Bidar | ದಲಿತ ಬಾಲಕಿ ಕೊಲೆ ಪ್ರಕರಣವನ್ನು ಎಸ್ಐಟಿ ತನಿಖೆಗೆ ಒಪ್ಪಿಸಲು ಒತ್ತಾಯಿಸಿ ಪ್ರತಿಭಟನೆ

ಬೀದರ್: ಔರಾದ್ ತಾಲ್ಲೂಕಿನ ಬೆಳಕುಣಿ ಗ್ರಾಮದ 16 ವರ್ಷದ ದಲಿತ ಬಾಲಕಿ ಕೊಲೆ ಪ್ರಕರಣವನ್ನು ಎಸ್ಐಟಿ ತನಿಖೆಗೆ ಒಪ್ಪಿಸಬೇಕು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಅವರನ್ನು ಅಮಾನತುಗೊಳಿಸಿ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿ ಪ್ರಗತಿಪರ ಮತ್ತು ದಲಿತ ಸಂಘಟನೆಗಳ ಒಕ್ಕೂಟ ವತಿಯಿಂದ ಶನಿವಾರ ಪ್ರತಿಭಟನೆ ನಡೆಸಲಾಯಿತು.
ಹುಮನಾಬಾದ್ನ ಡಿವೈಎಸ್ಪಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು, ಕಲಬುರಗಿಯ ಉಪ ಆರಕ್ಷಕ ಮಹಾನಿರೀಕ್ಷಕರ ಮೂಲಕ ಗೃಹ ಸಚಿವರಿಗೆ ಮನವಿ ಸಲ್ಲಿಸಿದರು.
ಮನವಿಯಲ್ಲಿ, ಬೆಳಕುಣಿ ಗ್ರಾಮದ 16 ವರ್ಷದ ಬಾಲಕಿಯನ್ನು ಲಖನ್ ಪವಾರ್ (35) ಎಂಬಾತ ಮೇ 8ರಂದು ಲೈಂಗಿಕ ದೌರ್ಜನ್ಯ ಎಸಗಿ ಕ್ರೂರವಾಗಿ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಬಳಿಕ ಪ್ರಕರಣವನ್ನು ಮುಚ್ಚಿಹಾಕಲು ಬಾಲಕಿ ಮನೆ ಮೇಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ಯುಡಿಆರ್ ವರದಿ ಸಿದ್ಧಪಡಿಸಿ, ಬಾಲಕಿಯ ತಾಯಿಯಿಂದ ಒತ್ತಾಯಪೂರ್ವಕವಾಗಿ ಸಹಿ ಪಡೆಯಲಾಗಿದೆ ಎಂದು ದೂರಲಾಗಿದೆ.
ಕುಸ್ತಿ ಹಾಗೂ ಕಬ್ಬಡಿ ಕ್ರೀಡಾಪಟುವಾಗಿದ್ದ ಬಾಲಕಿಗೆ ತರಬೇತಿ ನೀಡುವ ನೆಪದಲ್ಲಿ ಲಖನ್ ಪವಾರ್ ಸುಮಾರು ಎರಡು ವರ್ಷಗಳಿಂದ ತನ್ನ ಮನೆಯಲ್ಲಿ ಕೆಲಸ ಮಾಡಿಸಿಕೊಂಡಿದ್ದಾನೆ. ಆತನ ಅಸಭ್ಯ ವರ್ತನೆಯಿಂದ ಗಾಬರಿಗೊಂಡ ಬಾಲಕಿ ಏಪ್ರಿಲ್ ತಿಂಗಳಲ್ಲಿ ಮನೆಗೆ ಮರಳಿದ್ದಳು. ನಂತರ ಆಕೆಯನ್ನು ಅಪಹರಿಸಿ ಕೊಲೆ ಮಾಡಲಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಈ ಪ್ರಕರಣದ ಕುರಿತು ಚರ್ಚಿಸಲು ಅಂಬೇಡ್ಕರ್ ಭವನದಲ್ಲಿ ಸಭೆ ಸೇರಿದ್ದ ದಲಿತ ಸಂಘಟನೆಗಳ ಮುಖಂಡರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ವಿಡಿಯೋ ಕಾಲ್ ಮೂಲಕ ಬೆದರಿಕೆ ಹಾಕಿದ್ದಾರೆ ಎಂಬ ಗಂಭೀರ ಆರೋಪವೂ ಮನವಿಯಲ್ಲಿ ಮಾಡಲಾಗಿದೆ. “ಪ್ರಕರಣದ ಬಗ್ಗೆ ನನ್ನನ್ನು ಸಂಪರ್ಕಿಸದೆ ಸಾರ್ವಜನಿಕವಾಗಿ ಚರ್ಚೆ ಅಥವಾ ಪ್ರತಿಭಟನೆ ನಡೆಸಿದರೆ ಪ್ರಕರಣ ದಾಖಲಿಸಲಾಗುವುದು” ಎಂದು ಎಚ್ಚರಿಕೆ ನೀಡಲಾಗಿದೆ ಎಂದು ಆರೋಪಿಸಲಾಗಿದೆ.
ಪ್ರತಿಭಟನಾಕಾರರು ಕೊಲೆ ಆರೋಪಿ ಲಖನ್ ಪವಾರ್ ವಿರುದ್ಧ ಅಪಹರಣ, ಪೋಕ್ಸೋ ಹಾಗೂ ಕೊಲೆ ಪ್ರಕರಣ ದಾಖಲಿಸಬೇಕು, ಪ್ರಕರಣದ ತನಿಖೆಗೆ ಎಸ್ಐಟಿ ರಚಿಸಬೇಕು, ಬಾಲಕಿಯ ಶವ ಮರುಪರೀಕ್ಷೆ ನಡೆಸಬೇಕು ಹಾಗೂ ಕುಟುಂಬಕ್ಕೆ ಸರ್ಕಾರಿ ಉದ್ಯೋಗ ನೀಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಅಂಕುಶ್ ಗೋಖಲೆ, ಶಿವರಾಜ್ ಚಿನಕೇರಿ, ಗಜೇಂದ್ರ ಕನಕಟ್ಟಾಕರ್, ಗೌತಮ್ ಚೌವ್ಹಾಣ್, ಗಣಪತಿ ಅಷ್ಟೂರೆ, ದಿಲೀಪಕುಮಾರ್ ಮರಪಳ್ಳಿ, ಜಮೀರ್ ಖಾನ್, ರಾಜಕುಮಾರ್ ಮೂಲಭಾರತಿ, ಕಪಿಲ್ ಗೋಡಬೋಲೆ, ವಿಷ್ಣುವರ್ಧನ್ ವಾಲ್ದೊಡ್ಡಿ, ಶಶಿ ಡಾಂಗೆ, ಹರ್ಷಿತ್ ದಾಂಡೆಕರ್, ರಾಹುಲ್ ಖಂದಾರೆ ಹಾಗೂ ರಾಜಕುಮಾರ್ ಶಿಂದೆ ಸೇರಿದಂತೆ ನೂರಾರು ಜನರು ಉಪಸ್ಥಿತರಿದ್ದರು.






