Bidar | ಜಿಲ್ಲೆಯಲ್ಲಿ ಬೀಜ ರಸಗೊಬ್ಬರಗಳ ಕೊರತೆ ಇಲ್ಲ : ದೇವಿಕಾ ಆರ್.

ಬೀದರ್: ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳಿಗೆ ಬೀದರ್ ಜಿಲ್ಲೆ ಸಂಪೂರ್ಣ ಸಜ್ಜಾಗಿದ್ದು, 2026ನೇ ಸಾಲಿನಲ್ಲಿ ಒಟ್ಟು 4.12 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ನಡೆಸುವ ಗುರಿ ಹೊಂದಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕಿ ದೇವಿಕಾ ಆರ್. ತಿಳಿಸಿದ್ದಾರೆ.
ನಗರದ ಜಂಟಿ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ರೈತರಿಗೆ ಅಗತ್ಯ ಪ್ರಮಾಣದಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳ ದಾಸ್ತಾನು ಲಭ್ಯವಿದೆ ಎಂದು ತಿಳಿಸಿದರು.
ಜಿಲ್ಲೆಯ ಪಾಲಿನ ರಸಗೊಬ್ಬರಗಳನ್ನು ಬೇರೆ ಜಿಲ್ಲೆಗಳಿಗೆ ಮಾರಾಟ ಮಾಡದಂತೆ ಎಲ್ಲ ಮಾರಾಟಗಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಅಂತರರಾಜ್ಯ ಗಡಿ ಪ್ರದೇಶಗಳ ಚೆಕ್ಪೋಸ್ಟ್ಗಳಲ್ಲಿ ಬೀಜ ಮತ್ತು ರಸಗೊಬ್ಬರ ಸಾಗಾಣಿಕೆಗೆ ನಿಗಾ ವಹಿಸಲಾಗುತ್ತಿದ್ದು, ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಮಧ್ಯಪ್ರಾಚ್ಯದ ಬಿಕ್ಕಟ್ಟಿನ ಪರಿಣಾಮ ರಸಗೊಬ್ಬರ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿರುವುದರಿಂದ ರೈತರು ಆತಂಕಕ್ಕೆ ಒಳಗಾಗದೆ ಅಗತ್ಯಕ್ಕಿಂತ ಹೆಚ್ಚು ಗೊಬ್ಬರ ಖರೀದಿಸಬಾರದು ಎಂದು ಮನವಿ ಮಾಡಿದರು. ಡಿಎಪಿ ಗೊಬ್ಬರದ ಮೇಲೆಯೇ ಅವಲಂಬಿತರಾಗದೆ 20:20:0:13, 12:32:16 ಹಾಗೂ 15:15:15 ಸೇರಿದಂತೆ ಇತರೆ ಸಂಯುಕ್ತ ರಸಗೊಬ್ಬರಗಳನ್ನು ಪರ್ಯಾಯವಾಗಿ ಬಳಸುವಂತೆ ಸಲಹೆ ನೀಡಿದರು.
ಜಿಲ್ಲೆಯ ವಾರ್ಷಿಕ ಸರಾಸರಿ ಮಳೆ 838 ಮಿ.ಮೀ. ಇದ್ದು, ಪೂರ್ವ ಮುಂಗಾರು ಅವಧಿಯಲ್ಲಿ ವಾಡಿಕೆಗಿಂತ ಶೇ.31ರಷ್ಟು ಹೆಚ್ಚು ಮಳೆಯಾಗಿದೆ. ಮುಂಗಾರು ಹಂಗಾಮಿಗೆ ಜಿಲ್ಲೆಗೆ 1.04 ಲಕ್ಷ ಕ್ವಿಂಟಲ್ಗೂ ಹೆಚ್ಚು ಬಿತ್ತನೆ ಬೀಜ ಹಂಚಿಕೆಯಾಗಿದ್ದು, ಇದುವರೆಗೆ ಸುಮಾರು 37,800 ಕ್ವಿಂಟಲ್ ಬೀಜಗಳನ್ನು ರೈತರಿಗೆ ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಜಿಲ್ಲೆಗೆ ಈ ಹಂಗಾಮಿನಲ್ಲಿ 43,366 ಮೆಟ್ರಿಕ್ ಟನ್ ರಸಗೊಬ್ಬರದ ಬೇಡಿಕೆ ಇದ್ದು, ಜೂನ್ 2ರ ವೇಳೆಗೆ 24,065 ಮೆಟ್ರಿಕ್ ಟನ್ ದಾಸ್ತಾನು ಲಭ್ಯವಿದೆ. 8,212 ಮೆಟ್ರಿಕ್ ಟನ್ ವಿತರಣೆಗೊಂಡ ಬಳಿಕವೂ 17,485 ಮೆಟ್ರಿಕ್ ಟನ್ ರಸಗೊಬ್ಬರ ಲಭ್ಯವಿದೆ ಎಂದು ತಿಳಿಸಿದರು.
ಪ್ರಸ್ತುತ ಜಿಲ್ಲೆಯ ಮಾರಾಟಗಾರರ ಬಳಿ 4,537 ಮೆಟ್ರಿಕ್ ಟನ್ ಯೂರಿಯಾ, 2,360 ಮೆಟ್ರಿಕ್ ಟನ್ ಡಿಎಪಿ, 5,005 ಮೆಟ್ರಿಕ್ ಟನ್ ಎನ್ಪಿಕೆಎಸ್, 708 ಮೆಟ್ರಿಕ್ ಟನ್ ಎಂಒಪಿ ಹಾಗೂ 697 ಮೆಟ್ರಿಕ್ ಟನ್ ಎಸ್ಎಸ್ಪಿ ಸೇರಿ ಒಟ್ಟು 13,303 ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು ಇದೆ ಎಂದು ವಿವರಿಸಿದರು.
ಇಫ್ಕೋ ಸಂಸ್ಥೆಯ ನ್ಯಾನೋ ಡಿಎಪಿ ದ್ರವರೂಪದ ಗೊಬ್ಬರ ಪರಿಣಾಮಕಾರಿಯಾಗಿದ್ದು, 500 ಮಿ.ಲೀ. ನ್ಯಾನೋ ಡಿಎಪಿ ಒಂದು ಚೀಲ ಸಾಂಪ್ರದಾಯಿಕ ಡಿಎಪಿಗೆ ಸಮಾನ ಪರಿಣಾಮ ನೀಡುತ್ತದೆ. ಇದರ ಬಳಕೆಯಿಂದ ರೈತರ ವೆಚ್ಚವೂ ಕಡಿಮೆಯಾಗುವುದರಿಂದ ನ್ಯಾನೋ ಡಿಎಪಿ ಬಳಕೆಯನ್ನು ಪರಿಗಣಿಸಬಹುದು ಎಂದು ದೇವಿಕಾ ಆರ್. ಸಲಹೆ ನೀಡಿದರು.
ಜಿಲ್ಲೆಯ 189 ಪ್ಯಾಕ್ಸ್ಗಳ ಪೈಕಿ 165 ಪ್ಯಾಕ್ಸ್ಗಳಿಗೆ ರಸಗೊಬ್ಬರ ಮಾರಾಟ ಪರವಾನಗಿ ನೀಡಲಾಗಿದ್ದು, ಉಳಿದ ಅಗತ್ಯ ಕೇಂದ್ರಗಳಿಗೆ ಜೂನ್ ತಿಂಗಳಲ್ಲಿ ಆದ್ಯತೆ ಮೇರೆಗೆ ರಸಗೊಬ್ಬರ ಪೂರೈಕೆ ಮಾಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೃಷಿ ಉಪ ನಿರ್ದೇಶಕ ಅನ್ಸಾರಿ ಎಂ.ಎ.ಕೆ ಮತ್ತು ಹವಾಮಾನ ತಜ್ಞ ಬಸವರಾಜ್ ಬಿರಾದರ್ ಉಪಸ್ಥಿತರಿದ್ದರು.






