟಲ್ ಪಾವತಿ ವ್ಯವಸ್ಥೆ ಜಾರಿಗೆ ತರಬೇಕು ಎಂದು ಆಗ್ರಹಿಸಿದರು.
ನಗರದ ವಾಕಿಂಗ್ ಸ್ಟ್ರೀಟ್ ಸೇರಿದಂತೆ ವಿವಿಧ ವ್ಯಾಪಾರ ಪ್ರದೇಶಗಳಲ್ಲಿ ಬೀದಿ ವ್ಯಾಪಾರಿಗಳಿಗೆ ಸೂಕ್ತ ಸ್ಥಳಾವಕಾಶ ಕಲ್ಪಿಸಬೇಕು. ವಾಹನ ಸಂಚಾರ ಮತ್ತು ವ್ಯಾಪಾರ ವ್ಯವಸ್ಥೆಯನ್ನು ಸಮರ್ಪಕವಾಗಿ ನಿರ್ವಹಿಸಿ, ವ್ಯಾಪಾರಿಗಳ ಜೀವನೋಪಾಯಕ್ಕೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಬಡ ಬೀದಿ ವ್ಯಾಪಾರಿಗಳ ಮೇಲೆ ಹೆಚ್ಚುವರಿ ಶುಲ್ಕದ ಹೊರೆ ಹಾಕಬಾರದು. 60 ರೂ. ಶುಲ್ಕ ವಸೂಲಿ ಮಾಡುವ ಕ್ರಮವನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿ ಬಳಿಕ ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ನಗರ ಘಟಕದ ಅಧ್ಯಕ್ಷ ಶಶಿ ಹೊಸಳ್ಳಿ, ಬಾಬು ವಾಲಿ, ಈಶ್ವರ್ಸಿಂಗ್ ಠಾಕೂರ್, ಸುಭಾಷ್ ಮಡಿವಾಳ್, ಗಣೇಶ್ ಭೋಸ್ಲೆ, ಬಾಬು ಮಲ್ಕಾಪೂರೆ, ರೋಷನ್ ವರ್ಮಾ, ಪೀರಪ್ಪ ಔರಾದೆ, ಶ್ರೀನಿವಾಸ್ ಚೌದ್ರಿ, ರಾಜಶೇಖರ್ ನಾಗಮೂರ್ತಿ, ಹನಮಂತ್ ಬುಳ್ಳಾ, ದೀಪಕ್ ಗಾದಗೆ, ನರೇಶ್ ಗೌಳಿ, ಅಶೋಕ್ ಕರಂಜಿ, ನವೀನ್ ಚಿಟ್ಟಾ, ಗೊರಖನಾಥ್ ಗೌಳಿ, ನಿಲೇಶ್ ರಕ್ಷಾಳ್, ಮಲ್ಲಿಕಾರ್ಜುನ್ ನಂದಗಾಂವಕರ್, ಸಂಗಮೇಶ್, ಅಂಬರೀಷ್ ಕಾಮಠಾಣೆ, ಆತ್ಮರಾಮ್, ಬಸವ ಮುಲಗೆ, ವಿರೇಶ್ ಸ್ವಾಮಿ, ನಿರಂಜನ್, ಶಶಿಕಾಂತ್ ಹಾಗೂ ಜಗದೀಶ್ ಸೇರಿದಂತೆ ಬಿಜೆಪಿ ಕಾರ್ಯಕರ್ತರು, ಬೀದಿಬದಿ ವ್ಯಾಪಾರಿಗಳು ಉಪಸ್ಥಿತರಿದ್ದರು.






