ಬೀದರ್ | ಶಾರ್ಟ್ ಸರ್ಕ್ಯೂಟ್ ನಿಂದ ಕಬ್ಬಿಗೆ ಬೆಂಕಿ

ಬೀದರ್ : ಶಾರ್ಟ್ ಸರ್ಕ್ಯೂಟ್ ನಿಂದ 2 ಎಕರೆ 5 ಗುಂಟೆ ಭೂಮಿಯಲ್ಲಿ ಬೆಳೆದ ಕಬ್ಬಿಗೆ ಬೆಂಕಿ ತಗುಲಿದ ಘಟನೆ ಶುಕ್ರವಾರ ಸಾಯಂಕಾಲ ಭಾಲ್ಕಿ ತಾಲೂಕಿನ ನಾಗರಾಳ್ ಗ್ರಾಮದಲ್ಲಿ ನಡೆದಿದ್ದು, ಕಬ್ಬು ಬೆಳೆದ ರೈತ ಕಂಗಾಲಾಗಿದ್ದಾರೆ.
ನಾಗರಾಳ್ ಗ್ರಾಮದ ನಿವಾಸಿ ದಿಲೀಪ್ ಬಿರಾದರ್ ಎನ್ನುವ ರೈತರಿಗೆ ಸೇರಿದ ಕಬ್ಬಿಗೆ ಬೆಂಕಿ ತಗುಲಿದೆ. ದಿಲೀಪ್ ಅವರಿಗೆ 2 ಎಕರೆ 5 ಗುಂಟೆ ಜಮೀನು ಇದ್ದು, ಎಲ್ಲ ಜಮೀನಿನಲ್ಲಿ ಅವರು ಕಬ್ಬು ಬೆಳೆದಿದ್ದರು. ಅವರು ಬೆಳೆದ ಕಬ್ಬಿನ ಹೊಲದ ಮೇಲಿಂದ ಜೆಸ್ಕಾಂ ನ ಮುಖ್ಯ ಕರೆಂಟಿನ ವೈಯರ್ ಹೋಗಿದ್ದು, ಅದರಿಂದ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ತಗುಲಿದೆ ಎಂದು ತಿಳಿದು ಬಂದಿದೆ.
ನನಗೆ ಇರುವುದು ಇದೇ ಒಂದು ಹೊಲ. ಬ್ಯಾಂಕಿನಿಂದ ಸಾಲ ತೆಗೆದುಕೊಂಡು 2 ಎಕರೆ 5 ಗುಂಟೆಯಲ್ಲಿ ಕಬ್ಬು ಬೆಳೆದಿದ್ದೆ. 130 – 150 ಟನ್ ಕಬ್ಬು ಬರುತ್ತೆ ಎಂದು ನಿರೀಕ್ಷಿಸಿದ್ದೆ. ಸುಮಾರು 3 – 4 ಲಕ್ಷ ರೂ. ಮೌಲ್ಯದ ಕಬ್ಬು ಸುಟ್ಟು ಹೋಯಿತು. ಈಗ ಸಂಪೂರ್ಣವಾಗಿ ಕಂಗಾಲಾಗಿದ್ದೇನೆ. ಸರ್ಕಾರದಿಂದ ನೆರವು ಸಿಗಬೇಕೆಂಬ ನಿರೀಕ್ಷೆ ಇದೆ” ಎಂದು ದಿಲೀಪ್ ಬಿರಾದರ್ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ.
ಸಂಜೆ 3 ರಿಂದ 4ರ ನಡುವೆ ಬೆಂಕಿ ಕಾಣಿಸಿಕೊಂಡಿದ್ದು, ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿದರೂ ಹೊತ್ತಿಗಾಗಲೇ ಬೆಂಕಿ ಕಬ್ಬಿನ ಹೊಲದಲ್ಲಿ ಎಲ್ಲೆಡೆ ವ್ಯಾಪಿಸಿತ್ತು. ಬೆಂಕಿ ನಂದಿಸುವಷ್ಟರಲ್ಲಿ ಹೊಲ ಸಂಪೂರ್ಣ ಸುಟ್ಟು ಹೋಗಿತ್ತು.
ನಮ್ಮ ಇಡೀ ಕುಟುಂಬ ಈ ಹೊಲದ ಮೇಲೆಯೇ ಬದುಕು ನಡೆಸುತ್ತಿತ್ತು. ಈಗ ಬದುಕಿಗೆ ಬೆಂಕಿ ಬಿದ್ದಂತಾಗಿದೆ. ಸರ್ಕಾರ ತಕ್ಷಣ ಪರಿಹಾರ ನೀಡಬೇಕು ಎಂದು ದಿಲೀಪ್ ಅಳಲು ತೊಡಿಕೊಂಡಿದ್ದಾರೆ.







