ಬೀದರ್ | ವಂಚನೆ ಆರೋಪ : ಎನ್ಎಸ್ಎಸ್ಕೆ ಅಧ್ಯಕ್ಷ ಡಿ.ಕೆ.ಸಿದ್ರಾಮ್ ಬಂಧನ

ಬೀದರ್ : ನಗರದಲ್ಲಿರುವ ಡಿಸಿಸಿ ಬ್ಯಾಂಕಿಗೆ ಸುಳ್ಳು ಮಾಹಿತಿ ನೀಡಿ, ಸಾರ್ವಜನಿಕರ ಹಣ ದುರುಪಯೋಗ ಮಾಡಿಕೊಂಡ ಆರೋಪದಡಿ ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಡಿ.ಕೆ.ಸಿದ್ರಾಮ್ ಸೇರಿದಂತೆ ಏಳು ಜನರ ವಿರುದ್ಧ ಡಿಸಿಸಿ ಬ್ಯಾಂಕ್ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದು, ಇಂದು ಬೆಳಿಗ್ಗೆ ಡಿ.ಕೆ.ಸಿದ್ರಾಮ್ ಅವರನ್ನು ಜನವಾಡ ಪೊಲೀಸರು ಬಂಧಿಸಿದ್ದು, ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.
ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆಯು ಡಿಸಿಸಿ ಬ್ಯಾಂಕಿನಿಂದ ಸಾಲ ತೆಗೆದುಕೊಂಡಿತ್ತು. ಆದರೆ ಬ್ಯಾಂಕಿಗೆ ಸುಳ್ಳು ಮಾಹಿತಿ ನೀಡಿ, ಬ್ಯಾಂಕಿನಿಂದ ಹಣವನ್ನು ನವೀಕರಿಸಲಾಗಿದೆ. ಅದಲ್ಲದೇ ಕಾರ್ಖಾನೆ ಗೋದಾಮಿನಲ್ಲಿರುವ ಸಕ್ಕರೆ ಮಾರಾಟ ಮಾಡಲು ಬ್ಯಾಂಕಿನ ಅನುಮತಿ ಪಡೆಯಲಿಲ್ಲ. ಹಳೆ ಸಾಲ ಬಾಕಿ ಇರುವುದು ಗೊತ್ತಿದ್ದರೂ ಕೂಡ ಬ್ಯಾಂಕಿನ ಸಾಲ ಕಟ್ಟಿರಲಿಲ್ಲ. ಹಣವನ್ನು ಬ್ಯಾಂಕಿಗೆ ಕಟ್ಟದೆ ಬೇರೆ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ ಎಂದು ಡಿಸಿಸಿ ಅಧಿಕಾರಿಗಳು ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಅಧಕ್ಷ ಡಿ.ಕೆ.ಸಿದ್ರಾಮ್, ಮಾಜಿ ವ್ಯವಸ್ಥಾಪಕ ನಿರ್ದೇಶಕ ಅಪರಂಜ್ ಬಿ.ಎಸ್., ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಾಜನ್ ಮಲ್ಲಿಕಾರ್ಜುನ್, ಮಾಜಿ ಪ್ರಧಾನ ವ್ಯವಸ್ಥಾಪಕ ಚನ್ನಬಸಯ್ಯ ತಂದೆ ಹಾವಯ್ಯ ಸ್ವಾಮಿ, ಮಾಜಿ ಉಪ ಪ್ರಧಾನ ವ್ಯವಸ್ಥಾಪಕ ಸದಾಶಿವ, ಮಾಜಿ ವ್ಯವಸ್ಥಾಪಕ ಸೈಯದ್ ರಾಹಿಲ್ ಅಹಮ್ಮದ್ ಹಾಗೂ ಎನ್ ಎಸ್ ಎಸ್ ಕೆ ಇತರ ನಿರ್ದೇಶಕರ ವಿರುದ್ಧ ಜನವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.