Bidar | ನೋಂದಣಿಯಿಲ್ಲದ ಶಾಲಾ ವಾಹನಗಳನ್ನು ತಕ್ಷಣ ಜಪ್ತಿ ಮಾಡಿ: ಜಗನ್ನಾಥ್ ಹಲಮಡಗಿ

ಬೀದರ್: ಜಿಲ್ಲೆಯಲ್ಲಿ ನೋಂದಣಿಯಾಗದೆ ಸಂಚರಿಸುವ ಶಾಲಾ ವಾಹನಗಳನ್ನು ಕೂಡಲೇ ಜಪ್ತಿ ಮಾಡಬೇಕು ಎಂದು ರಾಜ್ಯ ಮಕ್ಕಳ ಆಯೋಗದ ಸದಸ್ಯ ಜಗನ್ನಾಥ್ ಹಲಮಡಗಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯಲ್ಲಿ ಶನಿವಾರ ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ಶಾಲಾ ವಾಹನಗಳಿಗೆ ಕಡ್ಡಾಯವಾಗಿ ವಿಮೆ (ಇನ್ಸೂರೆನ್ಸ್), ಫಿಟ್ನೆಸ್ ಪ್ರಮಾಣಪತ್ರ, ಅನುಭವಿ ಚಾಲಕ ಹಾಗೂ ಮಕ್ಕಳ ಸುರಕ್ಷತೆಗಾಗಿ ಸಹಾಯಕ ಸಿಬ್ಬಂದಿ (ಟೇಕ್ಕೇರ್) ಇರಬೇಕು. ವಾಹನದಲ್ಲಿ ಅನುಮತಿ ಇರುವಷ್ಟು ಮಕ್ಕಳನ್ನಷ್ಟೇ ಕೂರಿಸಬೇಕು. ಹೆಚ್ಚಿನ ಮಕ್ಕಳನ್ನು ತುಂಬಬಾರದು. ನಿಯಮ ಉಲ್ಲಂಘನೆ ಕಂಡುಬಂದರೆ ಶಾಲಾ ಆಡಳಿತ ಮಂಡಳಿಗೆ ನೋಟಿಸ್ ನೀಡಿ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಜಿಲ್ಲೆಯಲ್ಲಿ ಅನಧಿಕೃತ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ ಎಂಬ ದೂರುಗಳು ಬಂದಿದ್ದು, ಅಂತಹ ಶಾಲೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. ಇಂತಹ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳ ಸುರಕ್ಷತೆಗೆ ಯಾರು ಹೊಣೆ ಎಂದು ಪ್ರಶ್ನಿಸಿದ ಅವರು, ಅನಧಿಕೃತ ಶಾಲೆಗಳು ಪತ್ತೆಯಾದರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಕನ್ನಡ ಮಾಧ್ಯಮ ಶಾಲೆಯ ಮಾನ್ಯತೆ ಪಡೆದು ಇಂಗ್ಲಿಷ್ ಮಾಧ್ಯಮದಲ್ಲಿ ಬೋಧನೆ ನಡೆಸುತ್ತಿರುವ ಕುರಿತು ದೂರುಗಳು ಬಂದಿವೆ. ಇಂತಹ ಶಾಲೆಗಳ ವಿರುದ್ಧ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಅನುದಾನಿತ ಶಾಲೆಗಳಲ್ಲಿ ವಿದ್ಯಾರ್ಥಿಗಳಿಂದ ಹೆಚ್ಚುವರಿ ಶುಲ್ಕ ವಸೂಲಿ ಮಾಡುತ್ತಿರುವ ಆರೋಪಗಳನ್ನೂ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯ ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ಸಾಬೂನು, ಕೊಬ್ಬರಿ ಎಣ್ಣೆ, ಬೆಡ್ಶೀಟ್ ಹಾಗೂ ನೋಟ್ಬುಕ್ಗಳನ್ನು ಸಮರ್ಪಕವಾಗಿ ವಿತರಿಸುತ್ತಿಲ್ಲ ಎಂಬ ದೂರುಗಳು ಬಂದಿವೆ. ಸರ್ಕಾರದಿಂದ ಅನುದಾನ ಬಿಡುಗಡೆಯಾದರೂ ವಸ್ತುಗಳನ್ನು ವಿತರಿಸದ ಟೆಂಡರ್ದಾರರಿಗೆ ನೋಟಿಸ್ ನೀಡಬೇಕು. ತಾವು ಕೂಡ ಅಚಾನಕ್ವಾಗಿ ವಸತಿ ನಿಲಯಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವುದಾಗಿ ತಿಳಿಸಿದರು.
ಕಾರ್ಮಿಕ ಇಲಾಖೆಯು ಕಳೆದ ಮೂರು ತಿಂಗಳಲ್ಲಿ ಕೇವಲ ಮೂರು ಪ್ರಕರಣಗಳನ್ನು ಮಾತ್ರ ದಾಖಲಿಸಿರುವುದನ್ನು ಪ್ರಶ್ನಿಸಿದ ಅವರು, ಧಾಬಾ, ಹೋಟೆಲ್, ಗ್ಯಾರೇಜ್, ಕಂಪನಿ, ಕಿರಾಣಿ ಅಂಗಡಿ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಬಾಲ ಕಾರ್ಮಿಕರನ್ನು ದುಡಿಸಿಕೊಳ್ಳುವವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಸಭೆಯಲ್ಲಿ ಮಾತನಾಡಿದ ಪ್ರಾದೇಶಿಕ ಸಾರಿಗೆ ಅಧಿಕಾರಿ ಜಾಫರ್ ಸಾದಿಕ್, ಜಿಲ್ಲೆಯಲ್ಲಿ ಒಟ್ಟು 413 ಶಾಲಾ ವಾಹನಗಳಿದ್ದು, ಅವುಗಳಲ್ಲಿ 378 ವಾಹನಗಳು ನೋಂದಣಿಯಾಗಿವೆ. 24 ವಾಹನಗಳ ನೋಂದಣಿ ನವೀಕರಣ ಬಾಕಿಯಿದ್ದು, 15 ವರ್ಷ ಪೂರೈಸಿದ 11 ವಾಹನಗಳನ್ನು ರದ್ದುಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.
2025–26ನೇ ಸಾಲಿನಲ್ಲಿ ಶಾಲಾ ವಾಹನಗಳಿಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ 553 ಪ್ರಕರಣಗಳನ್ನು ದಾಖಲಿಸಿ, ಸುಮಾರು 60 ಲಕ್ಷ ರೂ. ದಂಡ ಹಾಗೂ ತೆರಿಗೆ ವಸೂಲಿ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಜಿಲ್ಲಾ ಮಕ್ಕಳ ರ್ಷಕಣಾಧಿಕಾರಿ ಶಾರದಾ, ಕೆಕೆಆರಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಂದ್ರ ಜಾಧವ್, ಸಿಪಿಐ ಪಾಲಾಕ್ಷಯ್ಯ, ಬೀದರ್ ಬಿಇಒ ಮದರ್ ಖಾನ್, ಪಿಎಂ ಪೋಷಣ ಸಹಾಯಕ ನಿರ್ದೇಶಕ ಜಾಕಿರ್ ಹುಸೇನ್, ಅರ್ಜುನ್ ಸಿತಾಳಗೇರಾ, ಶಿವಕುಮಾರ್, ರತನಸಿಂಗ್ ಠಾಕೂರ್, ರಮೇಶ್ ಬಿರಾದಾರ್, ಉಮೇಶ ಕೆ., ರಾಧಿಕಾ, ರಾಜಕುಮಾರ್, ಪ್ರಫುಲ್, ಪ್ರಕಾಶ್ ಎಚ್. ಹಾಗೂ ಮಲ್ಲಿಕಾರ್ಜುನ್ ಎಂ. ಸೇರಿದಂತೆ ಇತರರು ಇದ್ದರು.






