ಬೀದರ್ | ವಂದೇ ಮಾತರಂ ಘೋಷಣೆ ಕೂಗಿದ ವಿದ್ಯಾರ್ಥಿಗೆ ಎಚ್ಚರಿಕೆ ಆರೋಪ : ಶಾಹೀನ್ ಕಾಲೇಜಿನ ಪ್ರಾಂಶುಪಾಲರ ವಿರುದ್ಧ ಪ್ರಕರಣ ದಾಖಲು

ಬೀದರ್ : ಸ್ವಾತಂತ್ರ್ಯ ದಿನದಂದು ವಂದೇ ಮಾತರಂ ಘೋಷಣೆ ಕೂಗಿದ ವಿದ್ಯಾರ್ಥಿಗೆ ಎಚ್ಚರಿಕೆ ನೀಡಿರುವ ಆರೋಪದಲ್ಲಿ ಚಿಟಗುಪ್ಪ ಪಟ್ಟಣದ ಶಾಹೀನ್ ಕಾಲೇಜಿನ ಪ್ರಾಂಶುಪಾಲರ ವಿರುದ್ಧ ಪ್ರಕರಣ ದಾಖಲಾಗಿದೆ.
ಈ ಕುರಿತು ವಿದ್ಯಾರ್ಥಿಯ ತಂದೆ ಹಿರೋಬಾ ಗೌಳಿ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
"ಚಿಟಗುಪ್ಪಾದ ಶಾಹೀನ್ ಕಾಲೇಜಿನಲ್ಲಿ ಆ.15ರಂದು ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಗೀತೆ ಹಾಡಿದ ಬಳಿಕ ನನ್ನ ಮಗ ಹಾಗೂ ಇತರೆ ವಿದ್ಯಾರ್ಥಿಗಳು ಬೋಲೋ ಭಾರತ ಮಾತಾಕೀ ಜೈ, ವಂದೆ ಮಾತರಂ ಎಂದು ಘೋಷಣೆ ಕೂಗಿದ್ದರು. ಇದಾದ ಬಳಿಕ ಕಾಲೇಜಿನಿಂದ ಹೊರಗಡೆ ಬರುತ್ತಿರುವಾಗ ಪ್ರಾಂಶುಪಾಲ ಅಬ್ದುಲ್ ಹಕೀಮ್ ಅವರು ನನ್ನ ಮಗನಿಗೆ ತಡೆದು ನೀವು ಕೂಗಿದ ಘೋಷಣೆಗಳು ಒಂದು ಧಾರ್ಮಿಕ ಸಮುದಾಯಕ್ಕೆ ಸೇರಿದ್ದು, ಇನ್ನು ಈ ಘೋಷಣೆಗಳನ್ನು ಕೂಗಬಾರದೆಂದು ಬೆದರಿಸಿದ್ದಾರೆ "ಎಂದು ಹಿರೋಬಾ ಗೌಳಿ ಅವರು ಆರೋಪಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಚಿಟಗುಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ತಿಳಿದು ಬಂದಿದೆ.




