ಬೀದರ್ | ಹಜ್ ಯಾತ್ರೆಯು ಉನ್ನತ ಮಟ್ಟದ ಆಧ್ಯಾತ್ಮ ಅನುಭವ : ಮುಹಮ್ಮದ್ ನಿಝಾಮುದ್ದೀನ್

ಬೀದರ್: ಹಜ್ ಯಾತ್ರೆಯು ಉನ್ನತ ಮಟ್ಟದ ಆಧ್ಯಾತ್ಮ ಅನುಭವವಾಗಿದೆ ಎಂದು ನಿವೃತ್ತ ಪ್ರಾಚಾರ್ಯ ಮುಹಮ್ಮದ್ ನಿಝಾಮುದ್ದೀನ್ ಅವರು ಹೇಳಿದರು.
ನಗರದ ಜಾಮಾ ಮಸೀದಿಯಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಬೀದರ್ ಘಟಕದ ವತಿಯಿಂದ ಏರ್ಪಡಿಸಿದ್ದ ಹಜ್ ಯಾತ್ರಿಗಳ ಸ್ವಾಗತ ಸಮಾರಂಭದಲ್ಲಿ ಅವರು ಮಾತನಾಡಿದರು.
ಹಜ್ ಏಕದೇವ ವಿಶ್ವಾಸಿಗರ ಅಂತರರಾಷ್ಟ್ರೀಯ ಸಮ್ಮೇಳನವಾಗಿದ್ದು, ಕಾಬಾ ದೇವ ಭವನವು ಸಕಲರಿಗೆ ಸಮೃದ್ಧಿ ಹಾಗೂ ಸನ್ಮಾರ್ಗ ದರ್ಶನದ ಕೇಂದ್ರವಾಗಿದೆ. ಕಾಬಾ ಭವನದ ಪ್ರದಕ್ಷಣೆಯಿಂದ ಜೀವನ ದೈವ ಕೇಂದ್ರೀಕೃತವಾಗುತ್ತದೆ. ಕುರ್ಬಾನಿ ಒಬ್ಬ ದೇವ ಭಕ್ತ ತನ್ನನ್ನು ಸಂಪೂರ್ಣವಾಗಿ ದೇವರಿಗೆ ಅರ್ಪಿಸಿಕೊಳ್ಳುವ ಸಾಂಕೇತಿಕ ರೂಪವಾಗಿದೆ ಎಂದರು.
ಇಸ್ಲಾಮ್ನ ಐದು ಆಧಾರ ಸ್ತಂಭಗಳಲ್ಲಿ ಹಜ್ ಕೂಡ ಒಂದು. ಸಾಮರ್ಥ್ಯ ಇರುವ ಮುಸಲ್ಮಾನನು ಹಜ್ ಯಾತ್ರೆ ಕೈಗೊಳ್ಳುವುದು ಕಡ್ಡಾಯವಾಗಿದೆ. ಹಜ್ ಮಾಡುವುದು ಜನರ ಮೇಲೆ ಅಲ್ಲಾಹನ ಹಕ್ಕಾಗಿದೆ ಎಂದು ಕುರಾನ್ನಲ್ಲಿ ಹೇಳಲಾಗಿದೆ. ಹಜ್ ಸಂದರ್ಭದಲ್ಲಿ ಹೊಲೆಯದ ಎರಡು ತುಂಡು ಬಟ್ಟೆ ತೊಡುವುದು, ಸರಳ ಚಪ್ಪಲಿ ಧರಿಸುವುದು, ತಾತ್ಕಾಲಿಕ ಟೆಂಟ್ಗಳಲ್ಲಿ ಹಗಲು ರಾತ್ರಿ ಕಳೆಯುವುದು, ಬಯಲಲ್ಲೇ ಮಲಗುವುದು ಮುಂತಾದವು ಸರಳ ಜೀವನಕ್ಕೆ ಪ್ರೇರಣೆ ನೀಡುತ್ತವೆ. ದೇವರ ಸಾಮಿಪ್ಯಕ್ಕೂ ಸಹಕಾರಿಯಾಗುತ್ತವೆ. ಅರಫಾ ಮೈದಾನದಲ್ಲಿ ಯಾತ್ರಿ ತನ್ನ ತಪ್ಪು ಹಾಗೂ ಪಾಪ ಕಾರ್ಯಗಳಿಗೆ ಪಶ್ಚಾತಾಪ ಪಟ್ಟು, ಭವಿಷ್ಯದಲ್ಲಿ ತಪ್ಪುಗಳಾಗದಂತೆ ಸಂಕಲ್ಪ ಮಾಡುತ್ತಾನೆ ಎಂದು ತಿಳಿಸಿದರು.
ಅಖಿಲ ಭಾರತ ಜಮಾಅತೆ ಇಸ್ಲಾಮಿ ಹಿಂದ್ನ ಸಂಘಟನಾ ಕಾರ್ಯದರ್ಶಿ ಹಾಮೇದ್ ಮುಹಮ್ಮದ್ ಖಾನ್ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಬೀದರ್ ನಗರ ಘಟಕದ ಅಧ್ಯಕ್ಷ ಮುಹಮ್ಮದ್ ಮೌಆಝಂ, ಜಾಮಾ ಮಸೀದಿಯ ಅಧ್ಯಕ್ಷ ಮುಹಮ್ಮದ್ ಜಾವಿದ್, ಹಜ್ ಕಮೀಟಿಯ ಅಧ್ಯಕ್ಷ ಸೈಯದ್ ಸಗೀರ್ ಅಹ್ಮದ್, ಸೈಯದ್ ಮನ್ಸೂರ್ ಅಹ್ಮದ್ ಖಾದ್ರಿ, ಮುಹಮ್ಮದ್ ಆಸಿಫುದ್ದೀನ್, ಗುರುನಾಥ್ ಗಡ್ಡೆ, ಮುಹಮ್ಮದ್ ಸಲಾವುದ್ದೀನ್, ಡಾ.ಇರ್ಷಾದ್ ನವೀದ್, ಮುಹಮ್ಮದ್ ಸನಾವುಲ್ಲಾ ಕುರಾನ್ ಹಾಗೂ ಮುಹಮ್ಮದ್ ಆರಿಫುದ್ದೀನ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.







