Bidar | ಅನುದಾನ ರಹಿತ ಕನ್ನಡ ಮಾಧ್ಯಮ ಶಾಲೆಗಳಿಗೆ ನೆರವು ನೀಡುವಂತೆ ಆಗ್ರಹಿಸಿ ಸೆ.9 ರಿಂದ ಅನಿರ್ದಿಷ್ಟಾವಧಿ ಧರಣಿ

ಬೀದರ್, ಸೆ. 8: ಕಲ್ಯಾಣ ಕರ್ನಾಟಕ ಭಾಗದ ಅನುದಾನ ರಹಿತ ಕನ್ನಡ ಮಾಧ್ಯಮ ಖಾಸಗಿ ಶಾಲೆಗಳ ಸಮಸ್ಯೆಗಳನ್ನು ಬಗೆಹರಿಸಿ, ಕೆಕೆಆರ್ಡಿಬಿ ಅನುದಾನದಡಿ ನೆರವು ನೀಡುವಂತೆ ಆಗ್ರಹಿಸಿ ಕಲ್ಯಾಣ ಕರ್ನಾಟಕದ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟವು ಸೆಪ್ಟೆಂಬರ್ 9ರಿಂದ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಕೆಕೆಆರ್ಡಿಬಿ) ಕಚೇರಿ ಎದುರು ಅನಿರ್ದಿಷ್ಟಾವಧಿ ಸಾಂಕೇತಿಕ ಧರಣಿ ಸತ್ಯಾಗ್ರಹ ನಡೆಸಲು ತೀರ್ಮಾನಿಸಿದೆ.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ವಿಭಾಗೀಯ ಅಧ್ಯಕ್ಷ ಸುನಿಲ್ ಹುಡಗಿ, ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ಖಾಸಗಿ ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳು ಹೋರಾಟದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಯಾವುದೇ ಘೋಷಣೆ ಅಥವಾ ಗದ್ದಲವಿಲ್ಲದೆ ವಚನಗಳು ಹಾಗೂ ತತ್ವಪದಗಳನ್ನು ಹಾಡುವ ಮೂಲಕ ವಿಶಿಷ್ಟ ರೀತಿಯಲ್ಲಿ ಸತ್ಯಾಗ್ರಹ ನಡೆಸಲಾಗುವುದು ಎಂದು ಹೇಳಿದರು.
ಕೆಕೆಆರ್ಡಿಬಿಯ 5 ಸಾವಿರ ಕೋಟಿ ರೂ. ಅನುದಾನದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಮೀಸಲಿರುವ ಶೇ.15ರಷ್ಟು ಪಾಲನ್ನು ಶೇ.30ಕ್ಕೆ ಹೆಚ್ಚಿಸಬೇಕು. ಅದರಲ್ಲಿ ಕನಿಷ್ಠ ಶೇ.5ರಷ್ಟು ಅನುದಾನವನ್ನು ಕನ್ನಡ ಮಾಧ್ಯಮದ ಅನುದಾನ ರಹಿತ ಖಾಸಗಿ ಶಾಲೆಗಳಿಗೆ ನೀಡಬೇಕು ಎಂದು ಅವರು ಆಗ್ರಹಿಸಿದರು.
ಇತರ ಮಾಧ್ಯಮದ ಖಾಸಗಿ ಶಾಲೆಗಳಿಗೆ ನೇರ ಹಣಕಾಸಿನ ನೆರವು ನೀಡುವ ಬದಲು ಹೆಚ್ಚುವರಿ ಕೊಠಡಿಗಳು, ಶೌಚಾಲಯ, ಕಾಂಪೌಂಡ್, ವಿಜ್ಞಾನ ಹಾಗೂ ಕಂಪ್ಯೂಟರ್ ಪ್ರಯೋಗಾಲಯ, ಸ್ಮಾರ್ಟ್ ಬೋರ್ಡ್ ಸೇರಿದಂತೆ ಮೂಲಸೌಕರ್ಯಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.
ಅನುದಾನ ರಹಿತ ಖಾಸಗಿ ಶಾಲೆಗಳು ಶೇ.90ಕ್ಕೂ ಹೆಚ್ಚು ಫಲಿತಾಂಶ ನೀಡುತ್ತಿದ್ದರೂ ಸರ್ಕಾರ ಅವುಗಳನ್ನು ಕಡೆಗಣಿಸುತ್ತಿದೆ ಎಂದು ಆರೋಪಿಸಿದ ಅವರು, ಸರ್ಕಾರಿ ಶಾಲಾ ಮಕ್ಕಳಿಗೆ ನೀಡಲು ಉದ್ದೇಶಿಸಿರುವ ಶೇ.7.5ರಷ್ಟು ಮೀಸಲಾತಿ ಜಾರಿಗೊಳಿಸಬಾರದು ಎಂದರು.
ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಶಿಕ್ಷಣ ಹಕ್ಕು ಕಾಯ್ದೆ (ಆರ್ಟಿಇ)ಯನ್ನು 2013ರ ಮೂಲ ಸ್ವರೂಪದಲ್ಲೇ ಮರು ಜಾರಿಗೊಳಿಸಬೇಕು ಎಂದು ಒಕ್ಕೂಟ ಆಗ್ರಹಿಸಿದೆ.
ಇದೇ ವೇಳೆ, ಕೋಚಿಂಗ್ ಸೆಂಟರ್ಗಳ ಹಾವಳಿ ತಡೆಗಟ್ಟುವಂತೆ ಆಗ್ರಹಿಸಿ ಸೆಪ್ಟೆಂಬರ್ 21ರಂದು ಬೀದರ್ನಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಸುನಿಲ್ ಹುಡಗಿ ತಿಳಿಸಿದರು.
ಈ ಸಂದರ್ಭದಲ್ಲಿ ಒಕ್ಕೂಟದ ವಿಭಾಗೀಯ ಉಪಾಧ್ಯಕ್ಷ ಓಂಕಾರೇಶ್ವರ್ ವಿಶ್ವನಾಥಪ್ಪ, ಖಜಾಂಚಿ ಮಂಜುರ್ ಇರ್ಫಾನ್, ವಿಭಾಗೀಯ ಕಾರ್ಯದರ್ಶಿ ಅರುಣಕುಮಾರ್ ಪೋಚಾಳ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುನಾಥ್ ರಡ್ಡಿ, ಜಿಲ್ಲಾ ಉಪಾಧ್ಯಕ್ಷ ಮುಕ್ರಂ ಪಟೇಲ್, ಜಿಲ್ಲಾ ಖಜಾಂಚಿ ಗಣಪತಿ ಸೋಲಪುರೆ, ಬಸವಕಲ್ಯಾಣ ತಾಲೂಕಾಧ್ಯಕ್ಷ ಧನರಾಜ್ ದೊಡಮನಿ, ಬೀದರ್ ದಕ್ಷಿಣ ಕ್ಷೇತ್ರದ ಅಧ್ಯಕ್ಷ ಸಯ್ಯದ್ ಅಹೆಮ್ಮದ್ ಮುದ್ದೆ, ಹಿರಿಯ ಮುಖಂಡರಾದ ಗುಂಡಯ್ಯ ತೀರ್ಥಾ, ಔರಾದ್ ತಾಲೂಕಾಧ್ಯಕ್ಷ ಗುರುನಾಥ್ ದೇಶಮುಖ, ಕಮಲನಗರ ತಾಲೂಕಾಧ್ಯಕ್ಷ ರಾಜಕುಮಾರ್ ಹಮಿಲಪುರೆ ಹಾಗೂ ಭಾಲ್ಕಿ ತಾಲೂಕಾಧ್ಯಕ್ಷ ಸುಭಾಷ್ ಹುಲಸುರೆ ಇದ್ದರು.






