ಬೀದರ್ | ಸಂಶೋಧನೆಯಲ್ಲಿ ತೊಡಗಲು ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕಿದೆ : ಸುಬೋಧಕುಮಾರ್ ನಾಯಕ್

ಬೀದರ್ : ಸಂಶೋಧನೆಯಲ್ಲಿ ತೊಡಗಲು ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕಿದೆ ಎಂದು ಪುಣೆಯ ಡಿ ಆರ್ ಡಿ ಓ ಪ್ರಖ್ಯಾತ ವಿಜ್ಞಾನಿ ಮತ್ತು ನಿರ್ದೇಶಕರಾದ ಸುಭೋಧಕುಮಾರ್ ನಾಯಕ್ ಅಭಿಪ್ರಾಯಪಟ್ಟಿದ್ದಾರೆ.
ಬುಧವಾರ ಭಾಲ್ಕಿ ತಾಲ್ಲೂಕಿನ ಕೇಸರ್ ಜವಳಗಾ ಗ್ರಾಮದ ಪಂಚಶೀಲ ಶಿಕ್ಷಣ ಸಂಸ್ಥೆಯ ಸಂಗಮೇಶ್ವರ್ ಪ್ರೌಢ ಶಾಲೆಗೆ ಭೇಟಿ ನೀಡಿ ಮಾತನಾಡಿದ ಅವರು, ಶಾಲೆಯಲ್ಲಿನ ಶಿಕ್ಷಕ ಸಮೂಹ ಮಕ್ಕಳ ಕಲಿಕೆಯಲ್ಲಿ ತೊಡಗಿಸಿಕೊಳ್ಳುವುದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ಪಠ್ಯೇತರ ಚಟುವಟಿಕೆಗಳು ಗುಣಮಟ್ಟದಿಂದ ಕೂಡಿವೆ ಎಂದರು.
ಭವಿಷ್ಯದ ವಿಜ್ಞಾನಿಗಳನ್ನು ರೂಪುಗೊಳಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಲ್ಲಿ ಮೂಲ ವಿಜ್ಞಾನ, ವಿಜ್ಞಾನ ಹಾಗೂ ಸಂಶೋಧನೆಯಲ್ಲಿ ತೊಡಗಲು ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕಿದೆ. ಭಾರತದಲ್ಲಿ ವಿಜ್ಞಾನಿಗಳಾಗಿ ಮುಂದೆ ಬರುವವರ ಸಂಖ್ಯೆ ಅತ್ಯಂತ ಕಡಿಮೆ ಇದೆ. ಸುಮಾರು 120 ಕೋಟಿ ಜನಸಂಖ್ಯೆ ಹೊಂದಿರುವ ಈ ದೇಶದಲ್ಲಿ ವಿಜ್ಞಾನಿಗಳಾಗುವವರ ಸಂಖ್ಯೆ ಕೇವಲ ಶೇ. 1.5 ರಷ್ಟು ಮಾತ್ರ ಇದೆ. ಆದರೆ, ಅಮೆರಿಕಾದಲ್ಲಿ ಇದರ ಪ್ರಮಾಣ ಶೇ.58, ಜಪಾನಿನಲ್ಲಿ ಶೇ.48 ಹಾಗೂ ಚೀನಾದಲ್ಲಿ ಶೇ.42ರಷ್ಟು ವಿಜ್ಞಾನಿಗಳಿದ್ದಾರೆ. ಇಂತಹ ಬದಲಾವಣೆ ನಮ್ಮಲ್ಲಿಯೂ ಕಾಣಬೇಕಾಗಿದೆ ಎಂದು ಅವರು ತಿಳಿಸಿದರು.
ವಿಜ್ಞಾನಿ ವಿದ್ಯಾವತಿ ಎಸ್. ಠಾಕುರ್ ನಾಯಕ್ ಅವರು ಮಾತನಾಡಿ, ಪ್ರತಿ ಮಗು ತನ್ನದೇ ಆದ ಕೌಶಲ್ಯ ಮತ್ತು ಬುದ್ಧಿ ಶಕ್ತಿ ಹೊಂದಿದೆ. ಶಿಕ್ಷಕರು ಅದನ್ನು ಗುರುತಿಸಿ ಶೈಕ್ಷಣಿಕ ಚಟುವಟಿಕೆಗೆ ಪ್ರೋತ್ಸಾಹಿಸಿದರೆ ಮಗುವಿನ ಶೈಕ್ಷಣಿಕ ಗುಣಮಟ್ಟ ವೃದ್ಧಿಸುತ್ತದೆ ಎಂದು ಹೇಳುತ್ತಾ, ತಮ್ಮ ಶಾಲಾ ದಿನಗಳ ನೆನಪುಗಳನ್ನು ಮತ್ತು ಅನುಭವಗಳನ್ನು ವಿದ್ಯಾರ್ಥಿ ಮತ್ತು ಶಿಕ್ಷಕರೊಂದಿಗೆ ಹಂಚಿಕೊಂಡರು.
ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರಾದ ಭೀಮ್ ಎಳ್ನುರೆ, ಸಂಜೀವಕುಮಾರ್ ಖೊಬ್ಬರಗಡೆ, ರತ್ನಮ್ಮಾ ಪರಷೆಣೆ, ಪ್ರಭಾವತಿ ರೊಟ್ಟಿ, ಸಾಯಿನಾಥ್ ಗೊರೆ, ಮಹೇಶ್ ನವಾಡೇ, ಅಶ್ವಿನಿ ಕರಕಲ್ಲೆ, ಶ್ರೀಕಾಂತ್ ಖೇಳಗೆ, ಮಹಾದೇವ್ ವಾಗೆ, ವಿಮಲ್ ಸೂರ್ಯವಂಶಿ, ಪ್ರಭುರಾವ್ ಮಂಗಣೆ, ಮಾಧವರಾವ್ ತಾoಬೋಲೇ, ಬಾಬುರಾವ್ ಕರಕಲ್ಲೆ, ಚಂದ್ರಪ್ಪ , ಮಾರುತಿ ಸಗರ್, ರಮೇಶ್ ಕಾಣೆಕರ್, ವಿಜಯ ಲಕ್ಷ್ಮಿ ಪೂಜಾರಿ, ಧರ್ಮವೀರ್ ಪಾಟೀಲ್, ಪಂಡಿತ್ ಕೋಳಿಕರ್, ದತ್ತಾತ್ರಿ, ಇಂದ್ರಜಿತ್ ಗುಪ್ತ, ಉತ್ತಮ ವಾಗೆ, ಶ್ರೀಧರ್, ದಿಲೀಪ್ ಗಂಟೆ ಹಾಗೂ ರಮೇಶ್ ಧೋಲಿ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.







