Bidar | ಬ್ರಿಮ್ಸ್ ಅವ್ಯವಸ್ಥೆ ಸರಿಪಡಿಸದಿದ್ದರೆ ಹೋರಾಟ : ಸ್ವಾಮಿದಾಸ್ ಕೆಂಪೆನೋರ್

ಬೀದರ್: ರೋಗಿಗಳ ಚಿಕಿತ್ಸೆಗೆ ಸರ್ಕಾರ ಕೋಟಿ ಕೋಟಿ ರೂಪಾಯಿ ವೆಚ್ಚದಲ್ಲಿ ಒದಗಿಸಿರುವ ವೈದ್ಯಕೀಯ ಉಪಕರಣಗಳು ಬ್ರಿಮ್ಸ್ ಆಸ್ಪತ್ರೆಯಲ್ಲಿ ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ. ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಬಹುಜನ ಸೇವಾ ಸಮಿತಿಯ ರಾಜ್ಯ ಸಂಚಾಲಕ ಸ್ವಾಮಿದಾಸ್ ಕೆಂಪೆನೋರ್ ಆಗ್ರಹಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಉಸ್ತುವಾರಿ ಸಚಿವರು ಕ್ಯಾಥ್ಲ್ಯಾಬ್ ಉದ್ಘಾಟಿಸಿ ಒಂದು ವರ್ಷ ಕಳೆದರೂ ಜನಸಾಮಾನ್ಯರಿಗೆ ಅದರ ಪ್ರಯೋಜನ ದೊರೆಯುತ್ತಿಲ್ಲ ಎಂದು ಆರೋಪಿಸಿದರು.
ಡಯಾಲಿಸಿಸ್ ವಿಭಾಗವೂ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಈ ನಡುವೆ ಆಸ್ಪತ್ರೆಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಎಸಿ ಮತ್ತು ಕಾಪರ್ ತಂತಿ ಕಳವು ಪ್ರಕರಣಗಳು ನಡೆದಿರುವುದು ಆಸ್ಪತ್ರೆಯ ಆಡಳಿತ ವೈಫಲ್ಯವನ್ನು ತೋರಿಸುತ್ತದೆ ಎಂದು ದೂರಿದರು.
“ರೋಗಿಗಳು ಚಿಕಿತ್ಸೆಗಾಗಿ ಹೈದರಾಬಾದ್ ಮತ್ತು ಸೋಲಾಪುರಕ್ಕೆ ಅಲೆದಾಡಬಾರದು ಎಂಬ ಉದ್ದೇಶದಿಂದಲೇ ಬ್ರಿಮ್ಸ್ನಲ್ಲಿ ಕ್ಯಾಥ್ಲ್ಯಾಬ್, ಡಯಾಲಿಸಿಸ್ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಆದರೆ ಅವು ಜನರಿಗೆ ತಲುಪದೇ ಇರುವುದರಿಂದ ಜನಪ್ರತಿನಿಧಿಗಳ ಘೋಷಣೆಗಳು ಕೇವಲ ಭಾಷಣಗಳಿಗೆ ಸೀಮಿತವಾಗಿವೆ” ಎಂದು ಟೀಕಿಸಿದರು.
ಪ್ರಸ್ತುತ ಬ್ರಿಮ್ಸ್ ನಿರ್ದೇಶಕಿ ಡಾ. ಶಾಂತಲಾ ಕೌಜಲಗಿ ಅವರನ್ನು ಬದಲಿಸಿ ಅನುಭವಸಂಪನ್ನ ನಿರ್ದೇಶಕರನ್ನು ನೇಮಕ ಮಾಡಬೇಕು. ತಕ್ಷಣ ಕ್ಯಾಥ್ಲ್ಯಾಬ್ ಆರಂಭಿಸಿ, ವೈದ್ಯರು ಆಸ್ಪತ್ರೆಯಲ್ಲೇ ಲಭ್ಯರಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಅನಧಿಕೃತವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಜೈಸಿಂಗ್ ಅವರನ್ನು ವಜಾಗೊಳಿಸಬೇಕು. ಎಸಿ ಮತ್ತು ಕಾಪರ್ ತಂತಿ ಕಳವು ಪ್ರಕರಣದ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಆಸ್ಪತ್ರೆಯ ಎಲ್ಲಾ ಸಿಸಿ ಕ್ಯಾಮರಾಗಳನ್ನು ಕಾರ್ಯನಿರ್ವಹಣೆಯಲ್ಲಿರಿಸುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಬಹುಜನ ಸೇವಾ ಸಮಿತಿ ಜಿಲ್ಲಾ ಉಪಾಧ್ಯಕ್ಷ ಶ್ರೀನಾಥ್ ದರ್ಗಾ, ಸಮಿತಿಯ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಕಮಲಹಾಸನ್, ಕಲ್ಯಾಣ ಕರ್ನಾಟಕ ನಿರ್ಮಾಣ ಸೇನೆಯ ಜಿಲ್ಲಾಧ್ಯಕ್ಷ ಡಾ. ಜಾನಿಶ್ ಇಸ್ಲಾಂಪುರ್, ಸೇನೆಯ ಜಿಲ್ಲಾ ಉಪಾಧ್ಯಕ್ಷ ಡಾನಿಯಲ್ ಮಂಗಲಪೇಟ್, ಪ್ರಮುಖರಾದ ನಾಗನಾಥ್ ಭೂರೆ, ನಾಗಣ್ಣ ಕೌಠಾ ಹಾಗೂ ಅಮಿತ್ ಸ್ಟಾಲಿನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.






