ಎಲ್ಲರೂ ರಸ್ತೆ ಸಂಚಾರ ನಿಯಮ ಪಾಲನೆ ಮಾಡಬೇಕು : ನ್ಯಾ. ರಾಘವೇಂದ್ರ ಉಪಾಧ್ಯೆ

ಬೀದರ್ : ಪ್ರತಿಯೊಬ್ಬರೂ ರಸ್ತೆ ಮೇಲೆ ಹೋಗುವುದು ಅನಿವಾರ್ಯವಿದೆ. ಆದರೆ, ನಿಯಮದೊಂದಿಗೆ ರಸ್ತೆ ಮೇಲೆ ಹೋದಾಗ ನಮ್ಮ ಜೀವಕ್ಕೂ ಮತ್ತು ಮತ್ತೊಬ್ಬರ ಜೀವಕ್ಕೂ ಒಳ್ಳೆಯದಾಗುತ್ತದೆ. ಹೀಗಾಗಿ ರಸ್ತೆ ಸಂಚಾರ ನಿಯಮ ಪಾಲನೆ ಮಾಡಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ರಾಘವೇಂದ್ರ ಉಪಾಧ್ಯೆ ಅವರು ತಿಳಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಪ್ರಾದೇಶಿಕ ಸಾರಿಗೆ ಇಲಾಖೆಯ ವತಿಯಿಂದ ನಗರದ ಪ್ರತಾನ ನಗರದಲ್ಲಿರುವ ಪ್ರಾದೇಶಿಕ ಸಾರಿಗೆ ಇಲಾಖೆಯ ಕಚೇರಿಯಲ್ಲಿ ಮಂಗಳವಾರ ನಡೆದ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಾರಿಗೆ ಇಲಾಖೆಯಲ್ಲಿ 1991ರ ಏ.1 ರಿಂದ 2022ರ ಮಾ.31ರ ವರೆಗಿನ ಅವಧಿಯಲ್ಲಿ ದಾಖಲಾದ ಇಲಾಖಾ ಪ್ರಕರಣಗಳ ದಂಡದ ಮೊತ್ತದ ಮೇಲೆ ಶೇ. 50ರಷ್ಟು ವಿನಾಯಿತಿ ನೀಡಲಾಗಿದೆ. ಈ ವರ್ಷದ ಜೂ.21 ರಿಂದ ಜು.10ನೇ ತಾರಿಕಿನ ಅವಧಿಯಲ್ಲಿ ಭರಿಸಿದರೆ ಮಾತ್ರ ಶೇ.50ರಷ್ಟು ದಂಡ ಭರಿಸಬಹುದಾಗಿದೆ. ಅನಂತರದಲ್ಲಿ ಭರಿಸುವುದಾದರೆ ಶೇ.100 ರಷ್ಟು ದಂಡ ಭರಿಸಬೇಕಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.
ಈ ವಿನಾಯಿತಿ ನೀಡುವುದರಿಂದ ಸರಕಾರಕ್ಕೆ ನಷ್ಟವೇ ಇದೆ. ಆದರೆ, ಹಲವು ವರ್ಷಗಳಿಂದ ಭರಿಸದೇ ಉಳಿಸಿಕೊಂಡಿರುವ ಹಲವು ಪ್ರಕರಣಗಳಲ್ಲಿನ ದಂಡದ ಮೊತ್ತ ಸಾರ್ವಜನಿಕರಿಗೆ ಭಾರವಾಗದಿರಲಿ ಎಂದು ಸರಕಾರ ಈ ವಿನಾಯಿತಿ ನೀಡಿದೆ. ಸಾರ್ವಜನಿಕರು ಈ ವಿನಾಯಿತಿಯ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದ ಅವರು, ಈ ಕುರಿತು ಅರಿವು ಮೂಡಿಸಿದ್ದರೂ ಕೂಡ ಜನರಿಂದ ಸ್ಪಂದನೆ ಸಿಗುತ್ತಿಲ್ಲ. ಹೀಗಾಗಿ ಇನ್ನಾದರೂ ಸಾರ್ವಜನಿಕರು ಗಮನ ಹರಿಸಬೇಕು ಎಂದು ಹೇಳಿದರು.
ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿ ಮುಹಮ್ಮದ್ ಜಾಫರ್ ಸಾದಿಕ್ ಅವರು ಮಾತನಾಡಿ, ತೆರಿಗೆ ಮೇಲೆ ವಿನಾಯಿತಿ ಇಲ್ಲ. ದಂಡದ ಮೇಲೆ ವಿನಾಯಿತಿ ಇದೆ. ಸಾರ್ವಜನಿಕರು ಈ ಕುರಿತು ತಿಳಿದುಕೊಂಡು ಬಾಕಿ ಉಳಿದಿರುವ ದಂಡವನ್ನು ಭರಿಸಬೇಕು. ರಾಜ್ಯ ಸರಕಾರದಿಂದ ಶೇ.50ರಷ್ಟು ವಿನಾಯಿತಿ ನೀಡಲಾಗಿದೆ. ಇದರ ಉಪಯೋಗ ಮಾಡಿಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮೋಟಾರು ವಾಹನ ನಿರೀಕ್ಷಕ ಪ್ರಕಾಶ್ ಎಚ್. ಉಳ್ಳೆ, ರವಿಶಂಕರ್ ನಾಗಠಾಣಾ, ಮಹೇಶಕುಮಾರ್ ಮೆಣಸಿನಕಾಯಿ, ಕಚೇರಿ ಅದಿಕ್ಷಕ ಮಲ್ಲಿಕಾರ್ಜುನ್ ಎಂ., ಪ್ರೇಮಕುಮಾರ್ ಎಲಗುರ್ತಿ, ಗುರುಪ್ರಸಾದ್ ಗುಳೇದಗುಡ್ಡ, ಸುನಿಲ್ ಬಗಲಿ, ಸೈಯದ್ ಕಲಿಮ್, ಅಂಬಿಕಾ. ಭಾಗ್ಯವಂತಿ ಉಪಸ್ಥಿತರಿದ್ದರು.






