ಬೀದರ್: ವಿವಿಧ ಇಲಾಖೆಗಳಲ್ಲಿನ ಲೋಪದೋಷಗಳ ವಿರುದ್ಧ ಲೋಕಾಯುಕ್ತ ಸ್ವಯಂಪ್ರೇರಿತ ದೂರು ದಾಖಲು; ಕಠಿಣ ಕ್ರಮದ ಎಚ್ಚರಿಕೆ

ಬೀದರ್ : ಜಿಲ್ಲೆಯ ವಿವಿಧ ಸರ್ಕಾರಿ ಕಚೇರಿಗಳು ಹಾಗೂ ಆಸ್ಪತ್ರೆಗಳಲ್ಲಿ ಕಂಡುಬಂದಿರುವ ಗಂಭೀರ ಲೋಪದೋಷಗಳು ಹಾಗೂ ಸಾರ್ವಜನಿಕರ ದೂರುಗಳ ಹಿನ್ನೆಲೆಯಲ್ಲಿ ಸುಮಾರು 12 ಪ್ರಕರಣಗಳನ್ನು ಸ್ವಯಂಪ್ರೇರಿತವಾಗಿ (ಸುವೋಮೋಟೋ) ದಾಖಲಿಕೊಳ್ಳಲಾಗಿದೆ ಎಂದು ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಹೇಳಿದರು.
ನಗರದ ಹಬ್ಸಿಕೋಟೆ ಅತಿಥಿ ಗೃಹದಲ್ಲಿ ಶನಿವಾರ ಸಾಯಂಕಾಲ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಬೀದರ್ನ ಹಳೆ ಮತ್ತು ಹೊಸ ಬಸ್ ನಿಲ್ದಾಣಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಕಸದ ತೊಟ್ಟಿಗಳು ತುಂಬಿ ತುಳುಕುತ್ತಿದ್ದು, ಶೌಚಾಲಯ ಹಾಗೂ ಪಾರ್ಕಿಂಗ್ ವ್ಯವಸ್ಥೆಗಳು ತೀರಾ ಹದಗೆಟ್ಟಿವೆ. ಸ್ವಚ್ಛತೆಯ ಕೊರತೆಯಿರುವ ಕಾರಣ ಇವುಗಳ ವಿರುದ್ಧ ಸುವೋಮೋಟೋ ಪ್ರಕರಣ ದಾಖಲಿಸಲಾಗಿದೆ ಎಂದರು.
ಎಪಿಎಂಸಿ ಮಾರುಕಟ್ಟೆಯಲ್ಲಿ ನಿಯಮಬಾಹಿರವಾಗಿ ರೈತರಿಂದ ಕಮಿಷನ್ ವಸೂಲಿ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಕಾನೂನು ಪ್ರಕಾರ ರೈತರಿಂದ ಯಾವುದೇ ಕಮಿಷನ್ ಪಡೆಯುವಂತಿಲ್ಲ. ಅಲ್ಲಿ ಕುಡಿಯುವ ನೀರು, ಶೌಚಾಲಯ ಮತ್ತು ಟ್ರಾಫಿಕ್ ನಿಯಂತ್ರಣದಂತಹ ಯಾವುದೇ ಮೂಲಸೌಕರ್ಯಗಳಿಲ್ಲದ ಕಾರಣ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಸುಲ್ತಾನಪುರ ಘನತ್ಯಾಜ್ಯ ಘಟಕದ ಸುತ್ತಮುತ್ತಲಿನ ಹಳ್ಳಿಗಳಲ್ಲಿ ವಿಪರೀತ ದುರ್ವಾಸನೆ ಹರಡುತ್ತಿದ್ದು, ಸಾರ್ವಜನಿಕರ ಆರೋಗ್ಯಕ್ಕೆ ಧಕ್ಕೆಯಾಗಿದೆ. ಈ ಬಗ್ಗೆ ಅಲ್ಲಿನ ಪಿಡಿಒ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಫಾಗ್ ನಿಯಂತ್ರಣಕ್ಕೆ ಸೂಚಿಸಲಾಗಿದೆ. ಅಲ್ಲದೆ, ಆರೋಗ್ಯ ಕಾರ್ಯಕರ್ತರು ಪ್ರತಿ 15 ದಿನಗಳಿಗೊಮ್ಮೆ ಭೇಟಿ ನೀಡುವಂತೆ ಆದೇಶಿಸಲಾಗಿದೆ ಎಂದು ಅವರು ತಿಳಿಸಿದರು.
ಬ್ರೀಮ್ಸ್ ಆಸ್ಪತ್ರೆಯ ನೆಲಮಹಡಿಯಲ್ಲಿ ನೀರು ತುಂಬಿಕೊಂಡಿದ್ದು, ಬೆಡ್ಗಳು ತೀರಾ ಹದಗೆಟ್ಟಿವೆ. ಎಕ್ಸ್ರೇ ಲ್ಯಾಬ್ಗೆ ಭೇಟಿ ನೀಡಿದಾಗ ಅಲ್ಲಿ ಅನಧಿಕೃತವಾಗಿ ಹಣದ ವಹಿವಾಟು ನಡೆಸುತ್ತಿದ್ದ ಇಬ್ಬರನ್ನು ಪತ್ತೆಹಚ್ಚಿ, ಅವರಿಂದ 90 ಸಾವಿರ ರೂ. ನಗದು ಹಾಗೂ ಸುಮಾರು 8 ಲಕ್ಷ ರೂ. ಮೌಲ್ಯದ ಚೆಕ್ಗಳನ್ನು ವಶಪಡಿಸಿಕೊಂಡು ಕ್ರಿಮಿನಲ್ ಪ್ರಕರಣ ದಾಖಲಿಸಿ, ಅವರನ್ನು ಬಂಧಿಸಲಾಗಿದೆ. ಆಸ್ಪತ್ರೆಯ ಪ್ರತಿಯೊಂದು ಫ್ಲೋರ್ನಲ್ಲೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಒಂದು ತಿಂಗಳ ಗಡುವು ನೀಡಲಾಗಿದೆ ಎಂದು ಅವರು ಹೇಳಿದರು.
ಬೀದರ್ ತಹಶೀಲ್ದಾರ್ ಕಚೇರಿಯಲ್ಲಿ ನೂರಾರು ಕಡತಗಳು ಬಾಕಿ ಉಳಿದಿದ್ದು, ಹಾಜರಾತಿ ಮತ್ತು ಕ್ಯಾಶ್ ರಿಜಿಸ್ಟರ್ ಸರಿ ಇಲ್ಲದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಲಾಗಿದೆ. ಎಡಿಎಲ್ಆರ್ ಕಚೇರಿಯಲ್ಲಿ ಸಾರ್ವಜನಿಕರ ಕೆಲಸಗಳನ್ನು ವರ್ಷಗಟ್ಟಲೆ ವಿಳಂಬ ಮಾಡುತ್ತಿರುವ ಬಗ್ಗೆಯೂ ಸುವೋಮೋಟೋ ಕೇಸ್ ದಾಖಲಾಗಿದೆ. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ನಗರದಲ್ಲಿ ರಾಜಾರೋಷವಾಗಿ ನಡೆದಿರುವ ಒತ್ತುವರಿಗಳು, ನಿಯಮಬಾಹಿರ ಲೈಸೆನ್ಸ್ ನೀಡಿಕೆ ಹಾಗೂ ಬಿಲ್ಡಿಂಗ್ ವೈಲೇಷನ್ ತಡೆಗಟ್ಟುವಲ್ಲಿ ವಿಫಲರಾದ 7 ರಿಂದ 8 ಇಂಜಿನಿಯರ್ಗಳ ವಿರುದ್ಧ ಸುವೋಮೋಟೋ ಪ್ರಕರಣ ಹಾಕಲಾಗಿದೆ ಎಂದರು.
ಜಿಲ್ಲೆಯಲ್ಲಿ ಸುಮಾರು 416 ಶಾಲಾ ವಾಹನಗಳು ಎಫ್ಸಿ (ಫಿಟ್ನೆಸ್ ಸರ್ಟಿಫಿಕೇಟ್) ಮತ್ತು ಇನ್ಶೂರೆನ್ಸ್ ಇಲ್ಲದೆ ಸಂಚರಿಸುತ್ತಿರುವುದು ಕಂಡುಬಂದಿದೆ. ಇವುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸಾರಿಗೆ ಅಧಿಕಾರಿಗಳಿಗೆ ಒಂದು ತಿಂಗಳ ಕಾಲಾವಕಾಶ ನೀಡಿ ಸ್ವಯಂಪ್ರೇರಿತ ದೂರು ದಾಖಲಿಸಲಾಗಿದೆ. ಅಂಬೇಡ್ಕರ್ ವಸತಿ ನಿಲಯದಲ್ಲಿ ವಿದ್ಯಾರ್ಥಿನಿಯರಿಗೆ ಕನಿಷ್ಠ ಸೌಕರ್ಯಗಳೂ ಇಲ್ಲ. ಆರು ಶೌಚಾಲಯಗಳಲ್ಲಿ ಮೂರು ಸಂಪೂರ್ಣ ಹಾಳಾಗಿವೆ. ಪ್ರಥಮ ಚಿಕಿತ್ಸಾ ಪೆಟ್ಟಿಗೆಯಾಗಲಿ ಅಥವಾ ಬಟ್ಟೆ ಒಣಗಿಸುವ ವ್ಯವಸ್ಥೆಯಾಗಲಿ ಇಲ್ಲ. ಕಲುಷಿತ ವಾತಾವರಣವಿರುವ ಕಾರಣ ಅಧಿಕಾರಿಗಳಿಗೆ ಸುಧಾರಣೆಗೆ ಎರಡು ತಿಂಗಳ ಗಡುವು ನೀಡಿ ಸುವೋಮೋಟೋ ಪ್ರಕರಣ ಬುಕ್ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಈ ಎಲ್ಲಾ 12 ಪ್ರಕರಣಗಳ ಪ್ರಗತಿಯನ್ನು ನಾನು ಖುದ್ದಾಗಿ ಪ್ರತಿ ತಿಂಗಳು ಮಾನಿಟರ್ ಮಾಡುತ್ತೇನೆ. ಅಧಿಕಾರಿಗಳು ಪ್ರತಿ ತಿಂಗಳು ವರದಿ ಸಲ್ಲಿಸಬೇಕು. ಸಾರ್ವಜನಿಕರು ಮತ್ತು ಮಾಧ್ಯಮದವರು ಇಂತಹ ಲೋಪಗಳನ್ನು ನಮ್ಮ ಗಮನಕ್ಕೆ ತಂದರೆ ತಕ್ಷಣವೇ ಕಠಿಣ ಕ್ರಮ ಜರುಗಿಸಲಾಗುವುದು. ಬೀದರ್ ಜನತೆ ನಮ್ಮ ಜನ, ಅವರಿಗೆ ನ್ಯಾಯ ಸಿಗುವವರೆಗೂ ನಾನು ಬಿಡುವುದಿಲ್ಲ ಎಂದರು.
ಈ ಸಂದರ್ಭದಲ್ಲಿ ನ್ಯಾ. ರಾಘವೇಂದ್ರ ಉಪಾಧ್ಯೆ, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ್ ಬದೋಲೆ ಹಾಗೂ ಮಹಾನಗರ ಪಾಲಿಕೆಯ ಆಯುಕ್ತ ಮುಕುಲ್ ಜೈನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.






