ಬೀದರ್ | ಚೆಕ್ ಡ್ಯಾಂ ಯೋಜನೆಯಲ್ಲಿ ಭ್ರಷ್ಟಾಚಾರ ಆರೋಪ : ಕೃಷಿ ಅಧಿಕಾರಿಗಳ ಅಮಾನತಿಗೆ ಆಗ್ರಹ

ಬೀದರ್ : ಭಾಲ್ಕಿ ತಾಲೂಕಿನ ಕೃಷಿ ಇಲಾಖೆ ವ್ಯಾಪ್ತಿಯ ಮೇಹಕರ್ ಗ್ರಾಮದಲ್ಲಿ ಜಲಾಶಯ (ಚೆಕ್ ಡ್ಯಾಂ) ಯೋಜನೆಯಡಿ ಭಾರೀ ಅಕ್ರಮ ಹಾಗೂ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಲಾಗಿದ್ದು, ಈ ಸಂಬಂಧ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ್ ಮೇತ್ರೆ ಮತ್ತು ಕೃಷಿ ಅಧಿಕಾರಿ ರಾಜೇಂದ್ರ ಯಾಕತಪೂರೆ ವಿರುದ್ಧ ತನಿಖೆ ನಡೆಸಿ ಅವರನ್ನು ತಕ್ಷಣವೇ ಅಮಾನತು ಮಾಡುವಂತೆ ಇಂಡಿಯನ್ ನ್ಯಾಷನಲ್ ಭೀಮ್ ಆರ್ಮಿ ಸಂಘಟನೆಯಿಂದ ಆಗ್ರಹಿಸಲಾಗಿದೆ.
ಸೋಮವಾರ ಜಂಟಿ ಕೃಷಿ ನಿರ್ದೇಶಕರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ಚೆಕ್ ಡ್ಯಾಂ ಕಾಮಗಾರಿಗೆ ಸೂಕ್ತ ಸ್ಥಳ ಆಯ್ಕೆ ಮಾಡದೇ, ಸಿಮೆಂಟ್ ಕಡಿಮೆ ಬಳಸಿ ಸರ್ಕಾರದ ಅನುದಾನ ದುರುಪಯೋಗ ಮಾಡಲಾಗಿದೆ. ಸುಮಾರು 2 ಕೋಟಿ ರೂ. ಅನುದಾನವನ್ನು ಉದ್ದೇಶಪೂರ್ವಕವಾಗಿ ಡ್ರಾ ಮಾಡಿ ತ್ವರಿತವಾಗಿ ಕಾಮಗಾರಿ ಮುಗಿಸಿರುವ ಆರೋಪವೂ ಕೇಳಿ ಬಂದಿದೆ. ಗುತ್ತಿಗೆದಾರರಿಂದ ಲಂಚ ಪಡೆಯದೇ ಕಾಮಗಾರಿ ನೀಡುವುದಿಲ್ಲ ಎನ್ನುವ ನೇರ ಬೇಡಿಕೆಯೂ ಇದ್ದು, ಪ್ರತಿ ಚೆಕ್ ಡ್ಯಾಂ ಕೆಲಸಕ್ಕೆ ಲಕ್ಷಾಂತರ ರೂ. ಅಕ್ರಮ ಹಣ ವಸೂಲಿ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಹಿಂದೆ ಔರಾದ್ ತಾಲೂಕಿನಲ್ಲಿಯೂ ಇದೇ ರೀತಿಯ ಭ್ರಷ್ಟಾಚಾರ ನಡೆದಿತ್ತು ಎಂಬ ಆರೋಪವಿದ್ದು, ಪ್ರಸ್ತುತ ನಡೆಯುತ್ತಿರುವ ಕಾಮಗಾರಿಯನ್ನು ತಕ್ಷಣ ಸ್ಥಗಿತಗೊಳಿಸಿ ಮೂರನೇ ಪಕ್ಷದ ಮೂಲಕ ಗುಣಮಟ್ಟ ಪರಿಶೀಲನೆ ನಡೆಸಬೇಕು. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಲೋಕಾಯುಕ್ತರಿಗೆ ದೂರು ಸಲ್ಲಿಸುವುದರ ಜೊತೆಗೆ, ಸಂಬಂಧಿತ ಸಂಘಟನೆಗಳ ವತಿಯಿಂದ ಸಾಂಕೇತಿಕ ಧರಣಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ಈ ಸಂದರ್ಭದಲ್ಲಿ ಇಂಡಿಯನ್ ನ್ಯಾಷನಲ್ ಭೀಮ್ ಆರ್ಮಿ ಸಂಘಟನೆಯ ರಾಜ್ಯ ಸಂಸ್ಥಾಪಕ ರಾಜ್ಯಾಧ್ಯಕ್ಷ ದೀಲಿಪಕುಮಾರ್ ವರ್ಮಾ, ರಾಜ್ಯ ಉಪಾಧ್ಯಕ್ಷ ಅಶೋಕ್ ಭಾವಿದೊಡ್ಡಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಭಾವಿದೊಡ್ಡಿ, ಅನೀಲಕುಮಾರ್ ಬಾಜಿ, ಭೀಮರಾವ್ ಖಂದಾರೆ, ಜಗನ್ನಾಥ್ ಹೊನ್ನಾ, ಭಗತ್ ಎಸ್.ಶಿಂಧೆ ಹಾಗೂ ಸಚೀನ್ ಶಿಂಧೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.







