ಬೀದರ್: ಬೆಳೆ ಹಾನಿ ಪರಿಹಾರಕ್ಕೆ ಆಗ್ರಹಿಸಿ ಔರಾದ್ನಲ್ಲಿ ಬಿಜೆಪಿಯಿಂದ ಪ್ರತಿಭಟನೆ
ಬೀದರ್ : ಅತಿವೃಷ್ಠಿಯಿಂದ ಸಂಭವಿಸಿದ ಬೆಳೆ ಹಾನಿಗೆ ಪರಿಹಾರ ವಿತರಿಸಲು ವಿಳಂಬ ಮಾಡುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿಯಿಂದ ಔರಾದ್ (ಬಿ) ಪಟ್ಟಣದಲ್ಲಿ ಶನಿವಾರ ಪ್ರತಿಭಟನೆ ನಡೆಸಲಾಯಿತು.
ಪಟ್ಟಣದ ಎಪಿಎಂಸಿ ವೃತ್ತದ ಬಳಿ ಆರಂಭಗೊಂಡ ಪ್ರತಿಭಟನಾ ಮೆರವಣಿಗೆಯು ಬಸ್ ನಿಲ್ದಾಣದ ಮೂಲಕ ಸಾಗಿ ಬಸವೇಶ್ವರ್ ವೃತ್ತದಲ್ಲಿ ಕೊನೆಗೊಂಡಿತು. ಪ್ರತಿಭಟನೆಯಲ್ಲಿ ಶಾಸಕ ಪ್ರಭು ಚೌವ್ಹಾಣ್ ಅವರು ಎತ್ತಿನ ಗಾಡಿಯಲ್ಲಿ ಕೊಳೆತ ಸೋಯಾ, ತೊಗರಿ ಬೆಳೆಯನ್ನು ತಲೆಯ ಮೇಲೆ ಹೊತ್ತು ಗಮನ ಸೆಳೆದರು.
ಈ ಸಂದರ್ಭದಲ್ಲಿ ಶಾಸಕರಾದ ಪ್ರಭು ಚೌವ್ಹಾಣ್ ಅವರು ಮಾತನಾಡಿ, ರೈತರ ನಾಯಕ, ಬಡವರ ನಾಯಕರೆಂದು ಹೇಳಿಕೊಳ್ಳುವ ಮುಖ್ಯಮಂತ್ರಿಗಳು ಬೀದರ್ ಜಿಲ್ಲೆಗೆ ಹೆಲಿಕಾಪ್ಟರ್ ಮೂಲಕ ಸರ್ವೇ ಮಾಡಿದ್ದಾರೆ. ಹಾಳಾದ ಸೋಯಾ, ಉದ್ದು, ಹೆಸರು ಮೇಲಿಂದ ಕಾಣಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಅವರು, ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಆದರೂ ರೈತರ ಜಮೀನುಗಳಿಗೆ ಯಾರೂ ಬಂದು ನೋಡಿಲ್ಲ. ರೈತರ ಗೋಳು ಕೇಳಿಸಿಕೊಂಡಿಲ್ಲ. ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರದ ಬಗ್ಗೆ ಮಾತನಾಡುವ ತಾವು ರೈತರ ಖಾತೆಗಳಿಗೆ ದುಡ್ಡು ಹಾಕಿಸಬೇಕು. ಇಲ್ಲವೇ ಕುರ್ಚಿ ಖಾಲಿ ಮಾಡಬೇಕು ಎಂದರು.
ರೈತರು ದಸರಾ ಹಬ್ಬವು ಸಂಕಷ್ಟದಲ್ಲೇ ಕಳೆದಿದ್ದಾರೆ. ಉದ್ದು, ಹೆಸರು ಎಲ್ಲ ಬೆಳೆಗಳು ನಾಶವಾಗಿವೆ. ರೈತರು ಊಟಕ್ಕೂ ಸಮಸ್ಯೆ ಎದುರಿಸುತ್ತಿದ್ದಾರೆ. ಪ್ರತಿ ಎಕರೆಗೆ ಕನಿಷ್ಠ 25 ಸಾವಿರ ರೂ. ಪರಿಹಾರ ಧನ ಪಾವತಿಸಬೇಕು. ರೈತರು ದೀಪಾವಳಿ ಹಬ್ಬವನ್ನಾದರೂ ಸಂತೋಷದಿಂದ ಮಾಡುತ್ತಾರೆ. 10 ದಿನದೊಳಗಾಗಿ ರೈತರ ಖಾತೆಗಳಿಗೆ ಹಣ ಜಮೆಯಾಗಬೇಕು. ಇಲ್ಲವಾದಲ್ಲಿ ತಮ್ಮ ಮನೆ ಮುಂದೆಯೇ ಧರಣಿ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಗ್ಯಾರಂಟಿ ಆಮೀಷ ತೋರಿಸಿ ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ಎರಡುವರೆ ವರ್ಷವಾಯಿತು. ಅಭಿವೃದ್ದಿಗಿಂತ ಒಳಜಗಳ ಹೆಚ್ಚಾಗಿವೆ. ಇದಕ್ಕೆ ನಮ್ಮದೇನು ತಕರಾರಿಲ್ಲ. ಆದರೆ ರಾಜ್ಯದಲ್ಲಿ ಎಲ್ಲ ರೈತರು ನೊಂದಿದ್ದಾರೆ. ಇಂತಹ ಸಂದರ್ಭದಲ್ಲಿ ಸರ್ಕಾರ ಕಣ್ಣು, ಕಿವಿ ಇಲ್ಲದಂತೆ ವರ್ತಿಸುತ್ತಿದೆ. ಇದಕ್ಕಾಗಿ ರೈತರೆಲ್ಲರೂ ಒಗ್ಗಟ್ಟಾಗಬೇಕು ಎಂದು ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ್ ಪಾಟೀಲ್ ಅವರು ಮಾತನಾಡಿ, ಅತಿವೃಷ್ಟಿ ಸಂದರ್ಭದಲ್ಲಿ ಪಕ್ಕದ ಮಹಾರಾಷ್ಟ್ರ ಸರ್ಕಾರ ರೈತರಿಗೆ ಉತ್ತಮ ಸ್ಪಂದನೆ ನೀಡಿದೆ. ಬೆಳೆ ಹಾನಿಯಾದ ಎಲ್ಲ ರೈತರಿಗೆ ಪರಿಹಾರ ನೀಡಿದೆ. ಮಣ್ಣು, ಜಾನುವಾರುಗಳಿಗೂ ಪರಿಹಾರ ನೀಡಲಾಗಿದೆ. ಮುಂದೆ ರೈತರ ಸಾಲ ಮನ್ನಾ ಮಾಡಲಾಗುವುದೆಂದು ಅಲ್ಲಿನ ಮುಖ್ಯಮಂತ್ರಿ ಹೇಳಿದ್ದಾರೆ. ಆದರೆ ಕರ್ನಾಟಕದಲ್ಲಿರುವ ಸರ್ಕಾರ ರೈತರು ನೋವಿನಲ್ಲಿದ್ದರೂ ನಿದ್ರೆಯಲ್ಲಿದೆ ಎಂದು ಗುಡುಗಿದರು.
ನಾವು ಜಿಲ್ಲಾದ್ಯಂತ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ರೈತರ ನೋವುಗಳು ಕಣ್ಣಾರೆ ನೋಡಿದ್ದೇವೆ. ಔರಾದ್ (ಬಿ) ಕ್ಷೇತ್ರದ ಗ್ರಾಮ ಪಂಚಾಯಿತಿಯೊಂದರ ವ್ಯಾಪ್ತಿಯಲ್ಲಿ 316 ಎಂ.ಎಂ ಮಳೆ ದಾಖಲಾಗಿದೆ. ಅನೇಕ ಜನ ಜಾನುವಾರುಗಳು ಮರಣ ಹೊಂದಿವೆ. ರೈತರ ಬೆಳೆ ಸಂಪೂರ್ಣ ಮುಳುಗಡೆಯಾಗಿದೆ. ಜಿಲ್ಲೆಯಲ್ಲಿ ಶೇ.90ರಷ್ಟು ಬೆಳೆ ಹಾನಿ ಸಂಭವಿಸಿದೆ. ಆದರೂ ಸಮೀಕ್ಷೆಯಲ್ಲಿ ಕಡಿಮೆ ತೋರಿಸಲಾಗಿದೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವರಲ್ಲಿ ರೈತರ ಬಗ್ಗೆ ಸ್ವಲ್ಪವೂ ಕಾಳಜಿಯಿಲ್ಲ. ರೈತರಿಗೆ ಬೆಳೆ ಹಾನಿ ಪರಿಹಾರ ಶೀಘ್ರ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪೀರಪ್ಪ ಔರಾದೆ, ಜಿಲ್ಲಾ ಉಪಾಧ್ಯಕ್ಷ ಅರಹಂತ್ ಸಾವಳೆ, ಮಂಡಲ ಪ್ರಭಾರಿ ಮಹೇಶ್ವರ್ ಸ್ವಾಮಿ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಶಿವರಾಜ್ ಅಲ್ಮಾಜೆ, ಮಂಡಲ ಅಧ್ಯಕ್ಷ ರಾಮಶೆಟ್ಟಿ ಪನ್ನಾಳೆ, ಮುಖಂಡರಾದ ರಾಜಶೇಖರ್ ನಾಗಮೂರ್ತಿ, ಮಾರುತಿ ಚೌವ್ಹಾಣ್, ಶಿವಾಜಿರಾವ್ ಪಾಟೀಲ್, ಖಂಡೋಬಾ ಕಂಗಟೆ, ರೈತ ಮೋರ್ಚಾ ತಾಲ್ಲೂಕು ಅಧ್ಯಕ್ಷ ನಾಗಶೆಟ್ಟಿ ಗಾದಗೆ ಹಾಗೂ ಬಸವರಾಜ್ ಪಾಟೀಲ್ ಸೇರಿದಂತೆ ಅನೇಕ ರೈತರು ಇದ್ದರು.









