ಕೆಪಿಎಸ್ ಸಿ ಹಗರಣದಲ್ಲಿನ ಪಾಲಿನ ಬಗ್ಗೆ ಬಿಜೆಪಿ ಪಾದಯಾತ್ರೆ ಮಾಡಲಿ: ಪ್ರಿಯಾಂಕ್ ಖರ್ಗೆ

ಬೀದರ್: ಬಿಜೆಪಿಯಲ್ಲಿರುವವರು ಎಲ್ಲರೂ ಯುವಕರ ಭವಿಷ್ಯದ ಜೊತೆ ಚೆಲ್ಲಾಟ ಆಡುತ್ತಿದ್ದಾರೆ. ದುಡ್ಡಿಗೋಸ್ಕರ ಯುವಕರ ಭವಿಷ್ಯ ಮಾರಾಟಕ್ಕಿಟ್ಟಿದ್ದಾರೆ. ಬಿಜೆಪಿಯ ನಂಟಿರುವವರು ಕೆಪಿಎಸ್ಸಿ ಹಗರಣದಲ್ಲಿ ಪಾಲ್ಗೊಂಡಿದ್ದಾರೆ. ಅವರು ಮೊದಲು ಕೆಪಿಎಸ್ ಸಿ ಹಗರಣದಲ್ಲಿನ ಪಾಲಿನ ಬಗ್ಗೆ ಪಾದಯಾತ್ರೆ ಮಾಡಲಿ ಎಂದು ಗೃಹಸಚಿವ ಪ್ರಿಯಾಂಕ್ ಖರ್ಗೆ ಸವಾಲು ಹಾಕಿದ್ದಾರೆ.
ನಗರದ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಪಿಎಸ್ ಸಿ ಚೆಯರ್ ಮ್ಯಾನ್, ಮೇಂಬರ್ ಸೇರಿದಂತೆ ಇವಾಗ ಸಿಕ್ಕಿಬಿದ್ದಿರುವ ವ್ಯಕ್ತಿ ಎಲ್ಲರೂ ಬಿಜೆಪಿಯ ಕಾರ್ಯಕರ್ತರಾಗಿದ್ದಾರೆ. ಇದರ ಬಗ್ಗೆ ಯಾಕೆ ಅವರು ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದರು.
ನಾಗೇಂದ್ರರ ವಿಚಾರದಲ್ಲಿ ಸಿಬಿಐ ವರ್ತಿಸಿರುವ ಬಗ್ಗೆ ಸದನದಲ್ಲಿ ಚರ್ಚೆಯಾಗಿದೆ. ಪಕ್ಷಕ್ಕೆ ಮುಜುಗರ ಆಗಬಾರದು ಎಂದು ನಾಗೇಂದ್ರ ರಾಜೀನಾಮೆ ಕೊಟ್ಟಿದ್ದಾರೆ. ಬಿಜೆಪಿಯವರು ಪಾದಯಾತ್ರೆ ಮಾಡಲಿ, ಆದರೆ ಅವರಿಗೆ ಧೈರ್ಯವಿದ್ದರೆ ಕೆಪಿಎಸ್ ಸಿಯಲ್ಲಿ ಏನೇನು ಆಗಿದೆ ಎನ್ನುವುದರ ಬಗ್ಗೆಯೂ ಜನರಿಗೆ ತಿಳಿಸಲಿ ಎಂದು ಒತ್ತಾಯಿಸಿದರು.
ಬರ ಪರಿಸ್ಥಿತಿ ಬಗ್ಗೆ ಕೇಂದ್ರಕ್ಕೆ ಎರಡು ಸಲ ಪತ್ರ ಬರೆದಿದ್ದೇವೆ. ಸಿಎಂ, ಡಿಸಿಎಂ ಕೇಂದ್ರಕ್ಕೆ ಹೋಗಿ ಭೇಟಿಯಾಗಿ ಬಂದಿದ್ದಾರೆ. ಬಿಜೆಪಿಯವರು ಅಸೆಂಬ್ಲಿಯಲ್ಲಿ ಬರದ ಚರ್ಚೆ ಬಗ್ಗೆ ಮಾತನಾಡಿ ಅಂದ್ರು ಮಾತನಾಡಲಿಲ್ಲ, ಆಗೇನು ಕತ್ತೆ ಕಾಯುತ್ತಿದ್ದರಾ ಎಂದು ಖಾರವಾಗಿ ಪ್ರಶ್ನಿಸಿದ ಅವರು, ಈಗ ಯಾಕೆ ಜನರ ಬಗ್ಗೆ ಕಾಳಜಿ ಬಂದಿದೆ ಎಂದು ಕೇಳಿದರು.
ಕೆಪಿಎಸ್ ಸಿ ಅಕ್ರಮದ ಕುರಿತು ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ತೂಕದ ಮಾತನಾಡಬೇಕು. ಪರೀಕ್ಷೆ ಮಾಡುವ ಜವಾಬ್ದಾರಿ ಕೆಪಿಎಸ್ ಸಿಯದ್ದಾಗಿದೆ. ಕೆಪಿಎಸ್ ಸಿ ಚೆಯರ್ ಮ್ಯಾನ್ ಬಿಜೆಪಿ ನಾಮಿನೆಟ್ ಆಗಿದ್ದಾರೆ ಎಂದು ಆರೋಪಿಸಿದರು.
ನಾನೇನು ರೆಸಾರ್ಟ್ ಗೆ ಹೋಗಿ ಪರೀಕ್ಷೆ ಬರೆಸಿದ್ದೀನಾ? ಅಥವಾ ಮೈತ್ರಿಕೂಟದ ನಾಯಕರು ಬರೆಸಿದ್ದಾ? ಒಂದು ದಾಖಲೆ ತೋರಿಸಿದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಚಿಕ್ಕ ಮಕ್ಕಳು ಕೂಡ ಈ ಥರಾ ಮಾತನಾಡುವುದಿಲ್ಲ. ಹಾಗೆ ಮಾತನಾಡಿದರೆ ಹೇಗೆ ಉತ್ತರ ನೀಡಲು ಸಾಧ್ಯವಾಗುತ್ತದೆ ಎಂದು ಕೇಳಿದ ಅವರು, ಕುಮಾರಸ್ವಾಮಿ ಕೇವಲ ಹಿಟ್ ಆಂಡ್ ರನ್ ಮಾಡುತ್ತಾರೆ ಎಂದು ಆಕ್ರೋಶ ಹೊರಹಾಕಿದರು.
ಬಿಜೆಪಿ, ಜೆಡಿಎಸ್ ಅಸ್ತಿತ್ವದಲ್ಲಿ ಇರಲಿಕ್ಕೆ ಅವರು ಮಾತನಾಡುತ್ತಾರೆ. ಆರೆಸ್ಸೆಸ್ ನಲ್ಲಿ ಅಂಕ ಪಡೆಯುವುದಕ್ಕಾಗಿ ಅವರು ನನ್ನ ಹೆಸರು ಬಳಸುತ್ತಾರೆ ಎಂದರು.
ಸಚಿವ ಬಸವರಾಜ ರಾಯರೆಡ್ಡಿ ಹೇಳಿಕೆ ವಿಚಾರದ ಪ್ರಶ್ನೆಗೆ ಉತ್ತರಿಸಿದ ಅವರು, ಮುಸ್ಲಿಮರು ನಮ್ಮ ದೇಶದಲ್ಲೇ ಇರಬೇಕು, ಅವರು ಇರದೇ ಈ ದೇಶ ಕಟ್ಟುವುದಕ್ಕೆ ಆಗುವುದಿಲ್ಲವೆಂದು ಮೋಹನ್ ಭಾಗವತ್ ಅವರೇ ಹೇಳಿದ್ದಾರೆ. ಅಮೆರಿಕದಿಂದ ಡಾಲರ್ಸ್ ದೇಣಿಗೆ ಬಂದಾಗ ಐಕ್ಯ ನೆನಪಾಗುತ್ತದೆ. ಇಲ್ಲಿ ಬಂದಾಗ ರಾಜಕೀಯ ಬೇಳೆ ಬೇಯಿಸಿಕೊಳ್ಳುವುದಕ್ಕೆ ಹಿಂದೂ ರಾಷ್ಟ್ರ ಅಂತಾರೆ ಎಂದು ಅವರು ಟೀಕಿಸಿದರು.






