Bidar | ನಶೆಮುಕ್ತ ಯುವಜನರಿಂದ ಸಶಕ್ತ ಭಾರತ ನಿರ್ಮಾಣ ಸಾಧ್ಯ : ಡಾ.ವಿದ್ಯಾ ಪಾಟೀಲ್

ಬೀದರ್: ಯುವಜನತೆ ದುಷ್ಚಟ, ದುರ್ಗುಣ, ದುರಾಚಾರ, ದುರ್ಬುದ್ಧಿ, ದುರಹಂಕಾರ ಹಾಗೂ ದುರ್ವರ್ತನೆಗಳಿಂದ ದೂರ ಉಳಿದರೆ ದೇಶ ನಶೆಮುಕ್ತ ಹಾಗೂ ಸಶಕ್ತ ಭಾರತವಾಗಿ ರೂಪುಗೊಳ್ಳಲಿದೆ ಎಂದು ನೌಬಾದ್ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಪ್ರಾಧ್ಯಾಪಕಿ ಡಾ. ವಿದ್ಯಾ ಪಾಟೀಲ್ ಹೇಳಿದರು.
ನಗರದ ಜನವಾಡ ರಸ್ತೆಯಲ್ಲಿರುವ ಪ್ರಜಾಪಿತಾ ಬ್ರಹ್ಮಾಕುಮಾರಿಸ್ ಈಶ್ವರಿಯ ವಿಶ್ವವಿದ್ಯಾಲಯ ರಾಜಯೋಗ ಕೇಂದ್ರ ಪಾವನಧಾಮದಲ್ಲಿ ಗುರುವಾರ ನಶೆಮುಕ್ತ ಭಾರತ ಅಭಿಯಾನದಡಿ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕಾಗಿ ಹಮ್ಮಿಕೊಂಡಿದ್ದ ಪ್ರತಿಜ್ಞಾವಿಧಿ ಸ್ವೀಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.
ಒಳ್ಳೆಯ ಪ್ರಜಾಪ್ರಭುತ್ವದಲ್ಲಿ ನಾಯಕರನ್ನು ಪ್ರಶ್ನಿಸುವುದು ಅಗತ್ಯವಾದರೂ, ಇತ್ತೀಚಿನ ಪ್ರತಿಭಟನೆಗಳಲ್ಲಿ ಕೆಲ ಯುವಕರು ಬಳಸುತ್ತಿರುವ ಭಾಷೆ ಮತ್ತು ವರ್ತನೆ ಪೋಷಕರು ಹಾಗೂ ಶಿಕ್ಷಕರಲ್ಲಿ ಆತ್ಮಾವಲೋಕನಕ್ಕೆ ಕಾರಣವಾಗಿದೆ. ಮಕ್ಕಳಿಗೆ ಸರಿಯಾದ ಸಂಸ್ಕಾರ ನೀಡುವ ಜವಾಬ್ದಾರಿ ಹಿರಿಯರು ಮತ್ತು ಶಿಕ್ಷಕರ ಮೇಲಿದೆ. ಇಂದಿನ ಪರಿಸ್ಥಿತಿಯಲ್ಲಿ ಕಠಿಣ ಶಿಕ್ಷೆಗಿಂತ ಮಕ್ಕಳೊಂದಿಗೆ ಸ್ನೇಹಭಾವದಿಂದ ಬೆರೆತು, ತಮ್ಮ ಸಮಸ್ಯೆಗಳನ್ನು ಮುಕ್ತವಾಗಿ ಹಂಚಿಕೊಳ್ಳುವ ವಾತಾವರಣ ನಿರ್ಮಿಸುವುದು ಮುಖ್ಯ ಎಂದು ಅವರು ತಿಳಿಸಿದರು.
ಹಿಂದೆ ಧೂಮಪಾನ ಮತ್ತು ಮದ್ಯಪಾನವನ್ನಷ್ಟೇ ವ್ಯಸನ ಎಂದು ಪರಿಗಣಿಸಲಾಗುತ್ತಿತ್ತು. ಆದರೆ ಈಗ ಡ್ರಗ್ಸ್ಗಳ ಜೊತೆಗೆ ಮೊಬೈಲ್ ಫೋನ್ ಕೂಡ ದೊಡ್ಡ ವ್ಯಸನವಾಗಿ ಯುವಜನತೆಯನ್ನು ಕಾಡುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಬ್ರಹ್ಮಾಕುಮಾರಿಸ್ ಕೇಂದ್ರ ಪಾವನಧಾಮದ ಸಂಚಾಲಕಿ ಬಿ.ಕೆ. ಪ್ರತಿಮಾ ಬಹೆನ್ಜಿ ಮಾತನಾಡಿ, ಇಂದಿನ ಒತ್ತಡದ ಜೀವನದಲ್ಲಿ ನೆಮ್ಮದಿಗಾಗಿ ಅನೇಕರು ವಿವಿಧ ರೀತಿಯ ವ್ಯಸನಗಳಿಗೆ ಬಲಿಯಾಗುತ್ತಿದ್ದಾರೆ. ವ್ಯಸನವು ಕ್ಷಣಿಕವಾಗಿ ದುಃಖವನ್ನು ಮರೆಸಿದರೂ, ಅಂತಿಮವಾಗಿ ವ್ಯಕ್ತಿ, ಕುಟುಂಬ, ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯನ್ನು ಹಾಳುಮಾಡುತ್ತದೆ. ಕಷ್ಟಪಟ್ಟು ಸಂಪಾದಿಸಿದ ಹಣ ಆಸ್ಪತ್ರೆಗಳ ಪಾಲಾಗುವುದರ ಜೊತೆಗೆ ಸಮಾಜದಲ್ಲಿನ ಗೌರವಕ್ಕೂ ಧಕ್ಕೆ ಉಂಟಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ನೌಬಾದ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಪ್ರೊ. ಮನೋಜಕುಮಾರ್, ಕೇಂದ್ರದ ಹಿರಿಯ ರಾಜಯೋಗ ಶಿಕ್ಷಕಿ ಬಿ.ಕೆ ಗುರುದೇವಿ ಸೇರಿದಂತೆ ಕೇಂದ್ರದ ಸಹೋದರ, ಸಹೋದರಿಯರು ಉಪಸ್ಥಿತರಿದ್ದರು.






