ಬೀದರ್ | ಪ್ರತಿ ಎಕರೆಗೆ 25 ಸಾವಿರ ರೂ. ಪರಿಹಾರ ನೀಡಲು ಒತ್ತಾಯಿಸಿ ರೈತರಿಂದ ಪ್ರತಿಭಟನೆ

ಬೀದರ್ : ಅತಿವೃಷ್ಟಿಯಿಂದ ಬೆಳೆಗಳು ಹಾನಿಯಾಗಿದ್ದು, ಅತೀ ಶೀಘ್ರದಲ್ಲಿ ಎಲ್ಲಾ ರೈತರ ಖಾತೆಗಳಿಗೆ ಪ್ರತಿ ಏಕರೆ ಭೂಮಿಗೆ 25 ಸಾವಿರ ರೂ. ಬೆಳೆ ಹಾನಿ ಪರಿಹಾರ ಧನ ಜಮೆ ಮಾಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಪ್ರತಿಭಟನೆ ನಡೆಸಲಾಯಿತು.
ಇಂದು ನಗರದ ಅಂಬೇಡ್ಕರ್ ವೃತ್ತದಲ್ಲಿ ರೈತರು ಅತಿವೃಷ್ಟಿಯಿಂದ ಹಾಳಾಗಿದ್ದ ಬೆಳೆ ತಂದು ಪರಿಹಾರಕ್ಕಾಗಿ ಘೋಷಣೆ ಕೂಗಿದರು. ನಂತರ ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ಮೂಲಕ ಸಾಗಿದರು.
ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ಬೀದರ್ ಜಿಲ್ಲೆಯಲ್ಲಿ ಸುಮಾರು 2 ತಿಂಗಳಿಂದ ಸತತವಾಗಿ ಮಳೆಯಾಗುತ್ತಿದ್ದು, ಇದರಿಂದ ಹೆಸರು, ಉದ್ದು, ಸೋಯಾಬಿನ್, ತೊಗರಿ, ಹತ್ತಿ, ತೋಟಗಾರಿಕೆ ಬೆಳೆ, ನದಿ ಭಾಗದಲ್ಲಿನ ಕಬ್ಬು ಸೇರಿದಂತೆ ಮುಂತಾದ ಬೆಳೆಗಳು ನಷ್ಟವಾಗಿದೆ. ಅನೇಕ ಕಡೆಗಳಲ್ಲಿ ಕೆರೆಗಳು ತುಂಬಿ ಒಡೆದಿವೆ. ಜಾನುವಾರುಗಳು, ನೀರಿಗೆ ಕೊಚ್ಚಿಕೊಂಡು ಹೋಗಿ ಸಾವನ್ನಪ್ಪಿವೆ. ಹಳ್ಳಿಗಳಲ್ಲಿ ಮನೆಗಳು ಕುಸಿದಿವೆ. ನಿರಂತರ ಮಳೆಯಿಂದ ಹೊಲದಲ್ಲಿ ಕೆಲಸ ಮಾಡಲು ಬಿಡದ ಪರಿಣಾಮವಾಗಿ ರಬ್ಬಿ ಹಂಗಾಮಿನ ಬೆಳೆಗಳ ಮೇಲೂ ಕೂಡ ಕೆಟ್ಟ ಪರಿಣಾಮ ಬೀರಲಿದೆ. ಹಾಗಾಗಿ ಈಗಲಾದರೂ ಬೀದರ್ ಜಿಲ್ಲೆ ಹಸಿರು ಬರ ಜಿಲ್ಲೆ ಎಂದು ಘೋಷಣೆ ಮಾಡಿ, ಅತೀ ಶೀಘ್ರದಲ್ಲಿ ಪ್ರತಿ ಎಕರೆಗೆ ರೈತರ ಖಾತೆಗೆ 25 ಸಾವಿರ ರೂ. ಪರಿಹಾರ ಹಣನೀಡಬೇಕು ಎಂದು ಒತ್ತಾಯಿಸಲಾಗಿದೆ.
ಜಿಲ್ಲೆಯ ಕೃಷಿ ಅಧಿಕಾರಿ, ತಹಶೀಲ್ದಾರ್, ಜಿಲ್ಲಾಧಿಕಾರಿ, ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳಿಂದ ಬೆಳೆ ಹಾನಿ ಸಮೀಕ್ಷೆ ಮುಗಿದಿದೆ. ಆದರೆ, ಇಲ್ಲಿಯವರೆಗೆ ರೈತರ ಖಾತೆಗಳಿಗೆ ಬೆಳೆ ಹಾನಿ ಪರಿಹಾರ ಜಮೆಯಾಗದಿರುವುದು ವಿಷಾದದ ಸಂಗತಿಯಾಗಿದೆ ಎಂದು ಆಕ್ರೋಶ ಹೊರ ಹಾಕಲಾಗಿದೆ.
ಹಾನಿ ಪರಿಹಾರ ಒದಗಿಸಿ, ರೈತರ ಹಿತ ಕಾಪಾಡಬೇಕು. ಬೆಳೆ ವಿಮೆ, ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿಯಲ್ಲಿ ಬೆಳೆವಿಮೆ ಮಾಡಿದ ಎಲ್ಲಾ ರೈತರಿಗೆ ಕೂಡಲೇ ಬೆಳೆ ವಿಮೆ ಪರಿಹಾರ ಒದಗಿಸಬೇಕು. ಹಾಗೆಯೇ ನಿರಂತರ ಮಳೆಯಿಂದ ಖರೀಫ್ ಮತ್ತು ರಬ್ಬಿ ಹಂಗಾಮಿನ ಬೆಳೆಗಳ ಮೇಲೆ ಕೆಟ್ಟ ಪರಿಣಾಮ ಬಿದ್ದಿರುವುದರಿಂದ ರೈತ ಕಂಗಾಲಾಗಿದ್ದಾರೆ. ಬೆಳೆ ಸಾಲ ಕಟ್ಟಲು ಸಮರ್ಥನಿರುವುದಿಲ್ಲದರಿಂದ ಎಲ್ಲಾ ರೈತರ ಸಂಪೂರ್ಣ ಬೆಳೆ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಲಾಗಿದೆ.
ನಮ್ಮ ಈ ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಂಬರುವ ದಿನಗಳಲ್ಲಿ ಬೀದಿಗಿಳಿದು ಉಗ್ರವಾದ ಹೋರಾಟ ಮಾಡಲಾಗುವುದು. ಹೋರಾಟದಲ್ಲಿ ಯಾವುದೇ ಅಹಿತಕರ ಘಟನೆಯಾದರೆ ತಾವೇ ಜವಾಬ್ದಾರರಾಗುತ್ತೀರಿ ಎಂದು ಎಚ್ಚರಿಕೆ ನೀಡಲಾಗಿದೆ.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಉಪಾಧ್ಯಕ್ಷ ಚಂದ್ರಶೇಖರ್ ಜಮಖಂಡಿ, ಜಿಲ್ಲಾಧ್ಯಕ್ಷ ಸಿದ್ರಾಮಪ್ಪ ಆಣದೂರೆ, ಜಿಲ್ಲಾ ಕಾರ್ಯಾಧ್ಯಕ್ಷ ಶ್ರೀಮಂತ್ ಬಿರಾದಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಯಾನಂದ್ ಸ್ವಾಮಿ ಸಿರ್ಸಿ, ಔರಾದ್ ತಾಲೂಕು ಅಧ್ಯಕ್ಷ ಪ್ರಕಾಶ್ ಬಾವಗೆ, ಮಹಿಳಾ ಜಿಲ್ಲಾಧ್ಯಕ್ಷೆ ಶೋಭಾವತಿ ಕಾರಬಾರಿ, ಮಹಿಳಾ ಕಾರ್ಯಧ್ಯಕ್ಷೆ ಸುನೀತಾ ನೀಲಕಂಠರಾವ್ ಹಾಗೂ ಬಸವರಾಜ್ ಸೋನಾಳ್ ಸೇರಿದಂತೆ ಅನೇಕ ರೈತರು ಉಪಸ್ಥಿತರಿದ್ದರು.







