ಬೀದರ್ | ಫೆ.19 ರಂದು ಲೋಕಾಯುಕ್ತರಿಂದ ಕುಂದು ಕೊರತೆ ಸಭೆ

ಬೀದರ್ : ಜಿಲ್ಲಾ ಲೋಕಾಯುಕ್ತ ಪೊಲೀಸ್ ಠಾಣೆ ವತಿಯಿಂದ ಫೆ.19 ರಂದು ಹುಮನಾಬಾದ್ ತಾಲ್ಲೂಕಿನಲ್ಲಿ ಸಾರ್ವಜನಿಕರ ಕುಂದುಕೊರತೆ, ಅಹವಾಲು ಸ್ವೀಕಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಂದು ಬೆಳಿಗ್ಗೆ 11:30 ಗಂಟೆಗೆ ಹುಮನಾಬಾದ್ ನಗರದ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ಸಾರ್ವಜನಿಕರಿಗೆ ಸರ್ಕಾರಿ ಅಧಿಕಾರಿಗಳಿಂದ ತಮಗೆ ಆಗಬೇಕಾದ ಕೆಲಸಗಳಲ್ಲಿ ವಿಳಂಬವಾಗಿದ್ದರೆ, ಅಧಿಕಾರಿಗಳು ನ್ಯಾಯ ಸಮ್ಮತವಾಗಿ ಮಾಡಿಕೊಡಬೇಕಾದ ಕೆಲಸದಲ್ಲಿ ತೊಂದರೆ ನೀಡುತ್ತಿದ್ದರೆ ಹಾಗೂ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ದೂರುಗಳಿದ್ದಲ್ಲಿ ಸಾರ್ವಜನಿಕರು ನೇರವಾಗಿ ಬಂದು ತಮ್ಮ ಕುಂದುಕೊರತೆಗಳು ಸಲ್ಲಿಸಬಹುದಾಗಿದೆ.
ಸ್ಥಳದಲ್ಲಿಯೇ ಇದ್ದ ಅಧಿಕಾರಿಗಳೊಂದಿಗೆ ಕೆಲಸ ನೆರವೇರಿಸಿಕೊಳ್ಳಲು ಅಥವಾ ಅರ್ಜಿ ಫಾರಂ ನಂ.1 ಮತ್ತು 2 ತೆಗೆದುಕೊಂಡು ಸ್ಥಳದಲ್ಲಿಯೇ ದೂರು ನೀಡಲು ಅನುಕೂಲ ಕಲ್ಪಿಸಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ.







