ಬೀದರ್ | ಆರೆಸ್ಸೆಸ್ ಪಥ ಸಂಚಲನದಲ್ಲಿ ಅನುದಾನಿತ ಶಾಲೆಯ ಮುಖ್ಯ ಶಿಕ್ಷಕ ಭಾಗಿ : ಫೋಟೋ ವೈರಲ್

ಬೀದರ್ : ಇತ್ತೀಚಿಗೆ ಬೀದರ್ ನಲ್ಲಿ ನಡೆದ ಆರೆಸ್ಸೆಸ್ ಪಥ ಸಂಚಲನದಲ್ಲಿ ಭಾಲ್ಕಿಯ ಅನುದಾನಿತ ಶಾಲೆಯಾದ ಖಡಕೇಶ್ವರ್ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಶಿವಲಿಂಗ್ ಕುಂಬಾರ್ ಅವರು ಭಾಗಿಯಾಗಿದ್ದು, ಇದೀಗ ಫೋಟೋ ವೈರಲ್ ಆಗಿದೆ.
ಬೀದರ್ ನಗರದಲ್ಲಿ ಆರೆಸ್ಸೆಸ್ ನ ಪಥ ಸಂಚಲನ ನಡೆದಿತ್ತು. ಆ ಪಥ ಸಂಚಲನದಲ್ಲಿ ಕೇಂದ್ರ ಸರ್ಕಾರದ ಮಾಜಿ ಸಚಿವ ಭಗವಂತ್ ಖುಬಾ ಅವರ ಜೊತೆಯಲ್ಲಿ ಗಣವೇಷ ಧರಿಸಿ ಆರೆಸ್ಸೆಸ್ ಪಥ ಸಂಚಲನದಲ್ಲಿ ಮುಖ್ಯ ಶಿಕ್ಷಕ ಶಿವಲಿಂಗ್ ಕುಂಬಾರ್ ಅವರು ಭಾಗಿಯಾಗಿದ್ದ ಫೋಟೋ ವೈರಲ್ ಆಗಿದೆ. ಶಿವಲಿಂಗ್ ಕುಂಬಾರ್ ಅವರು ಭಾಲ್ಕಿಯಲ್ಲಿ ನಡೆದ ಆರೆಸ್ಸೆಸ್ ಪಥ ಸಂಚಲನದಲ್ಲಿಯೂ ಕೂಡ ಗಣವೇಷ ಧರಿಸಿ ಭಾಗಿಯಾಗಿದ್ದರು ಎಂದು ತಿಳಿದು ಬಂದಿದೆ.
ಬಸವಕಲ್ಯಾಣದಲ್ಲಿ ನಡೆದ ಆರೆಸ್ಸೆಸ್ ಪಥ ಸಂಚಲನದಲ್ಲಿ ಭಾಗಿಯಾಗಿದ್ದ ವಸತಿ ನಿಲಯದಲ್ಲಿ ಹೊರ ಸಂಪನ್ಮೂಲದಿಂದ ಅಡುಗೆ ಸಹಾಯಕ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದ ಪ್ರಮೋದಕುಮಾರ್ ಅವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಲಾಗಿತ್ತು. ಹಾಗೆಯೇ ಬಸವಕಲ್ಯಾಣದಲ್ಲಿ ಶಿಕ್ಷಕ, ಪಶು ವೈದ್ಯಾಧಿಕಾರಿ ಹಾಗೂ ಪ್ರಾಂಶುಪಾಲರು ಕೂಡ ಆರೆಸ್ಸೆಸ್ ಪಥ ಸಂಚಲನದಲ್ಲಿ ಗಣವೇಷ ಧರಿಸಿ ಭಾಗಿಯಾಗಿದ್ದು ಕೂಡ ಸುದ್ದಿಯಾಗಿತ್ತು.





