Bidar | ಮಕ್ಕಳಲ್ಲಿ ಪರಿಸರ ಪ್ರಜ್ಞೆ ಬೆಳೆಸುವುದು ಅಗತ್ಯ : ಸಚಿವ ಈಶ್ವರ್ ಖಂಡ್ರೆ
ಇಂಚೂರಿನಲ್ಲಿ ‘ಡಾ. ಚನ್ನಬಸವ ಪಟ್ಟದೇವರ ವೃಕ್ಷೋದ್ಯಾನ’ ಉದ್ಘಾಟನೆ

ಬೀದರ್: ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ವೈಪರೀತ್ಯದಿಂದ ಮಾನವ ಸಮಾಜ ಸಾಕಷ್ಟು ಅಪಾಯಗಳನ್ನು ಎದುರಿಸುತ್ತಿದೆ. ಆದ್ದರಿಂದ ಹಸಿರು ಹೊದಿಕೆ ಹೆಚ್ಚಿಸುವುದು ಹಾಗೂ ಮಕ್ಕಳಲ್ಲಿ ಪರಿಸರ ಪ್ರಜ್ಞೆ ಬೆಳೆಸುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಹೇಳಿದರು.
ಭಾಲ್ಕಿ ತಾಲೂಕಿನ ಇಂಚೂರ್ ಗ್ರಾಮದ ಸಮೀಪ ಅರಣ್ಯ ಇಲಾಖೆ, ಪ್ರಾದೇಶಿಕ ಅರಣ್ಯ ವಿಭಾಗ ಬೀದರ್ ಹಾಗೂ ಪ್ರಾದೇಶಿಕ ಅರಣ್ಯ ವಲಯ ಭಾಲ್ಕಿ ಇವರ ಸಂಯುಕ್ತಾಶ್ರಯದಲ್ಲಿ ನಿರ್ಮಿಸಿರುವ ಡಾ. ಚನ್ನಬಸವ ಪಟ್ಟದೇವರ ವೃಕ್ಷೋದ್ಯಾನ (ಇಂಚೂರ್ ಟ್ರೀ ಪಾರ್ಕ್) ಅನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.
ಭಾಲ್ಕಿ ತಾಲೂಕಿನ ಸಾರ್ವಜನಿಕರು ಹಾಗೂ ಶಾಲಾ ಮಕ್ಕಳಿಗಾಗಿ ಸುಸಜ್ಜಿತ ವೃಕ್ಷೋದ್ಯಾನ ನಿರ್ಮಿಸಲಾಗಿದ್ದು, ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು. ಸಂಜೆ ವೇಳೆಯಲ್ಲಿ ಸಾರ್ವಜನಿಕರನ್ನು ಆಕರ್ಷಿಸಲು ಉದ್ಯಾನದಲ್ಲಿ ವರ್ಣರಂಜಿತ ಸಂಗೀತ ಕಾರಂಜಿ ನಿರ್ಮಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ತಿಳಿಸಿದರು.
ಉದ್ಯಾನದಲ್ಲಿ 250ಕ್ಕೂ ಹೆಚ್ಚು ಸಸ್ಯ ಪ್ರಭೇದಗಳನ್ನು ನೆಡಲಾಗಿದ್ದು, ಮುಂದಿನ ದಿನಗಳಲ್ಲಿ ‘ಮಿಯಾವಾಕಿ’ ಮಾದರಿಯಲ್ಲಿ 10 ಸಾವಿರ ಸಸಿಗಳನ್ನು ನೆಡುವ ಗುರಿ ಹೊಂದಲಾಗಿದೆ ಎಂದು ಹೇಳಿದರು. ಪ್ರತಿ ಸಸ್ಯದ ಮುಂದೆ ಅದರ ವೈಜ್ಞಾನಿಕ ಹೆಸರು, ಜೀವಿತಾವಧಿ ಹಾಗೂ ಔಷಧೀಯ ಮಹತ್ವದ ಮಾಹಿತಿ ಫಲಕ ಅಳವಡಿಸಲಾಗುವುದು. ಮಕ್ಕಳಿಗೆ ಗಿಡಮರಗಳ ಬಗ್ಗೆ ಅರಿವು ಮೂಡಿಸಲು ಮಾರ್ಗದರ್ಶಕರ ವ್ಯವಸ್ಥೆಯನ್ನೂ ಮಾಡಲಾಗುವುದು ಎಂದರು.
ವೃಕ್ಷೋದ್ಯಾನದಲ್ಲಿ ಪ್ಲಾಸ್ಟಿಕ್ ಹಾಗೂ ಕಸ ತರುವುದನ್ನು ಸಂಪೂರ್ಣ ನಿಷೇಧಿಸಲಾಗುವುದು. ಸಾರ್ವಜನಿಕರು ಉದ್ಯಾನವನ್ನು ತಮ್ಮ ಮನೆಯಂತೆ ಕಾಪಾಡಬೇಕು ಎಂದು ಮನವಿ ಮಾಡಿದ ಸಚಿವರು, ಬೀದರ್ ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ತಲಾ 2 ಕೋಟಿ ರೂ. ವೆಚ್ಚದಲ್ಲಿ ಪಾರ್ಕ್ ಕಚೇರಿ, ಭಾಲ್ಕಿಯಲ್ಲಿ 2 ಕೋಟಿ ರೂ. ವೆಚ್ಚದ ಅರಣ್ಯ ಕಚೇರಿ, ಬೀದರ್ನಲ್ಲಿ 5 ಕೋಟಿ ರೂ. ವೆಚ್ಚದ ಅರಣ್ಯ ಭವನ ಹಾಗೂ ಹೊನ್ನಿಕೇರಿಯಲ್ಲಿ 15 ಕೋಟಿ ರೂ. ವೆಚ್ಚದ ಪರಿಸರ ಪ್ರವಾಸೋದ್ಯಮ ಯೋಜನೆ ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು.
ಭಾಲ್ಕಿ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದೇವರು ಮಾತನಾಡಿ, ಪ್ರಕೃತಿಯಲ್ಲಿಯೇ ರಾಮಾಯಣ, ಮಹಾಭಾರತದಂತಹ ಮಹಾಕಾವ್ಯಗಳ ಘಟನೆಗಳು ನಡೆದಿವೆ. ಬುದ್ಧನಿಗೆ ಜ್ಞಾನೋದಯವೂ ಮರದ ಕೆಳಗೆ ಲಭಿಸಿತ್ತು. ಇಂತಹ ನೆಮ್ಮದಿ ಮತ್ತು ಶಾಂತಿಯ ವಾತಾವರಣವನ್ನು ಈ ವೃಕ್ಷೋದ್ಯಾನ ಒದಗಿಸಲಿದೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಎಂ.ಜಿ. ಮೂಳೆ ಮಾತನಾಡಿ, ಅರಣ್ಯ ಹಾಗೂ ಮಳೆ ಕೊರತೆಯ ಪ್ರದೇಶವಾದ ಭಾಲ್ಕಿಯಲ್ಲಿ ಟ್ರೀ ಪಾರ್ಕ್ ನಿರ್ಮಾಣವಾಗಿರುವುದು ಸಂತಸದ ವಿಷಯವಾಗಿದೆ. ಇದು ಮುಂದಿನ ದಿನಗಳಲ್ಲಿ ಸಾವಿರಾರು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರನ್ನು ಸೆಳೆಯುವ ಪ್ರೇಕ್ಷಣೀಯ ಸ್ಥಳವಾಗಲಿದೆ. ಉದ್ಯಾನದ ಸುತ್ತಮುತ್ತ ಹೋಟೆಲ್ ಮತ್ತು ರೆಸ್ಟೋರೆಂಟ್ಗಳು ಆರಂಭವಾಗಿ ಸ್ಥಳೀಯರಿಗೆ ಉದ್ಯೋಗಾವಕಾಶಗಳು ಸೃಷ್ಟಿಯಾಗಬಹುದು ಎಂದು ಅಭಿಪ್ರಾಯಪಟ್ಟರು. ಕಾರಂಜಾ ಜಲಾಶಯದ ಸಮೀಪ ಬೃಂದಾವನ ಮಾದರಿಯ ವನ ನಿರ್ಮಿಸುವಂತೆ ಸಚಿವರಲ್ಲಿ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಹಿರೇಮಠ್ ಸಂಸ್ಥಾನದ ನಾಡೋಜ ಡಾ. ಬಸವಲಿಂಗ ಪಟ್ಟದೇವರು ದಿವ್ಯಸಾನಿಧ್ಯ ವಹಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಿತ್ತೆ ಮಾಧವ್ ವಿಠ್ಠಲರಾವ್, ಗ್ಯಾರಂಟಿ ಸಮಿತಿಯ ಭಾಲ್ಕಿ ತಾಲೂಕಾಧ್ಯಕ್ಷ ಹಣಮಂತರಾವ್ ಚೌವ್ಹಾಣ್, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಸಂತ್ ರೆಡ್ಡಿ ಕೆ. ವಿ., ಬೀದರ್ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಸುಮಿತಕುಮಾರ ಪಾಟೀಲ್, ಶ್ರೀನಿವಾಸ್ ಯಾರಡೋಣಿ, ಭಾಲ್ಕಿ ವಲಯ ಅರಣ್ಯಧಿಕಾರಿ ಸಚಿನ್ ಪಾಟೀಲ್, ಕಲಬುರಗಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಆಶೀಶ್ ರೆಡ್ಡಿ, ವಿರೇಶ್ ಕಲ್ಯಾಣೆ, ಆರ್ಎಫ್ಒ ಸಂಗೀತಾ ಸೇರಿದಂತೆ ವಿವಿಧ ತಾಲೂಕು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.






