ಬೀದರ್ | ಜಿಲ್ಲೆಯನ್ನು ಗುಡಿಸಲು ಮುಕ್ತ ಮಾಡುವುದೇ ನಮ್ಮ ಉದ್ದೇಶ : ಸಂಸದ ಸಾಗರ್ ಖಂಡ್ರೆ

ಬೀದರ್ : ಜಿಲ್ಲೆಯನ್ನು ಗುಡಿಸಲು ಮುಕ್ತ ಮಾಡುವುದೇ ನಮ್ಮ ಗುರಿ ಹಾಗೂ ಉದ್ದೇಶವಾಗಿದೆ ಎಂದು ಸಂಸದ ಸಾಗರ್ ಖಂಡ್ರೆ ಅವರು ಹೇಳಿದರು.
ಇಂದು ಭಾಲ್ಕಿ ತಾಲ್ಲೂಕಿನ ಲಂಜವಾಡ ಗ್ರಾಮದಲ್ಲಿ ಬೆಂಗಳೂರಿನ ರಾಜೀವ ಗಾಂಧಿ ವಸತಿ ನಿಗಮ (ನಿ), ಜಿಲ್ಲಾಡಳಿತ ಮತ್ತ ಜಿಲ್ಲಾ ಪಂಚಾಯತ್ ವತಿಯಿಂದ ಆಯೋಜಿಸಿದ ಆವಾಸ್ ಪ್ಲಸ್ 2024 ಆಪ್ ಮೂಲಕ ವಸತಿ, ನಿವೇಶನ ರಹಿತರ ಸಮೀಕ್ಷೆಗೆ ಚಾಲನೆ ಹಾಗೂ ವಸತಿ, ನಿವೇಶನ ಸೌಲಭ್ಯ ಪಡೆಯುವ ಸುವರ್ಣಾವಕಾಶ ಮತ್ತು ಡಾ.ಬಿ.ಆರ್.ಅಂಬೇಡ್ಕರ್, ಬಸವ ವಸತಿ ಯೋಜನೆ ಫಲಾನುಭವಿಗಳಿಗೆ ತಿಳುವಳಿ ಪತ್ರ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದಿನ ಅವಧಿಯಲ್ಲಿ 5 ಸಾವಿರ ಮನೆಗಳು ಕೂಡ ಬಂದಿರಲಿಲ್ಲ. ಇವಾಗ ಒಂದೇ ವರ್ಷದ ಅವಧಿಯಲ್ಲಿ ನಮ್ಮ ಜಿಲ್ಲೆ ಗುಡಿಸಲು ಮುಕ್ತ ಮಾಡುವುದಕ್ಕಾಗಿ ಮುತುವರ್ಜಿವಹಿಸಿ 50 ಸಾವಿರಕ್ಕಿಂತ ಹೆಚ್ಚು ಮನೆಗಳು ಮಂಜೂರು ಮಾಡಿಸಿದ್ದೇನೆ. ಇನ್ನು ಹೆಚ್ಚಿನ ಮನೆಗಳು ಒದಗಿಸುವಂತೆ ಕೇಂದ್ರ ವಸತಿ ಸಚಿವ ಶಿವರಾಜ್ ಸಿಂಗ್ ಚೌವ್ಹಾಣ ಅವರಿಗೆ ಪತ್ರ ಬರೆದಿದ್ದೇನೆ. ಇದಕ್ಕೆ ಅವರು ಸಾಕಾರಾತ್ಮವಾಗಿ ಸ್ಪಂದನೆ ನೀಡಿದ್ದಾರೆ. ಈ ಹಿಂದೆ ಭಾಲ್ಕಿಯನ್ನು ಗುಡಿಸಲು ಮುಕ್ತ ಮಾಡಲು ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ್ ಖಂಡ್ರೆ ಅವರು 25 ಸಾವಿರ ಮನೆ ಮಂಜೂರು ಮಾಡಿಸಿದ್ದರು ಎಂದು ಹೇಳಿದರು.
ಯಾವುದೇ ಮಧ್ಯವರ್ತಿ ಹಾವಳಿ ಇಲ್ಲದೆ ವಸತಿ ರಹಿತರಿಗೆ ವಸತಿ ಒದಗಿಸುವ ಉದ್ದೇಶದಿಂದ ಪ್ರದಾನಮಂತ್ರಿ ಅವಾಸ್ ವಸತಿ ಯೋಜನೆ ಗ್ರಾಮೀಣ ಅಡಿಯಲ್ಲಿ ಆವಾಸ್ ಪ್ಲಸ್ 2024 ಆಪ್ ಜಾರಿಗೆ ತರಲಾಗಿದೆ. ಮುಂದಿನ ದಿನಗಳಲ್ಲಿ ಈ ಆಪ್ ಮೂಲಕ ಸಮೀಕ್ಷೆ ನಡೆಸಿ ಫಲಾನುಭವಿಗಳ ಆಯ್ಕೆ ನಡೆಯಲಿದೆ. ಯಾರಿಗೆ ಮನೆ ಇಲ್ಲವೋ ಅವರು ಈ ಆಪ್ನಲ್ಲಿ ತಮ್ಮ ಮಾಹಿತಿ ಒದಗಿಸಬೇಕು. ಈಗಾಗಲೇ ಲಂಜವಾಡ ಗ್ರಾಮ ಪಂಚಾಯತಿಯ ಸೋಂಪುರ್ ಗ್ರಾಮದ ಫಲಾನುಭವಿಯಾದ ಗಾಯಬಾಯಿ ಆನಂದಗೀರಿಯವರ ಮಾಹಿತಿಯನ್ನು ಆವಾಸ್ ಫ್ಲಸ್ ಆಪ್ನಲ್ಲಿ ಸೇರಿಸಲಾಗಿದೆ. ಇವರು ಈ ಆವಾಸ್ ಫ್ಲಸ್ ಆಪ್ನಲ್ಲಿ ಸೇರಿಸಲಾದ ಜಿಲ್ಲೆಯ ಮೊದಲ ಫಲಾನುಭವಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಲಂಜವಾಡ ಗ್ರಾಮದ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ್ ಬದೋಲೆ ಮಾತನಾಡಿ, ನೆಚ್ಚಿನ ಸಂಸದರಾದ ಸಾಗರ್ ಖಂಡ್ರೆ ಅವರು ಹೆಚ್ಚು ಮುತ್ತುವರ್ಜಿ ವಹಿಸಿ ಈ ಬಾರಿ 40 ಸಾವಿರಕ್ಕೂ ಹೆಚ್ಚಿನ ಮನೆಗಳನ್ನು ಮಂಜೂರು ಮಾಡಿಸಿದ್ದಾರೆ. ಅದೇ ರೀತಿ ಬಸವ ವಸತಿ ಯೋಜನೆಯಡಿ 758 ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಯೋಜನೆ ಅಡಿಯಲ್ಲಿ 1,000 ಸಾವಿರ ಮನೆಗಳು ಮಂಜೂರು ಆಗಿವೆ ಎಂದು ತಿಳಿಸಿದರು.
ಈ ಹಿಂದೆ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಸಾಕಷ್ಟು ಗೊಂದಲ ಸೃಷ್ಟಿಯಾಗುತ್ತಿದ್ದವು. ಸರ್ಕಾರ ಈ ಗೊಂದಲಗಳ ನಿವಾರಣೆಗೆ ಆವಾಸ್ ಪ್ಲಸ್ 2024 ಆಪ್ ಜಾರಿಗೆ ತಂದಿದ್ದು, ಇದರ ಮೂಲಕ ಸಮೀಕ್ಷೆ ನಡೆಸುವಂತೆ ಸರ್ಕಾರ ಆದೇಶ ನೀಡಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಸಂಬಂಧಪಟ್ಟ ಅಧಿಕಾರಿ ಹಾಗೂ ಸಿಬ್ಬಂದಿ ತರಬೇತಿ ನೀಡಲಾಗಿದೆ. ಅಧಿಕಾರಿಗಳು ಯಾವುದೇ ನ್ಯೂನ್ಯತೆ ಇಲ್ಲದೆ ಸಮೀಕ್ಷೆ ಮಾಡಬೇಕು. ಜನರು ಸಹ ಅಧಿಕಾರಿಗಳಿಗೆ ಸಾಹಕಾರ ನೀಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಬಸವ ವಸತಿ ಯೋಜನೆಯಡಿ ಆಯ್ಕೆಯಾದ 91 ಫಲಾನುಭವಿಗಳಿಗೆ ತಿಳುವಳಿಕೆ ಪತ್ರ ವಿತರಣೆ ಮಾಡಲಾಯಿತು. ಹಾಗೆಯೇ ಆವಾಸ್ ಪ್ಲಸ್ ಆಪ್ 2024 ರ ಪೋಸ್ಟರ್ ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ರಾಧಿಕಾ ಶುಕ್ರಚಾರ್ಯ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲ್ಲೂಕಾ ಅಧ್ಯಕ್ಷ ಹಣಮಂತ್ ಚೌವ್ಹಾಣ, ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಜಗನ್ನಾಥ್ ಮೂರ್ತಿ, ತಾಲ್ಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಸೂರ್ಯಕಾಂತ್ ಬಿರಾದಾರ್, ತಹಸೀಲ್ದಾರ್ ಮಲ್ಲಿಕಾರ್ಜುನ್ ವಡ್ಡನಕೆರೆ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಪಿ. ಎಂ ಮಲ್ಲಿಕಾರ್ಜುನ್, ಪಶುಪಾಲನೆ ಇಲಾಖೆ ಸಹಾಯಕ ನಿರ್ದೇಶಕ ಡಾ. ಕಾಮರಾಯ ಜಗ್ಗಿನವರ್, ಕಾರ್ಮಿಕ ನಿರೀಕ್ಷಕ ಮಂಜುನಾಥ್ ಹದಗುಂಡಿ, ತೋಟಗಾರಿಕೆ ಎಸ್ ಡಿ ಎಚ್ ಮಾರುತಿ, ಲಂಜವಾಡ್ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಿಶ್ವದೀಪ್, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರು ಸೂರ್ಯಕಾಂತ್ ಅಹ್ಮದಾಬಾದೆ ಹಾಗೂ ರಾಜಕುಮಾರ್, ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.







