ಬೀದರ್ | ಎಸ್ಐಆರ್ ರದ್ದುಪಡಿಸುವಂತೆ ಆಗ್ರಹಿಸಿ ಕಪ್ಪುಪಟ್ಟಿ ಧರಿಸಿ ಸಾಂಕೇತಿಕ ಪ್ರತಿಭಟನೆ

ಬೀದರ್ : ಎಸ್ಐಆರ್ ರದ್ದತಿ ಹಾಗೂ ಮಾರ್ಪಾಡಿಗಾಗಿ ಎಸ್ಐಆರ್ ವಿರೋಧಿ ಜನಾಂದೋಲನ ಸಮೀತಿ ಮತ್ತು ಇತರ ಜಾತ್ಯಾತೀತ ಪಕ್ಷಗಳ, ಜನಪರ ಸಂಘಟನೆಗಳ ವತಿಯಿಂದ ಕಪ್ಪುಬಟ್ಟೆ ಕಟ್ಟಿಕೊಂಡು ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಸಾಂಕೇತಿಕ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.
ಈ ವೇಳೆ ಎಸ್ಐಆರ್ ವಿರೋಧಿ ಜನಾಂದೋಲನ ಸಮಿತಿಯ ಸಂಚಾಲಕ ಶ್ರೀಕಾಂತ್ ಸ್ವಾಮಿ ಅವರು ಮಾತನಾಡಿ, ಎಸ್ಐಆರ್ ಜನ ವಿರೋಧಿ ಹಾಗೂ ಪ್ರಜಾಪ್ರಭುತ್ವ ವಿರೋಧಿಯಾಗಿದೆ. ಎಸ್ಐಆರ್ ನಿಂದ ಬಡವರ, ದಿನ ದಲಿತರ, ಹಿಂದುಳಿದವರ ಮತ್ತು ಮಹಿಳೆಯರ ಮತಗಳು ತಿರಸ್ಕಾರ ಆಗಿ ವಂಚಿತರಾಗುತ್ತಿದ್ದಾರೆ. ಚುನಾವಣಾ ಆಯೋಗ ಹೊರಡಿಸಿದ್ದ ಹನ್ನೊಂದು ಪುರಾವೆಗಳು ಹೊರತುಪಡಿಸಿ ಬೇರೆ ಪುರಾವೆಗಳು ಪರಿಗಣಿಸುತ್ತಿಲ್ಲ. ಗ್ರಾಮೀಣ ಭಾಗದ ಮತ್ತು ನಗರ ಪಟ್ಟಣ ಪ್ರದೇಶಗಳ ಬಡವರಲ್ಲಿ, ಅವಿದ್ಯಾವಂತರಲ್ಲಿ ವಿಶೇಷವಾಗಿ ಮಹಿಳೆಯರಲ್ಲಿ ಆಯೋಗ ಸೂಚಿಸಿದ್ದ ಪುರಾವೆಗಳು ಬಹುತೇಕ ಜನರಲ್ಲಿ ಇರುವುದಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ಬಡ ಜನರಲ್ಲಿ ಸಾಮಾನ್ಯವಾಗಿ ದೊರಕುವ ಪಡಿತರ ಚೀಟಿ, ಆಧಾರ್ ಕಾರ್ಡ್, ವಾಹನ ಚಾಲನಾ ಪ್ರಮಾಣ ಪತ್ರ, ಮತ ಪತ್ರಗಳ ಪುರಾವೆ ಯೋಗ್ಯ ಇಲ್ಲ ಎಂದು ಆಯೋಗ ಹೇಳುತ್ತದೆ. ಇದರಿಂದ ವಿಶೇಷವಾಗಿ ಬಡ ಜನರ ಮತಗಳು ತಿರಸ್ಕಾರ ಆಗುತ್ತವೆ ಎಂದರು.
ಇದು ಕೇಂದ್ರ ಸರ್ಕಾರದ ಹುನ್ನಾರವಾಗಿದೆ. ಕೇಂದ್ರ ಸರ್ಕಾರ 2014ರಿಂದ ಜನವಿರೋಧಿ ನೀತಿಗಳನ್ನು ಜಾರಿಗೆ ತರುತ್ತಿದೆ. ನೋಟ್ ಬಂದ್, ರೈತರ ಕಾನೂನು, ಅನಿಯಮಿತ ಜಿಎಸ್ಟಿ, ನೀಟ್ ಪರೀಕ್ಷೆ, ಎನ್ಆರ್ಸಿ, ಎಸ್ಐಆರ್ ತರುತ್ತಿದೆ. ಆದ್ದರಿಂದ ನಾವು ಎಸ್ಐಆರ್ ರದ್ದು ಮಾಡಬೇಕು ಎಂದು ಆಗ್ರಹಿಸುತ್ತೇವೆ ಎಂದು ಎಂದು ಅವರು ಹೇಳಿದರು.
ಓಂಪ್ರಕಾಶ್ ರೊಟ್ಟೆ ಅವರು ಮಾತನಾಡಿ, ಕೇಂದ್ರ ಸರ್ಕಾರ ಬೇಕಂತಲೇ ಮುಖ್ಯ ಚುನಾವಣಾ ಆಯುಕ್ತರು ನೇಮಕ ಪ್ರಕ್ರೀಯೆ ಬದಲಾಯಿಸಿದೆ. ಆಯ್ಕೆ ಸಮಿತಿಯ ಮೂವರು ಸದಸ್ಯರಲ್ಲಿ ಮುಖ್ಯ ನ್ಯಾಯಾಧೀಶರನ್ನು ತೆಗೆದು ಹಾಕಿ ತಮ್ಮದೇ ಸಂಪುಟ ಸದಸ್ಯರನ್ನು ಸೇರಿಸಿ ಏಕಾಸೌಮ್ಯ ಸಾಧಿಸಲಾಗಿದೆ. ಕಾನೂನು ಬದಲಾವಣೆ ಮಾಡುತ್ತಾ ಮುಖ್ಯ ಚುನಾವಣಾ ಆಯುಕ್ತರ ಕಾರ್ಯಕ್ಷಮತೆ ಬಗ್ಗೆ ಯಾರು ಪ್ರಶ್ನಿಸಬಾರದು, ದೂರು ಸಲ್ಲಿಸಬಾರದು ಮತ್ತು ನ್ಯಾಯಾಲಯ ಕೂಡ ಮಧ್ಯ ಪ್ರವೇಶಿಸಬಾರದು ಎಂದು ಕಾನೂನು ಮಾಡಿದ್ದು, ಆಯುಕ್ತರನ್ನು ಸರ್ವಾಧಿಕಾರಿ ಮಾಡಿದ್ದಾರೆ ಎಂದು ಆರೋಪಿಸಿದರು.
ಅಬ್ದುಲ್ ಮನ್ನಾನ್ ಸೇಠ್ ಅವರು ಮಾತನಾಡಿ, ಎಸ್ಐಆರ್ ಜನವಿರೋಧಿಯಾಗಿದೆ. ಇದರಿಂದ ಬಹುತೇಕ ಬಡವರು ಮತದಾನದಿಂದ ವಂಚಿತರಾಗುತ್ತಾರೆ. ಆದ್ದರಿಂದ ಮುಂದೆ ಸಿಗುವ ಸರಕಾರಿ ಸೌಲಭ್ಯಗಳಾದ ಪಡಿತರ, ಮಾಶಾಸನ ಮನೆ ಸೇರಿದಂತೆ ಇತರ ಸೌಲಭ್ಯಗಳಿಂದ ವಂಚಿತರಾಗುತ್ತಾರೆ ಎಂದರು.
ನಂತರದಲ್ಲಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಚುನಾವಣಾ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಪ್ರತಿಭಟನೆಯಲ್ಲಿ ನಿಜಾಮುದ್ದೀನ್, ಜಗದೀಶ್ವರ್ ಬಿರಾದಾರ್, ಮಹೇಶ್ ಗೋರನಾಳಕರ್, ಸಿದ್ದು ಫುಲಾರಿ, ಮಚೆಂದರ್ ವಾಘಮಾರೆ, ಪ್ರಭು ಮುಧೋಳ್, ರಾಜಕುಮಾರ್ ಪಾಟೀಲ್ ಬಾವಗಿ, ಸಂದೀಪ್ ಮುಕುಂದೆ, ಸುಧಾಮ್ ಹುಲಸೂರೆ, ಸಂತೋಷ್ ಜೋಳದಾಬಕೆ, ಯೊಹಾನ್, ಶಿವಕುಮಾರ್ ಶಿವಗೊಂಡ ಹಾಗೂ ವೆಂಕಟೇಶ್ ಸೇರಿದಂತೆ ಮುಂತಾದವರು ಇದ್ದರು.






