2028ರಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ; ಬೀದರ್ನ ಆರು ಕ್ಷೇತ್ರಗಳಲ್ಲಿ ಗೆಲ್ಲಲು ಶ್ರಮವಹಿಸಿ: ಕಾರ್ಯಕರ್ತರಿಗೆ ಸಿಎಂ ಡಿ.ಕೆ. ಶಿವಕುಮಾರ್ ಕರೆ

ಬೀದರ್ : “ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಕಾರಣಕ್ಕೆ ಕೊಟ್ಟ ಮಾತಿನಂತೆ ಐದು ಗ್ಯಾರಂಟಿ ಯೋಜನೆ ಹಾಗೂ ಇತರ ಜನಪರ ಕಾರ್ಯಕ್ರಮಗಳನ್ನು ಜಾರಿ ಮಾಡಲಾಗಿದೆ. 2028ಕ್ಕೆ ಮತ್ತೆ ನಿಮ್ಮ ಸರ್ಕಾರ ಬಂದೇ ಬರುತ್ತದೆ. ಕಾರ್ಯಕರ್ತರು ಆತ್ಮವಿಶ್ವಾಸದಿಂದ ಇರಿ. ಬೀದರ್ ಜಿಲ್ಲೆಯಲ್ಲಿ ಆರು ಕ್ಷೇತ್ರಗಳಲ್ಲಿ ಗೆಲ್ಲಲು ಶ್ರಮವಹಿಸಿ” ಎಂದು ಸಿಎಂ ಡಿ.ಕೆ. ಶಿವಕುಮಾರ್ ಅವರು ಕಾರ್ಯಕರ್ತರಿಗೆ ಕರೆ ನೀಡಿದರು.
ಬೀದರ್ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು.
“ಇದು ನನ್ನ ಬದುಕಿನಲ್ಲಿ ಶಾಶ್ವತವಾಗಿ ನೆನಪಿನಲ್ಲಿ ಉಳಿಯುವಂತಹ ದಿನ. ನಾನು ಆರು ವರ್ಷ ಮೂರು ತಿಂಗಳ ಕಾಲ ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿದ್ದೆ. ಶ್ರೀಮತಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರು ನನಗೆ ಈ ಅವಕಾಶ ಮಾಡಿಕೊಟ್ಟರು. ನಾನು ಆಗಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದೆ. ದಿನೇಶ್ ಗುಂಡೂರಾವ್ ಅವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಉಪಚುನಾವಣೆಗಳಲ್ಲಿ ಸೋತಿದ್ದೆವು. ಸಿದ್ದರಾಮಯ್ಯ ಅವರು ನೈತಿಕ ಹೊಣೆ ಹೊತ್ತು ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆ ಸಮಯದಲ್ಲಿ ಕೋವಿಡ್ ಕೂಡ ಆರಂಭವಾಗಿತ್ತು. ಒಬ್ಬರಿಂದ ಒಬ್ಬರು ದೂರ ಇರುತ್ತಿದ್ದರು. ಹೆಣಗಳು ರಾಶಿ ರಾಶಿಯಾಗಿ ಬೀಳುತ್ತಿದ್ದವು. ಇಂತಹ ಭೀಕರ ಸಂದರ್ಭದಲ್ಲಿ ನನಗೆ ಪಕ್ಷದ ಜವಾಬ್ದಾರಿ ವಹಿಸಲಾಯಿತು. ಆಗ ನಾನು ಜೂಮ್ ಮೂಲಕ ಪ್ರತಿಜ್ಞಾ ಕಾರ್ಯಕ್ರಮ ಮಾಡಿದೆ. 11 ಸಾವಿರ ಪಂಚಾಯಿತಿ ಹಾಗೂ ವಾರ್ಡ್ಗಳಲ್ಲಿ ನಿಮ್ಮೆಲ್ಲರ ಸಾಕ್ಷಿಯಾಗಿ ನಾನು ಅಧಿಕಾರ ಸ್ವೀಕಾರ ಮಾಡಿದೆ” ಎಂದು ನೆನಪುಗಳನ್ನು ಮೆಲುಕು ಹಾಕಿದರು.
“ಅಲ್ಲಿಂದ ಇಲ್ಲಿಯವರೆಗೂ ನಮ್ಮ ನಿಮ್ಮ ಪಯಣದಲ್ಲಿ ಅನೇಕ ಸಾಕ್ಷಿಗುಡ್ಡೆಗಳನ್ನು ನಿರ್ಮಿಸಿದ್ದೇವೆ. ಸ್ಥಳೀಯ ಸಂಸ್ಥೆ, ವಿಧಾನಸಭೆ ಚುನಾವಣೆಗಳನ್ನು ಎದುರಿಸಿದ್ದೇವೆ. ರಾಜ್ಯದಲ್ಲಿದ್ದ ಡಬಲ್ ಇಂಜಿನ್ ಸರ್ಕಾರ ಕಿತ್ತೊಗೆದಿದ್ದೇವೆ. ನನ್ನ ಜೊತೆ ಈಶ್ವರ್ ಖಂಡ್ರೆ ಅವರು ಕಾರ್ಯಾಧ್ಯಕ್ಷರಾಗಿ ಕೆಲಸ ಮಾಡಿದರು. ನಮ್ಮ ಪಕ್ಷದ ಎಲ್ಲ ನಾಯಕರು ಒಟ್ಟಾಗಿ ಕೆಲಸ ಮಾಡಿ ರಾಜ್ಯದಲ್ಲಿ ನಮ್ಮ ಪಕ್ಷ 136 ಸ್ಥಾನಗಳನ್ನು ಗೆದ್ದು ಸುಭದ್ರವಾದ ಸರ್ಕಾರ ರಚನೆಯಾಯಿತು. ನಿಮ್ಮ ಜಿಲ್ಲೆಯಲ್ಲಿ 5 ಕ್ಷೇತ್ರಗಳು ಗೆಲ್ಲುವ ನಿರೀಕ್ಷೆ ಇತ್ತು. ಆದರೆ ಕೇವಲ 2 ಕ್ಷೇತ್ರಗಳಲ್ಲಿ ಮಾತ್ರ ಗೆದ್ದಿದ್ದೇವೆ” ಎಂದರು.
ಕಾರ್ಯಕರ್ತರೇ ಪಕ್ಷಕ್ಕೆ ಆಧಾರಸ್ತಂಭ
“ಕಾರ್ಯಕರ್ತರೇ ಈ ಪಕ್ಷಕ್ಕೆ ಆಧಾರಸ್ತಂಭ. ಈಗ ಪಕ್ಷವನ್ನು ಅಧಿಕಾರಕ್ಕೆ ತಂದವರೂ ನೀವೇ, ಮುಂದೆ ಪಕ್ಷವನ್ನು ಅಧಿಕಾರಕ್ಕೆ ತರುವವರೂ ನೀವೇ. ಹೀಗಾಗಿ ನಿಮಗೆ ಶಕ್ತಿ ನೀಡುವ ಕೆಲಸ ಮಾಡಬೇಕು. ಬಿಜೆಪಿ ಹಾಗೂ ದಳದವರು ಬಡವರಿಗೆ ಸಹಾಯ ಮಾಡುವ ಯೋಜನೆ ಮಾಡಿದ್ದಾರಾ? ಕಾಂಗ್ರೆಸ್ ಸರ್ಕಾರ ರೈತರಿಗೆ ಉಚಿತ ವಿದ್ಯುತ್ ನೀಡುವ ಯೋಜನೆ ಜಾರಿಗೆ ತಂದಿತು. ಈಗ ಪ್ರತಿ ವರ್ಷ ಅದಕ್ಕಾಗಿ ನಮ್ಮ ಸರ್ಕಾರ 20 ಸಾವಿರ ಕೋಟಿ ಹಣವನ್ನು ವ್ಯಯಿಸುತ್ತಿದೆ. ಆಶ್ರಯ ಮನೆ, ಉಳುವವನಿಗೆ ಭೂಮಿ ಕೊಟ್ಟಿದ್ದು ಕಾಂಗ್ರೆಸ್ ಸರ್ಕಾರ ಮಾತ್ರ. ಈ ಎಲ್ಲ ವಿಚಾರವನ್ನು ನೀವು ಮತದಾರರಿಗೆ ನೆನಪು ಮಾಡಿಕೊಡಬೇಕು” ಎಂದರು.
ಕಾರ್ಯಕರ್ತರು ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಕ್ಕೆ ನುಡಿದಂತೆ ನಡೆಯಲು ಸಾಧ್ಯವಾಯಿತು
“ಪರಮೇಶ್ವರ್ ಅವರ ನೇತೃತ್ವದಲ್ಲಿ ಪ್ರಣಾಳಿಕೆ ಸಮಿತಿ ರಚಿಸಿ ಐದು ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದೆವು. ಆಗ ಬಿಜೆಪಿಯವರು ನಗುತ್ತಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರು ಈ ಯೋಜನೆ ಜಾರಿ ಸಾಧ್ಯವೇ ಎಂದು ಗೇಲಿ ಮಾಡಿದರು. ನಾವು ಅಧಿಕಾರಕ್ಕೆ ಬಂದ ಮೊದಲ ದಿನವೇ ಐದೂ ಗ್ಯಾರಂಟಿ ಯೋಜನೆ ಜಾರಿಗೆ ಮುಂದಾದೆವು. ಪ್ರತಿ ವರ್ಷ 53 ಸಾವಿರ ಕೋಟಿಯನ್ನು ಇವುಗಳಿಗಾಗಿ ವೆಚ್ಚ ಮಾಡಲಾಗುತ್ತಿದೆ. ನಮ್ಮ ಗ್ಯಾರಂಟಿ ಯೋಜನೆಗಳನ್ನು ನೋಡಿ ಬಿಜೆಪಿ ಬೇರೆ ರಾಜ್ಯಗಳಲ್ಲಿ ನಮ್ಮ ಮಾದರಿಯನ್ನು ಅನುಸರಿಸಿದ್ದಾರೆ. ಕರ್ನಾಟಕ ಕಾಂಗ್ರೆಸ್ ಮಾದರಿ ದೇಶಕ್ಕೆ ಮಾದರಿಯಾಗಿದೆ. ಇದರ ಶ್ರೇಯ ನಿಮಗೆ ಸಲ್ಲಬೇಕು. ನೀವು ನಮ್ಮನ್ನು ಅಧಿಕಾರಕ್ಕೆ ತಂದ ಕಾರಣಕ್ಕೆ ಮಹಿಳೆಯರಿಗೆ ಮಾಸಿಕ 2 ಸಾವಿರ ಹಣ, 200 ಯೂನಿಟ್ವರೆಗೆ ಉಚಿತ ವಿದ್ಯುತ್, ಮಹಿಳೆಯರಿಗೆ ರಾಜ್ಯದಲ್ಲಿ ಉಚಿತ ಬಸ್ ಪ್ರಯಾಣ, 10 ಕೆ.ಜಿ. ಅಕ್ಕಿ, ನಿರುದ್ಯೋಗಿಗಳಿಗೆ ನಿರುದ್ಯೋಗ ಭತ್ಯೆ ಸಿಗುವಂತಾಗಿದೆ” ಎಂದು ಹೇಳಿದರು.
ಕೇಂದ್ರ ಬಿಜೆಪಿ ಸರ್ಕಾರ ಕೊಟ್ಟ ಭರವಸೆ ಈಡೇರಿಸಿತಾ? ಈ ಬಗ್ಗೆ ಪ್ರಶ್ನೆ ಮಾಡಿ
“ಬಿಜೆಪಿ ಆಡಳಿತದಲ್ಲಿ ಇಂತಹ ಯಾವುದಾದರೂ ಒಂದು ಯೋಜನೆ ಜಾರಿ ಆಗಿತ್ತಾ? ಮೋದಿ ಅವರು ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಮುನ್ನ ಅಚ್ಛೇ ದಿನ್ ತರುತ್ತೇವೆ ಎಂದು ಹೇಳಿದ್ದರು. ಎಲ್ಲರ ಖಾತೆಗೆ 15 ಲಕ್ಷ ಹಾಕುತ್ತೇವೆ ಎಂದಿದ್ದರು. ಜನ್ಧನ್ ಖಾತೆ ತೆರೆಸಿದ್ದರು. ಅವರು ಹೇಳಿದ ಯೋಜನೆಗಳು ಅನುಷ್ಠಾನಕ್ಕೆ ಬಂದವಾ? ಇಲ್ಲ. ನಾವು ಮಾತ್ರ ನುಡಿದಂತೆ ನಡೆದಿದ್ದೇವೆ. ಅಧಿಕಾರಕ್ಕೆ ಬಂದು ಮೂರು ಅವಧಿಯಾಯಿತು. ನಮ್ಮ ಖಾತೆಗೆ ಹಣ ಬಂದಿಲ್ಲ ಎಂದು ನೀವು ಬಿಜೆಪಿಯವರನ್ನು ಪ್ರಶ್ನೆ ಮಾಡಬೇಕು. ಕಾಂಗ್ರೆಸ್ ಪಕ್ಷದ ಯೋಜನೆಗಳ ಉಪಕಾರ ಸ್ಮರಣೆಯನ್ನು ಜನರು ಸ್ಮರಿಸಬೇಕು. ಕಾರ್ಯಕರ್ತರಿಗೆ ಶಕ್ತಿ ನೀಡಲು ಗ್ಯಾರಂಟಿ ಸಮಿತಿ ಸದಸ್ಯರನ್ನಾಗಿ ಮಾಡಲಾಗಿದೆ. ಸರ್ಕಾರ ಬಂದು ಮೂರು ವರ್ಷಗಳ ನಂತರ ಪಕ್ಷದ ನಾಯಕರು ನನ್ನನ್ನು ಮುಖ್ಯಮಂತ್ರಿ ಮಾಡಿದ ಬಳಿಕ ನನ್ನಂತ ಕಾರ್ಯಕರ್ತರನ್ನು ಗುರುತಿಸಬೇಕು ಎಂದು ಪ್ರತಿ ಪಂಚಾಯಿತಿಯಲ್ಲಿ ಆರು ಜನರ ಗ್ಯಾರಂಟಿ ಸಮಿತಿಯನ್ನು ಒಂದು ತಿಂಗಳಲ್ಲಿ ನೇಮಕ ಮಾಡಲು ತೀರ್ಮಾನಿಸಲಾಗಿದೆ. ಶಾಸಕರು, ಜಿಲ್ಲಾ ಸಚಿವರು, ಗ್ಯಾರಂಟಿ ಸಮಿತಿ ಮುಖಂಡರು ಈ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ” ಎಂದು ಭರವಸೆ ನೀಡಿದರು.
ಗ್ಯಾರಂಟಿ ಯೋಜನೆಗಳು ನಿಲ್ಲಲ್ಲ
“ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಮರುಪರಿಶೀಲನೆ ಮಾಡಲಾಗುತ್ತಿದೆ. ಕೆಲವರು ಇದನ್ನು ಗ್ಯಾರಂಟಿ ಯೋಜನೆ ನಿಲ್ಲಿಸುವುದು ಎಂದು ಭಾವಿಸಿದ್ದಾರೆ. ಇದು ಯೋಜನೆ ನಿಲ್ಲಿಸುವುದಲ್ಲ. ಒಂದೇ ಖಾತೆಗೆ ಹಲವರ ಹಣ ಬರುವಂತೆ ಮಾಡಿಕೊಂಡಿದ್ದರು. ಒಂದೇ ದೂರವಾಣಿ ಸಂಖ್ಯೆ ಬೇರೆಯವರ ಫಲಾನುಭವಿಗಳದ್ದಾಗಿತ್ತು. ಮೃತ ಫಲಾನುಭವಿಗಳ ಹೆಸರಲ್ಲಿ ಬೇರೆಯವರು ಹಣ ಪಡೆಯುತ್ತಿದ್ದಾರೆ. ಇಂತಹ ಲೋಪದೋಷಗಳನ್ನು ಸರಿಪಡಿಸಿ ಅರ್ಹ ಫಲಾನುಭವಿಗಳಿಗೆ ಯೋಜನೆ ತಲುಪುವಂತೆ ಮಾಡಲು ಈ ಮರುಪರಿಶೀಲನೆ ಮಾಡಲಾಗುತ್ತಿದೆ. ನಮ್ಮ ರಾಜ್ಯದ ಜನರಿಗೆ ನಾವು ಈ ಯೋಜನೆ ನೀಡಬೇಕೇ ವಿನಃ ಬೇರೆ ರಾಜ್ಯದವರಿಗೆ ನೀಡುವ ಅಗತ್ಯವಿಲ್ಲ. ನಾವು ಯಾರಿಗೂ ಗ್ಯಾರಂಟಿ ಯೋಜನೆ ನಿಲ್ಲಿಸುವುದಿಲ್ಲ. ನಮ್ಮ ರಾಜ್ಯದ ಮತದಾರರಿಗೆ ಈ ಯೋಜನೆ ಮುಂದುವರಿಸುತ್ತೇವೆ. ಹೀಗಾಗಿ ಯಾರೂ ಗಾಬರಿಯಾಗುವ ಅಗತ್ಯವಿಲ್ಲ” ಎಂದು ಅಭಯ ನೀಡಿದರು.
ನಿಮ್ಮ ಮತದಾನದ ಹಕ್ಕನ್ನು ಕಾಪಾಡಿಕೊಳ್ಳಿ
“ನೀವೆಲ್ಲರೂ ನಿಮ್ಮ ಮತದ ಹಕ್ಕನ್ನು ಕಾಪಾಡಿಕೊಳ್ಳಬೇಕು. ನಿಮ್ಮ ಮತದಾನದ ಹಕ್ಕು ಎಂದರೆ ನಿಮ್ಮ ಬದುಕಿನ ಹಕ್ಕು. ಎಸ್ಐಆರ್ ಎಂದರೆ ಹೊಸದಾಗಿ ಮತದಾರರ ಪಟ್ಟಿ ರಚಿಸುವುದು. ನೀವೆಲ್ಲರೂ ಜು. 29ರೊಳಗೆ ಬಿಎಲ್ಎಗಳು ನೀಡುವ ಗಣತಿ ನಮೂನೆಯನ್ನು ದಾಖಲೆ ಸಮೇತ ತುಂಬಿ ಮರುಸಲ್ಲಿಕೆ ಮಾಡಿದರೆ ಮಾತ್ರ ನಿಮ್ಮ ಮತದಾನದ ಹಕ್ಕು ಉಳಿಯಲಿದೆ. ಇಲ್ಲದಿದ್ದರೆ ನಿಮ್ಮ ಮತದಾನದ ಹಕ್ಕು ಇರುವುದಿಲ್ಲ. ಪ್ರತಿ ಬೂತ್ನಲ್ಲೂ ನಾವು ಸಹಾಯ ಕೇಂದ್ರ ಆರಂಭಿಸಲು ಮುಂದಾಗಿದ್ದೇವೆ. ನಾವು ಬಿಎಲ್ಎ-2ಗಳನ್ನು ನೇಮಿಸಿದ್ದೇವೆ. ನಮ್ಮ ಕಾರ್ಯಕರ್ತರು ಈ ಮೂಲಕ ಮತದಾರರ ಸಂಪರ್ಕ ಬೆಳೆಸಬಹುದು. ನೀವು ಮತದಾರರ ಹಕ್ಕನ್ನು ಉಳಿಸಿ ಅವರ ಬದುಕು ಕಟ್ಟಿಕೊಳ್ಳಲು ನೆರವು ನೀಡುತ್ತಿದ್ದೀರಿ. ಅನಕ್ಷರಸ್ಥರಿಗೆ ಮತದಾನದ ಹಕ್ಕು ಉಳಿಯುವಂತೆ ಮಾಡುತ್ತೀರಿ” ಎಂದು ಕರೆ ನೀಡಿದರು.
ರಾಮ ಮಂದಿರ ದೇಣಿಗೆ ಏನಾಯ್ತು? ಎಂದು ಮಂತ್ರಾಕ್ಷತೆ ಕೊಟ್ಟವರನ್ನು ಕೇಳಿ
“ಅಮ್ಮನ ನೆನಪು ಪ್ರೀತಿಯ ಮೂಲ, ಗುರುವಿನ ನೆನಪು ಜ್ಞಾನದ ಮೂಲ, ದೇವರ ನೆನಪು ಭಕ್ತಿಯ ಮೂಲ, ಈ ಮೂರರ ನೆನಪು ಮನುಷ್ಯತ್ವಕ್ಕೆ ಮೂಲ, ಮನುಷ್ಯತ್ವ ಮೋಕ್ಷಕ್ಕೆ ಮೂಲ. ನಾನು ಚುನಾವಣೆ ಸಂದರ್ಭದಲ್ಲಿ ಬಂದಾಗ ಒಂದು ಮಾತು ಹೇಳಿದ್ದೆ. ಕಮಲ ಕೆರೆಯಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿದ್ದರೆ ಚೆಂದ, ಈ ದಾನಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಮಾತ್ರ ಚೆಂದ ಎಂದು ಹೇಳಿದ್ದೆ. ಈ ಕೈ ಅಧಿಕಾರಕ್ಕೆ ಬಂದ ಕಾರಣಕ್ಕೆ ನಿಮಗೆ ಶಕ್ತಿ ತುಂಬಿದ್ದೇವೆ. ಬೆಲೆ ಏರಿಕೆಯಿಂದ ತತ್ತರಿಸಿದ್ದ ಜನರಿಗೆ ಆಸರೆಯಾಗಿದ್ದೇವೆ. ಪ್ರಧಾನಮಂತ್ರಿಗಳು ದೇಶದ ಜನರಿಗೆ ಚಿನ್ನ ಖರೀದಿ ಮಾಡಬೇಡಿ, ಅಡುಗೆಯಲ್ಲಿ ಕಡಿಮೆ ಎಣ್ಣೆ ಬಳಸಿ, ಪೆಟ್ರೋಲ್ ಹೆಚ್ಚು ಬಳಸಬೇಡಿ, ಮಾಂಗಲ್ಯ ಖರೀದಿ ಮಾಡಬೇಡಿ ಎಂದು ಜನರಿಗೆ ಸಲಹೆ ನೀಡಿದರು. ಇದು ಧರ್ಮವೇ? ರಾಮನ ದೇವಸ್ಥಾನಕ್ಕಾಗಿ ಜನ ಇಟ್ಟಿಗೆಯಿಂದ, ಚಿನ್ನದವರೆಗೂ, ಹಣದಿಂದ ಬೆಳ್ಳಿಯವರೆಗೂ ಎಲ್ಲವನ್ನು ದಾನ ಕೊಟ್ಟರು. ಬಿಜೆಪಿಯವರು ನಮ್ಮ ಅಕ್ಕಿಗೆ ಅರಿಶಿನ ಬೆರೆಸಿ ರಾಮ ಮಂದಿರ ಅಕ್ಷತೆ ಎಂದು ಹಂಚಿ ಪ್ರಚಾರ ಪಡೆದರು” ಎಂದು ಕಿಡಿ ಕಾರಿದರು.
“ಮಂತ್ರಾಕ್ಷತೆ ಕೊಟ್ಟವರಿಗೆ, ರಾಮ ಮಂದಿರ ದೇಣಿಗೆ ಏನಾಯ್ತು? ಎಂದು ಕೇಳಬೇಕು. ಧರ್ಮ ಹಾಗೂ ರಾಮನ ಹೆಸರಿನಲ್ಲಿ ಲೂಟಿ ಮಾಡಿದವರಿಗೆ ಮತ್ತೆ ಜನರ ಬಳಿ ಮತ ಕೇಳುವ ನೈತಿಕತೆ ಕಳೆದುಕೊಂಡಿದ್ದಾರೆ. ನಮ್ಮದು ಇತಿಹಾಸ ಹೊಂದಿರುವ ಪಕ್ಷ. ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲ ವರ್ಗದ ಜನ ಅಧಿಕಾರಕ್ಕೆ ಬಂದಂತೆ. ನಾವು ಎಲ್ಲ ವರ್ಗದ ಜನರನ್ನು ಒಟ್ಟಾಗಿ ಸೇರಿಸುವ ಕೆಲಸ ಮಾಡುತ್ತೇವೆ. ರಾಹುಲ್ ಗಾಂಧಿ ಅವರು ನಮ್ಮಲ್ಲಿರುವ ಭಿನ್ನಾಭಿಪ್ರಾಯ ತೆಗೆದುಹಾಕಿ ಎಲ್ಲರನ್ನು ಒಂದುಗೂಡಿಸಲು ಭಾರತ ಜೋಡೋ ಯಾತ್ರೆ ಮಾಡಿದರು. ಬಿಜೆಪಿಯವರು ಸಮಾಜ ಕತ್ತರಿಸುವ ಕತ್ತರಿ, ಕಾಂಗ್ರೆಸ್ ಸಮಾಜವನ್ನು ಒಂದುಗೂಡಿಸುವ ಸೂಜಿಯಂತೆ. ಅದಕ್ಕಾಗಿ ರಾಹುಲ್ ಗಾಂಧಿ ಅವರು ಪಾದಯಾತ್ರೆ ಮಾಡಿದರು. ಇಂತಹ ಪಾದಯಾತ್ರೆ ದೇಶದ ಬೇರೆ ಯಾವುದಾದರೂ ನಾಯಕರು ಮಾಡಿದ್ದಾರಾ? ಸೋನಿಯಾ ಗಾಂಧಿ ಅವರಂತೆ ದೇಶದ ಪ್ರಧಾನಮಂತ್ರಿ ಸ್ಥಾನವನ್ನು ಬೇರೆ ಯಾರಾದರೂ ತ್ಯಾಗ ಮಾಡಿದ್ದಾರಾ? ಇಂತಹ ಪಕ್ಷದಲ್ಲಿ ಸೇವೆ ಮಾಡುತ್ತಿರುವ ನಾವು ಭಾಗ್ಯವಂತರು” ಎಂದು ತಿಳಿಸಿದರು.
“ಸಿದ್ದರಾಮಯ್ಯ ಅವರ ಅವಧಿಯಲ್ಲಿನ ಎಲ್ಲ ಕಾರ್ಯಕ್ರಮ ಮುಂದುವರಿಯಲಿದೆ. ಮುಂದಿನ ಒಂದು ವರ್ಷಗಳಲ್ಲಿ ಅನುಭವ ಮಂಟಪ ಕಾಮಗಾರಿ ಪೂರ್ಣಗೊಳಿಸಲು ನಿರ್ದೇಶನ ನೀಡಲಾಗಿದೆ. ನಮಗೆ ಬಸವಣ್ಣನವರ ತತ್ವ, ಆಚಾರ, ವಿಚಾರದ ಮೇಲೆ ನಂಬಿಕೆ ಇದೆ. ಅವರ ಮಾರ್ಗದರ್ಶನದಂತೆ ಎಲ್ಲ ವರ್ಗದವರನ್ನು ಒಟ್ಟಾಗಿ ತೆಗೆದುಕೊಂಡು ಹೋಗುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಮಹಿಳೆಯರಿಗೆ ರಾಜಕೀಯದಲ್ಲಿ 33% ಮೀಸಲಾತಿ ಸಿಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಮೂರನೇ ಒಂದು ಭಾಗದಷ್ಟು ಶಾಸಕರು, ಸಂಸದರು ಮಹಿಳೆಯರು ಇರುತ್ತಾರೆ. ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ 50% ಮೀಸಲಾತಿ ನೀಡಿ ಸಮಾನತೆ ಸಾರಿದ್ದು ರಾಜೀವ್ ಗಾಂಧಿ ಅವರು. ರಾಹುಲ್ ಗಾಂಧಿ ಅವರು ಕಾಲೇಜುಗಳಲ್ಲಿ ವಿದ್ಯಾರ್ಥಿ ಚುನಾವಣೆ ನಡೆಸಲು ಮಾರ್ಗದರ್ಶನ ನೀಡಿದ್ದು, ಮುಂದಿನ ದಿನಗಳಲ್ಲಿ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಮಾಡಲಾಗುವುದು” ಎಂದು ತಿಳಿಸಿದರು.
“ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವ್ಯವಸ್ಥೆ ಕಲ್ಪಿಸಿದ್ದೇವೆ. ಕೊಟ್ಟ ಮಾತಿನಂತೆ 72 ಸಾವಿರ ಹುದ್ದೆಗಳ ಭರ್ತಿಗೆ ತೀರ್ಮಾನ ಮಾಡಿದ್ದು, 15 ಸಾವಿರ ಶಾಲಾ ಶಿಕ್ಷಕರ ನೇಮಕಾತಿಗೆ ಅಧಿಸೂಚನೆ ಹೊರಡಿಸಿದ್ದೇವೆ. ನಗರಾಭಿವೃದ್ಧಿ ಇಲಾಖೆಯಲ್ಲಿ 15 ಸಾವಿರ ಹುದ್ದೆಗಳು, ಗೃಹ ಇಲಾಖೆಯಲ್ಲಿ ಸುಮಾರು 7 ಸಾವಿರ, ಇಂಧನ ಇಲಾಖೆಯಲ್ಲಿ 1600 ಹುದ್ದೆಗಳು ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಭರ್ತಿ ಮಾಡಲಾಗುತ್ತಿದೆ. ಇನ್ನು ನಮ್ಮ ಸರ್ಕಾರ ಆರನೇ ಗ್ಯಾರಂಟಿಯಾಗಿ ನಿಮ್ಮ ಆಸ್ತಿ ದಾಖಲೆ ಸರಿಮಾಡಲು, ನಿಮ್ಮ ಜಮೀನಿಗೆ ಪೋಡಿ ಮಾಡಿಕೊಡಲು ನಮ್ಮ ಸರ್ಕಾರ ಮುಂದಾಗಿದೆ. ಬಿ ಖಾತೆಯಿಂದ ಎ ಖಾತೆಗಳಿಗೆ ಪರಿವರ್ತನೆ ಮಾಡಲು ಆಂದೋಲನ ಮಾಡುತ್ತಿದ್ದೇವೆ. ಒಂದು ರೂಪಾಯಿ ಲಂಚವಿಲ್ಲದೆ ಜನರ ಮನೆ ಬಾಗಿಲಿಗೆ ಖಾತೆ ವಿತರಣೆ ಮಾಡಲಿದೆ” ಎಂದು ಹೇಳಿದರು.
ನೀರಾವರಿ ಯೋಜನೆಗಳ ವಿಚಾರದಲ್ಲಿ ದಿಟ್ಟ ನಿರ್ಧಾರ
“ನೀರಾವರಿ ವಿಚಾರದಲ್ಲಿ ನಮ್ಮ ಸರ್ಕಾರ ದಿಟ್ಟ ನಿರ್ಧಾರ ತೆಗೆದುಕೊಂಡಿದೆ. ಯುಕೆಪಿ 3ನೇ ಹಂತ ಯೋಜನೆ ಜಾರಿಗೆ ರೈತರಿಗೆ ಪರಿಹಾರ ನೀಡಲು ನಮ್ಮ ಸರ್ಕಾರ ತೀರ್ಮಾನ ಮಾಡಿದೆ. ಕಾವೇರಿ, ಗೋದಾವರಿ, ಕೃಷ್ಣಾ ನದಿ ಜೋಡಣೆಗೆ ಕೇಂದ್ರ ಜಲಶಕ್ತಿ ಸಚಿವರಾದ ಸಿ.ಆರ್. ಪಾಟೀಲ್ ಅವರ ನೇತೃತ್ವದಲ್ಲಿ ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ ಮುಖ್ಯಮಂತ್ರಿಗಳಾದ ನಾನು, ಚಂದ್ರಬಾಬು ನಾಯ್ಡು, ರೇವಂತ್ ರೆಡ್ಡಿ ಸೇರಿ ಒಮ್ಮತದ ತೀರ್ಮಾನ ಮಾಡಿದ್ದೇವೆ. ಕಲ್ಯಾಣ ಕರ್ನಾಟಕ ಭಾಗದ ಜನರ ಹಿತಕ್ಕಾಗಿ ಮುಂದಾಗಿದ್ದೇವೆ. ಇಂತಹ ಒಂದು ತೀರ್ಮಾನ ಬಿಜೆಪಿಯವರ ಕಾಲದಲ್ಲಿ ಮಾಡಲು ಸಾಧ್ಯವಾಗಿಲ್ಲ” ಎಂದರು.
“ಮುಂದಿನ ನಾಲ್ಕೈದು ತಿಂಗಳಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯಲಿದ್ದು, ಮಟ್ಟೂರು ಅವರನ್ನು ಪರಿಷತ್ ಚುನಾವಣೆಗೆ ಸ್ಪರ್ಧಿಸಲು ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದು, ಅವರ ಗೆಲುವು ಮಲ್ಲಿಕಾರ್ಜುನ ಖರ್ಗೆ ಅವರ ಗೆಲುವು, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಈಶ್ವರ್ ಖಂಡ್ರೆ, ಪರಮೇಶ್ವರ್ ಅವರ ಗೆಲುವಾಗಿದೆ. ಈ ಜಿಲ್ಲೆಯಲ್ಲಿರುವ ನೀರಾವರಿ ಸಮಸ್ಯೆ ಬಗೆಹರಿಸಲು ಏತ ನೀರಾವರಿ ಯೋಜನೆಗಳ ಬಗ್ಗೆ ನಾನು ಈ ಭಾಗದ ಶಾಸಕರು, ಸಂಸದರ ಜೊತೆ ಚರ್ಚೆ ಮಾಡಿದ್ದೇನೆ” ಎಂದು ತಿಳಿಸಿದರು.






