ಬೀದರ್ | ಸಚಿವ ಈಶ್ವರ್ ಖಂಡ್ರೆಯವರ ಹೆಸರು ಕೆಡಿಸುವ ಹುನ್ನಾರ ನಡೆಯುತ್ತಿದೆ : ರಮೇಶ್ ಕಟ್ಟಿತುಗಾಂವ್

ಬೀದರ್ : ಜಿಲ್ಲೆಯಲ್ಲಿ ವಿರೋಧ ಪಕ್ಷದ ಕುಮ್ಮಕ್ಕನಿಂದ ಕೆಲವು ಪಟ್ಟಭದ್ರ ಹಿತಾಸಕ್ತಿಗಳಿಂದ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರ ಹೆಸರು ಕೆಡಿಸುವ ಹುನ್ನಾರ ನಡೆಯುತ್ತಿದೆ ಎಂದು ಮಾದಾರ ಚನ್ನಯ್ಯ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ರಮೇಶ್ ಕಟ್ಟಿತುಗಾಂವ್ ಅವರು ಹೇಳಿದರು.
ಇಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಿಳಾಸಪುರ್, ಕೌಡಗಾಂವ್, ಖುದಾವಂದಪುರ್ ಸೇರಿದಂತೆ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ನಡೆದ ಅಂಬೇಡ್ಕರ್ ಅವರ ಭಾವಚಿತ್ರ ಅಪಮಾನ ಹಾಗೂ ದಲಿತರ ಮೇಲೆ ಹಲ್ಲೆ ಪ್ರಕರಣ ಖಂಡನೀಯವಾಗಿದೆ. ಈ ವಿಚಾರದಲ್ಲಿ ಯಾರೇ ತಪ್ಪಿತಸ್ಥರಿದ್ದರು ಕೂಡ ಅವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಂಡು ಶಿಕ್ಷೆ ನೀಡಬೇಕು. ಆದರೆ, ವಿರೋಧ ಪಕ್ಷದ ಕುಮ್ಮಕ್ಕನಿಂದ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಈ ಪ್ರಕರಣಗಳಲ್ಲಿ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರ ಹೆಸರು ಎಳೆದು ತರುವ ಮೂಲಕ ಅವರ ಹೆಸರಿಗೆ ಕಳಂಕ ತರುವ ಹುನ್ನಾರ ಮಾಡುತ್ತಿದ್ದಾರೆ. ಅವರು ಮಾಡುತ್ತಿರುವುದು ಸರಿಯಲ್ಲ ಎಂದು ಅವರು ತಿಳಿಸಿದರು.
ದಲಿತರ ಮೇಲೆ ನಡೆಯಿತ್ತಿರುವ ಹಲ್ಲೆ ಖಂಡನೀಯವಾದದ್ದು. ಈ ಹಿಂದಿನ ಅವಧಿಯಲ್ಲಿ ಬೇರೆಯವರು ಜಿಲ್ಲಾ ಉಸ್ತುವಾರಿ ಸಚಿವರಿದ್ದಾಗಲೂ ಸಹ ಜಿಲ್ಲೆಯ ದಲಿತರ ಮೇಲೆ ಸಾಕಷ್ಟು ಹಲ್ಲೆ ನಡೆದಿವೆ. ಅವುಗಳನ್ನು ಮರೆತು ಖಂಡ್ರೆ ಅವರ ಅವಧಿಯಲ್ಲಿ ನಡೆದ ಪ್ರಕರಣಗಳನ್ನು ಹೆಚ್ಚು ಮುನ್ನೆಲೆಗೆ ತರಲಾಗುತ್ತಿದೆ ಎಂದು ಕಿಡಿಕಾರಿದರು.
ಈ ಸಂದರ್ಭದಲ್ಲಿ ಹರಿಹರ ಗೋಖಲೆ, ಎನ್. ಮೂರ್ತಿ, ಯುವರಾಜ್ ಬೆಂಡೆ, ಮಹೇಶ್ ಹಿರೇಮನೆ, ಸಂಜಯ್ ಲಂಜವಾಡ್, ಸಂಜುಕುಮಾರ್ ಉಜನಿ, ಸತೀಶ್ ಮಾನೆ, ನಾಗರಾಜ್, ಮಲ್ಲಿಕಾರ್ಜುನ್ ಭಾವಿದೊಡ್ಡಿ, ಶಿವಕಾಂತ್ಹಾಗೂ ರೋಹಿತ್ ಕಟ್ಟಿಮನಿ ಸೇರಿದಂತೆ ಇತರರು ಉಪಸ್ಥಿತರಿದ್ದರು.