Bidar | ಮರಾಠಿ, ಉರ್ದು ಮಾಧ್ಯಮದ ಶಿಕ್ಷಕರ ಹುದ್ದೆ ಸೇರ್ಪಡೆಗೆ ಆಗ್ರಹಿಸಿ ಪ್ರತಿಭಟನೆ

ಬೀದರ್: ರಾಜ್ಯ ಸರ್ಕಾರ 15 ಸಾವಿರ ಶಿಕ್ಷಕರ ನೇಮಕಾತಿಗೆ ಅಧಿಸೂಚನೆ ಹೊರಡಿಸಿರುವ ಹಿನ್ನೆಲೆಯಲ್ಲಿ, ಬೀದರ್ ಜಿಲ್ಲೆಯ ಮರಾಠಿ, ಉರ್ದು ಸೇರಿದಂತೆ ಎಲ್ಲ ಭಾಷಾ ಮಾಧ್ಯಮಗಳ ಮಂಜೂರಾದ ಹಾಗೂ ಖಾಲಿ ಹುದ್ದೆಗಳನ್ನು ಗುರುತಿಸಿ, ಅಗತ್ಯ ಹುದ್ದೆಗಳಿಗೆ ಪೂರಕ ಅಧಿಸೂಚನೆ ಹೊರಡಿಸಬೇಕು ಎಂದು ಆಗ್ರಹಿಸಿ ಮೈನಾರಿಟಿ ರಿಫಾರ್ಮ್ಸ್ ಫೋರಂ (ಎಂಆರ್ಎಫ್) ವತಿಯಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಎಂಆರ್ಎಫ್ ಅಧ್ಯಕ್ಷ ಡಾ. ಮಕ್ಸೂದ್ ಚಂದಾ ಅವರ ನೇತೃತ್ವದಲ್ಲಿ ನಗರದ ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಡಿಡಿಪಿಐ ಹಾಗೂ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಡಾ. ಮಕ್ಸೂದ್ ಚಂದಾ, ಶಿಕ್ಷಣ ಹಾಗೂ ಸಮಾನತೆಯ ಹಕ್ಕಿನ ಬಗ್ಗೆ ಮಾತನಾಡುವ ಸರ್ಕಾರ ಮರಾಠಿ ಮತ್ತು ಉರ್ದು ಮಾಧ್ಯಮದ ಅರ್ಹ ಶಿಕ್ಷಕ ಅಭ್ಯರ್ಥಿಗಳಿಗೆ ಅನ್ಯಾಯ ಮಾಡಬಾರದು. ಪ್ರಸ್ತುತ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯನ್ನು ಪರಿಷ್ಕರಿಸಿ, ಎರಡೂ ಮಾಧ್ಯಮಗಳ ಅರ್ಹ ಅಭ್ಯರ್ಥಿಗಳನ್ನು ನೇಮಕಾತಿಗೆ ಪರಿಗಣಿಸಬೇಕು ಎಂದು ಒತ್ತಾಯಿಸಿದರು.
ಬೀದರ್ ಜಿಲ್ಲೆ ಗಡಿ ಪ್ರದೇಶವಾಗಿದ್ದು, ನಿಜಾಮರ ಕಾಲದಿಂದಲೂ ಉರ್ದು ಮಾಧ್ಯಮದ ಹಲವು ಶಿಕ್ಷಣ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಮಹಾರಾಷ್ಟ್ರ ಗಡಿ ಹೊಂದಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ಮರಾಠಿ ಮಾಧ್ಯಮದ ಶಾಲೆಗಳೂ ಇವೆ. ಈ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿದ್ದು, ಅರ್ಹ ಅಭ್ಯರ್ಥಿಗಳು ಹಲವು ವರ್ಷಗಳಿಂದ ನೇಮಕಾತಿಗಾಗಿ ಕಾಯುತ್ತಿದ್ದಾರೆ ಎಂದು ಹೇಳಿದರು.
ಪ್ರಸ್ತುತ 15 ಸಾವಿರ ಶಿಕ್ಷಕರ ನೇಮಕಾತಿಗೆ ಅಧಿಸೂಚನೆ ಹೊರಬಂದಿರುವುದರಿಂದ ಅಭ್ಯರ್ಥಿಗಳಲ್ಲಿ ನಿರೀಕ್ಷೆ ಮೂಡಿದೆ. ಆದರೆ ಮರಾಠಿ ಹಾಗೂ ಉರ್ದು ಮಾಧ್ಯಮಗಳನ್ನು ನೇಮಕಾತಿ ಪ್ರಕ್ರಿಯೆಯಿಂದ ಹೊರಗಿಟ್ಟರೆ ಮುಂದಿನ ಅವಕಾಶ ಯಾವಾಗ ದೊರೆಯಲಿದೆ ಎಂಬುದು ಸ್ಪಷ್ಟವಿಲ್ಲ. ಟಿಇಟಿ ಸೇರಿದಂತೆ ಅಗತ್ಯ ಅರ್ಹತೆ ಪಡೆದಿರುವ ಹಲವು ಅಭ್ಯರ್ಥಿಗಳು ಉದ್ಯೋಗದ ನಿರೀಕ್ಷೆಯಲ್ಲಿದ್ದು, ವಿಳಂಬವಾದರೆ ವಯೋಮಿತಿ ದಾಟಿ ಉದ್ಯೋಗಾವಕಾಶ ಕಳೆದುಕೊಳ್ಳುವ ಆತಂಕವಿದೆ ಎಂದರು.
ಕನ್ನಡ ಅಥವಾ ಇಂಗ್ಲಿಷ್ ಮಾಧ್ಯಮದ ಶಿಕ್ಷಕರ ನೇಮಕಾತಿಗೆ ತಮ್ಮ ವಿರೋಧವಿಲ್ಲ. ಆದರೆ ಮರಾಠಿ ಮತ್ತು ಉರ್ದು ಮಾಧ್ಯಮದ ಅರ್ಹ ಅಭ್ಯರ್ಥಿಗಳಿಗೂ ಸಮಾನ ಅವಕಾಶ ನೀಡಬೇಕು. ಪ್ರಸ್ತುತ ಅಧಿಸೂಚನೆಯನ್ನು ಪರಿಷ್ಕರಿಸಿ ಅಗತ್ಯ ಹುದ್ದೆಗಳನ್ನು ಸೇರಿಸಿ ಪೂರಕ ಅಧಿಸೂಚನೆ ಹೊರಡಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಸರ್ಕಾರ ಹಾಗೂ ಶಿಕ್ಷಣ ಇಲಾಖೆ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಿ ಶೀಘ್ರ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಶಿಕ್ಷಕ ಅಭ್ಯರ್ಥಿಗಳ ಹಕ್ಕಿಗಾಗಿ ಕಾನೂನು ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಎಂ.ಡಿ. ಶಕೀಲ್ ಅಹ್ಮದ್, ಎಂ.ಡಿ. ಮುಬಾಶಿರ್ ಶಿಂಧೆ, ಸೈಯದ್ ಮನ್ಸೂರ್ ಖಾದ್ರಿ, ಅನ್ಸಾರ್ ಉಲ್ಲಾ ಬೇಗ್, ಯೂಸುಫ್ ರಹೀಂ ಬಿದ್ರಿ, ಎಂ.ಡಿ. ಅಮೀನ್ ನವಾಜ್, ಸಜ್ಜಾದ್ ಸಾಹೇಬ್, ಶೇಖ್ ಮಸೀಯುದ್ದೀನ್, ಎಂ.ಡಿ. ಸಾಮಿ, ಎಂ.ಡಿ. ಸುಲ್ತಾನ್ ಹಾಗೂ ಖಲೀಲ್ ಖಾನ್ ಸೇರಿದಂತೆ ಉರ್ದು, ಮರಾಠಿ ಶಿಕ್ಷಕರು ಮತ್ತು ಇತರರು ಭಾಗವಹಿಸಿದ್ದರು.






