ನಾನು ಲೆಫ್ಟು ಅಲ್ಲ, ರೈಟು ಅಲ್ಲ, ಹೆಣ್ಣು ಮಕ್ಕಳ ಪರವಾಗಿದ್ದೇನೆ : ಡಾ. ನಾಗಲಕ್ಷ್ಮೀ ಚೌಧರಿ

ಬೀದರ್ : ಧರ್ಮಸ್ಥಳದಲ್ಲಿ ನಾಪತ್ತೆಯಾದವರ ಬಗ್ಗೆ ಕೇಳಿದ್ರೆ ಎಡಪಂಥಿ ಅಂತಾರೆ, ನಾನ್ಯಾಕೆ ಲೆಪ್ಟಿಸ್ಟ್ ಆಗಲಿ. ನಾನು ಒಂದು ಸಂವಿಧಾನಿಕ ಸ್ಥಾನದಲ್ಲಿದ್ದೇನೆ. ನಾನು ಲೆಫ್ಟು ಅಲ್ಲ, ರೈಟು ಅಲ್ಲ ಹೆಣ್ಮಕ್ಕಳ ಪರವಾಗಿದ್ದೇನೆ ಎಂದು ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಅವರು ಹೇಳಿದರು.
ನಗರದಲ್ಲಿ ಧರ್ಮಸ್ಥಳದ ಬಗ್ಗೆ ಸುದ್ಧಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಯಾವುದೇ ಒಂದು ಹೆಣ್ಣಿಗೆ ಲೆಪ್ಟ್, ರೈಟ್ ಇರುವುದಿಲ್ಲ. ನನ್ನ ಜಾತಿ, ಧರ್ಮ, ಮತ ಎಲ್ಲವೂ ಹೆಣ್ಣೆ. ಧರ್ಮಸ್ಥಳದಲ್ಲಿ ಸತ್ತವರೆಲ್ಲರೂ ಹಿಂದೂ ಹೆಣ್ಣು ಮಕ್ಕಳೇ, ಅದರ ಬಗ್ಗೆ ನಾನು ಧ್ವನಿ ಎತ್ತಬಾರದಾ? ಧರ್ಮಸ್ಥಳದಲ್ಲಿ ನಾಪತ್ತೆಯಾದವರ ಬಗ್ಗೆ, ಮಹಿಳೆಯರ ಅಸಹಜ ಸಾವಿನ ಬಗ್ಗೆ ಕೇಳುವುದು ತಪ್ಪಾ ಎಂದು ಪ್ರಶ್ನೆ ಮಾಡಿದ ಅವರು ಧರ್ಮಸ್ಥಳದಲ್ಲಿ ಹೆಣ್ಮಕ್ಕಳನ್ನು ಕೊಂದವರು ಯಾರು ಎಂಬುದು ಪತ್ತೆ ಹಚ್ಚಲೆಂದೆ ಎಸ್ಐಟಿ ರಚಿಸಲಾಗಿದೆ ಎಂದರು.
ನಾನು ಎಡಪಂಥಿಯೂ ಅಲ್ಲ, ಬಲಪಂಥಿಯೂ ಅಲ್ಲ ಹೆಣ್ಣು ಅಷ್ಟೇ. ನಾನು ಮಹಿಳಾ ಆಯೋಗದ ಅಧ್ಯಕ್ಷೆಯಾಗಿರುವ ತನಕ ಹೆಣ್ಣಿನ ಪರ, ಧರ್ಮದ ಪರ ನಿಲ್ಲುತ್ತೇನೆ. ಬ್ರಾಹ್ಮಣ, ದಲಿತ ಎಲ್ಲಾ ಹೆಣ್ಣು ಮಕ್ಕಳ ಮೇಲೂ ದೌರ್ಜನ್ಯ ಆಗುತ್ತಿದೆ. ದೌರ್ಜನ್ಯ ಇಲ್ಲದಿರುವಂತಹ ಹೆಣ್ಣುಮಕ್ಕಳೇ ಇಲ್ಲ. ದೌರ್ಜನ್ಯಕ್ಕೊಳಗಾಗಿ ನೆರವಿಗೆ ಬಂದ ಹೆಣ್ಣು ಮಕ್ಕಳಿಗೆ ನೀನು ಯಾವ ಪಂಥ ಅಂತಾ ಕೇಳೋಕೆ ಆಗುತ್ತಾ ಎಂದು ಪ್ರಶ್ನೆ ಮಾಡಿದ ಅವರು, ರಾಜ್ಯದಲ್ಲಿರುವ ಎಲ್ಲಾ ಜಿಲ್ಲೆಗಳಿಂದ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯಗಳ ಬಗ್ಗೆ ವರದಿ ತರಿಸಿಕೊಳ್ಳುತ್ತೇವೆ, ಕ್ರಮಕ್ಕೆ ಆಗ್ರಹಿಸುತ್ತೇವೆ ಎಂದು ತಿಳಿಸಿದರು.







