ಬೀದರ್ | ಡಿಸಿಸಿ ಬ್ಯಾಂಕ್ನಿಂದ ಬಿಎಸ್ಎಸ್ಕೆ ಕಾರ್ಖಾನೆ ಹರಾಜು ಪ್ರಕ್ರಿಯೆ : ರೈತರಿಂದ ಪ್ರತಿಭಟನೆ

ಬೀದರ್ : ಡಿಸಿಸಿ ಬ್ಯಾಂಕ್ನಿಂದ ಬಿಎಸ್ಎಸ್ಕೆ ಕಾರ್ಖಾನೆ ಹರಾಜು ಪ್ರಕ್ರಿಯೆ ವಿರೋಧಿಸಿ ನಗರದ ಡಿಸಿಸಿ ಬ್ಯಾಂಕ್ ಎದುರು ರೈತರು ಬುಧವಾರ ಪ್ರತಿಭಟನೆ ನಡೆಸಿದರು.
ನೂರಾರು ರೈತರು ಘೋಷಣೆಗಳು ಕೂಗುತ್ತಾ ಡಿಸಿಸಿ ಬ್ಯಾಂಕ್ ಗೇಟ್ ಹತ್ತಿರ ಬಂದು ಬ್ಯಾಂಕ್ ಒಳಗಡೆ ನುಗ್ಗಲು ಪ್ರಯತ್ನಿಸಿದಾಗ ಪೊಲೀಸರು ಅವರನ್ನು ತಡೆಯಲು ಹರಸಾಹಸಪಟ್ಟರು. ಆದರೆ, ರೈತರು ಯಾವುದನ್ನೂ ಲೆಕ್ಕಿಸದೆ ಬ್ಯಾಂಕ್ ಗೇಟ್ ಅನ್ನು ತಳ್ಳಿ ಬ್ಯಾಂಕ್ನ ಒಳಗಡೆ ನುಗ್ಗಿ ಘೋಷಣೆಗಳು ಕೂಗಿದರು.
ಈ ವೇಳೆ ರೈತ ಮುಖಂಡ ಶ್ರೀಮಂತ್ ಅವರು ಮಾತನಾಡಿ, ನಮ್ಮ ಜಿಲ್ಲೆಯಲ್ಲಿಯೇ ಅತ್ಯಂತ ಹಳೆಯ ಕಾರ್ಖಾನೆ ಎಂದರೆ ಅದು ಬಿಎಸ್ಎಸ್ಕೆ ಕಾರ್ಖಾನೆಯಾಗಿದೆ. ಆ ಕಾರ್ಖಾನೆಯಿಂದಲೇ ಡಿಸಿಸಿ ಬ್ಯಾಂಕ್ ಅಭಿವೃದ್ಧಿಯಾಗಿದೆ. ಆದರೆ, ಕಾರ್ಖಾನೆಯ ಆಡಳಿತ ಮಂಡಳಿಯವರು ಕಾರ್ಖಾನೆಯನ್ನು ನುಂಗಿ ನೀರು ಕುಡಿದಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.
ಹರಾಜು ಪ್ರಕ್ರಿಯೆ ಮುಂದೂಡುವುದು ಬೇಡ, ಸರ್ಕಾರದ ಆದೇಶದಂತೆ ಅದನ್ನು ಸಂಪೂರ್ಣವಾಗಿ ರದ್ದು ಮಾಡಬೇಕು. ಇಲ್ಲದಿದ್ದರೆ ಹರಾಜು ಪ್ರಕ್ರಿಯೆ ನಡೆಯುತ್ತಿದ್ದರೆ ನಾವು ಮತ್ತೆ ಹೋರಾಟ ಮಾಡಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.
ರೈತರ ಹೋರಾಟಕ್ಕೆ ಶಾಸಕರಾದ ಸಿದ್ಧು ಪಾಟೀಲ್, ಡಾ.ಶೈಲೇಂದ್ರ ಬೆಲ್ದಾಳೆ ಸೇರಿದಂತೆ ಇತರರು ಬೆಂಬಲ ಸೂಚಿಸಿದರು. ರೈತರ ಹೋರಾಟಕ್ಕೆ ಮಣಿದ ಡಿಸಿಸಿ ಬ್ಯಾಂಕ್ನ ಆಡಳಿತ ಅಧಿಕಾರಿಗಳು ಹರಾಜು ಪ್ರಕ್ರಿಯೆಯನ್ನು ಮುಂದೂಡಿದರು.




