ಬೀದರ್ | ಬೇರೆ ದೇಶದಿಂದ ಆಮದು ಮಾಡಿಕೊಳ್ಳುತ್ತಿರುವ ತೊಗರಿಯಿಂದ ಮಾರುಕಟ್ಟೆ ಕುಸಿಯುತ್ತಿದೆ : ಶರಣಬಸಪ್ಪ ಮಮಶೆಟ್ಟಿ
ಫೆ. 24 ರಂದು ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಎದುರು ಧರಣಿ ಸತ್ಯಾಗ್ರಹ

ಬೀದರ್ : ಬೇರೆ ದೇಶದಿಂದ ಆಮದು ಮಾಡಿಕೊಳ್ಳುತ್ತಿರುವ ತೊಗರಿಯಿಂದ ನಮ್ಮ ತೊಗರಿ ಮಾರುಕಟ್ಟೆ ಕುಸಿಯುತ್ತಿದೆ ಎಂದು ಕೆಪಿಆರ್ಎಸ್ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಆಕ್ರೋಶ ಹೊರಹಾಕಿದರು.
ಇಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಮಂಡಿಸುವ ಬಜೆಟ್ ರೈತರ ಪರವಾಗಿ ಮಂಡಿಸಬೇಕು. ಇಂದಿನ ದಿನಗಳಲ್ಲಿ ಅರಣ್ಯ ಭೂಮಿ, ಸರ್ಕಾರಿ ಭೂಮಿ, ಬಗರ್ ಹುಕುಂ ಸಾಗುವಳಿದಾರರನ್ನು ಒಕ್ಕಲೆಬ್ಬಿಸುವ ರೀತಿಯಲ್ಲಿ ಅರಣ್ಯ ಇಲಾಖೆಯವರು ರೈತ ವಿರೋಧಿ ಧೋರಣೆ ತೋರುತ್ತಿದ್ದಾರೆ. ಈ ಒಕ್ಕಲೆಬ್ಬಿಸಿಕುವ ನೀತಿಯನ್ನು ಕೈ ಬಿಡಬೇಕು ಎಂದು ಆಗ್ರಹಿಸಿದರು.
ಇಡೀ ದೇಶದಲ್ಲಿ ಅತೀ ಹೆಚ್ಚು ತೊಗರಿ ಬೆಳೆಯುವ ಪ್ರದೇಶ ಕಲ್ಯಾಣ ಕರ್ನಾಟಕವಾಗಿದೆ. ಅದರಲ್ಲೂ ಗುಲ್ಬರ್ಗಾ ಜಿಲ್ಲೆಯಲ್ಲಿ ತೊಗರಿ ಅತೀ ಹೆಚ್ಚಾಗಿ ಬೆಳೆಯಲಾಗುತ್ತದೆ. ಈ ವರ್ಷ ತೊಗರಿಗೆ ಬೆಲೆ ಇಲ್ಲ. ಎಂಎಸ್ ಪಿ ಇಲ್ಲದೇ ತೊಗರಿ ರೈತರು ಕಂಗಾಲಾಗಿದ್ದಾರೆ. ಇದರ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಗಮನ ಹರಿಸಬೇಕು ಎಂದರು.
ಮಾರುಕಟ್ಟೆ ಕುಸಿಯಲು ಮೂಲ ಕಾರಣ ಏನೆಂದರೆ, ನಮ್ಮ ಸರ್ಕಾರವು ಮೊಜಾಂಬಿ, ಮ್ಯಾನ್ಮಾರ್ ಮತ್ತು ಸುಡಾನ್ ದೇಶದಿಂದ ಟನ್ ಗಟ್ಟಲೆ ತೊಗರಿ ಆಮದು ಮಾಡಿಕೊಳ್ಳುತ್ತಿದೆ. ಬೇರೆ ದೇಶದಿಂದ ಆಮದು ಮಾಡಿಕೊಂಡ ತೊಗರಿಯಲ್ಲಿ ಅಷ್ಟೊಂದು ಪ್ರೊಟೀನ್ ಇರುವುದಿಲ್ಲ. ನಮ್ಮಲ್ಲಿ ಬೆಳೆದ ತೊಗರಿಯಲ್ಲಿ ಹೆಚ್ಚಾಗಿ ಪ್ರೊಟೀನ್ ಅಂಶ ಇರುತ್ತದೆ. ಆದರೂ ಕೂಡ ನಮ್ಮ ತೊಗರಿಯ ಬೆಳೆಗಿಂತ ಹೆಚ್ಚಿನ ಬೆಲೆ ಕೊಟ್ಟು ಬೇರೆ ದೇಶದಿಂದ ತೊಗರಿ ಆಮದು ಮಾಡಿಕೊಳ್ಳಲಾಗುತ್ತಿದೆ. ಇದರಿಂದಾಗಿ ನಮ್ಮ ಮಾರುಕಟ್ಟೆ ನೆಲಕಚ್ಚುತ್ತಿದೆ ಎಂದು ಆಕ್ರೋಶ ಹೊರಹಾಕಿದರು.
ಸರಕಾರದ ಈ ಎಲ್ಲ ಧೋರಣೆ ವಿರುದ್ದ ಫೆ.24 ರಂದು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರ ಕಚೇರಿ ಮುಂದೆ ಕೆಪಿಆರ್ಎಸ್ ಹಾಗೂ ಎಐಎಡಬ್ಲ್ಯೂ ಯು ಸಂಘಟನೆ ಜಂಟಿಯಾಗಿ ಧರಣಿ ಸತ್ಯಾಗ್ರಹ ನಡೆಸುತ್ತಿವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಎಐಎಡಬ್ಲ್ಯೂ ಯು ಸಂಘಟನೆಯ ಜಿಲ್ಲಾಧ್ಯಕ್ಷ ಸಯ್ಯದ್ ಇಸಾಮೋದ್ದಿನ್, ದಿಲೀಪ್ ನಾಗೂರೆ, ಸಂಗ್ರಾಮ್, ಖಾಜಿಮಿಯ್ಯಾ, ಭುಜಂಗ್, ರಾಜು, ಸಂತೋಷ್ ಬಿ. ಕೊರವಾ ಹಾಗೂ ದೇವಾನಂದ್ ಗಾಯಕವಾಡ್ ಸೇರಿದಂತೆ ಇತರರು ಉಪಸ್ಥಿತರಿದ್ದರು.







