ಹುಲಸೂರು ತಾಲೂಕನ್ನು ಬರಪೀಡಿತವೆಂದು ಘೋಷಿಸಲು ರೈತರ ಆಗ್ರಹ

ಹುಲಸೂರು: ಬರಪೀಡಿತ ತಾಲೂಕುಗಳ ಪಟ್ಟಿಯಿಂದ ಹುಲಸೂರು ತಾಲೂಕನ್ನು ಕೈಬಿಟ್ಟಿರುವುದನ್ನು ಖಂಡಿಸಿ, ಕೂಡಲೇ ತಾಲೂಕನ್ನು ಬರಪೀಡಿತವೆಂದು ಘೋಷಿಸಬೇಕು ಎಂದು ಆಗ್ರಹಿಸಿ ಭಾರತೀಯ ಕಿಸಾನ್ ಸಂಘದ ಗಡಿಗೌಡಗಾಂವ್ ಶಾಖೆಯ ನೇತೃತ್ವದಲ್ಲಿ ಶನಿವಾರ ಪ್ರತಿಭಟನೆ ನಡೆಸಲಾಯಿತು.
ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ಹಾಗೂ ಸಂಭಾಜಿ ಬ್ರಿಗೇಡ್ ಬೆಂಬಲದೊಂದಿಗೆ ನಡೆದ ಪ್ರತಿಭಟನೆಯಲ್ಲಿ ರೈತರು ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದಿಂದ ತಹಶೀಲ್ದಾರ್ ಕಚೇರಿವರೆಗೆ ಬೃಹತ್ ಪಾದಯಾತ್ರೆ ನಡೆಸಿದರು. ಬಳಿಕ ತಹಶೀಲ್ದಾರ್ ಶಿವಾನಂದ ಮೇತ್ರೆ ಅವರಿಗೆ ಮನವಿ ಪತ್ರ ಸಲ್ಲಿಸಿ, ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಕಳುಹಿಸುವಂತೆ ಮನವಿ ಮಾಡಿದರು.
ಹುಲಸೂರು ತಾಲೂಕನ್ನು ಬರಪೀಡಿತ ತಾಲೂಕುಗಳ ಪಟ್ಟಿಯಿಂದ ಕೈಬಿಟ್ಟಿರುವುದು ರಾಜ್ಯ ಸರ್ಕಾರ ರೈತರಿಗೆ ಮಾಡಿರುವ ಅನ್ಯಾಯ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ತಾಲೂಕಿನಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಕೇವಲ 244 ಮಿ.ಮೀ. ಮಳೆಯಾಗಿದ್ದು, ವಾಡಿಕೆಯ 398 ಮಿ.ಮೀ.ಗೆ ಹೋಲಿಸಿದರೆ ಶೇ.39ರಷ್ಟು ಮಳೆ ಕೊರತೆ ದಾಖಲಾಗಿದೆ ಎಂದು ತಿಳಿಸಿದರು.
ಜೂನ್ನಲ್ಲಿ ಮಳೆ ಬಾರದ ಪರಿಣಾಮ ಬಿತ್ತನೆ ವಿಳಂಬವಾಗಿದ್ದು, ತೇವಾಂಶದ ಕೊರತೆಯಿಂದ ಬಿತ್ತನೆ ಮಾಡಿದ ಬೆಳೆಗಳೂ ಒಣಗಿವೆ. ಮಳೆಯ ಅಭಾವದಿಂದ ಬಿತ್ತನೆ ಪ್ರಮಾಣ ಕಡಿಮೆಯಾಗಿದ್ದು, ಈಗಾಗಲೇ ಸಾಲದ ಹೊರೆ ಹೊತ್ತಿರುವ ರೈತರು ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ರೈತರು ಹೇಳಿದರು.
ತಾಲೂಕಿನ ಬರ ಪರಿಸ್ಥಿತಿಯನ್ನು ಸರ್ಕಾರ ಕೂಡಲೇ ಪುನರ್ ಪರಿಶೀಲಿಸಿ ಹುಲಸೂರನ್ನು ಬರಪೀಡಿತ ತಾಲೂಕು ಎಂದು ಘೋಷಿಸಬೇಕು. ಪ್ರತಿ ಹೆಕ್ಟೇರ್ಗೆ 50 ಸಾವಿರ ರೂ. ಬೆಳೆ ಪರಿಹಾರ ನೀಡುವುದರ ಜೊತೆಗೆ ರೈತರ ಬ್ಯಾಂಕ್ ಸಾಲ ಮನ್ನಾ ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಭಾರತೀಯ ಕಿಸಾನ್ ಸಂಘ ತಾಲೂಕು ಕಾರ್ಯದರ್ಶಿ ಅನೀಲಕುಮಾರ್ ತಾಂಬಳೆ, ಸಂಬಾಜಿ ಬ್ರಿಗೇಡ್ ತಾಲೂಕಾಧ್ಯಕ್ಷ ಜ್ಞಾನೋಬಾ ನಿಟ್ಟೂರೆ, ಭಾರತೀಯ ಕಿಸಾನ್ ಸಂಘದ ಬಸವಕಲ್ಯಾಣ ತಾಲೂಕಾಧ್ಯಕ್ಷ ಶರಣಪ್ಪ ಧನ್ನೆ, ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆಯ ತಾಲೂಕಾಧ್ಯಕ್ಷ ಕೇದಾರ್ ಭೋಪಳೆ, ರಫೀಕ್ ಮೇಹಕರವಾಲೆ, ರವಿ ತೋಗರಖೇಡೆ, ಸಾಧೀಕ್ ಸೌದಾಗರ್, ಜೈರಾಜ್ ಬಿರಾದಾರ್, ಶಿವಾ ತಾಟೆ, ಹಾವಪ್ಪ ಕಾಮಶೇಟೆ, ಪ್ರಕಾಶ್ ಮೆಂಡೊಳೆ, ಅಶೋಕ್ ಖ್ಯಾಡೆ, ಬಸಪ್ಪ ಚೌರೆ, ಬಂಡೆಪ್ಪ ಪಾಟೀಲ್, ಕಾಶಿನಾಥ್ ರಾಚೋಟೆ, ದೇವಾನಂದ್ ಕುರದೆ, ಸಂಗಪ್ಪ ತಾಂಬಳೆ, ಬಾಬುರಾವ್ ಗುಂಜಟೆ, ದತ್ತು ರಾಘೋ, ಧನಾಜಿ ಸಮದರೆ, ಅರವಿಂದ್ ಪಾಟೀಲ್, ದೇವಿಂದ್ರ ಹಲಂಗೆ, ಸಂತೋಷ್ ಬಿರಾದಾರ್, ಯುವರಾಜ್ ಜಾಮಖಂಡೆ, ನಾಗನಾಥ್ ಬನಸೂಡೆ, ರಾಮ್ ಬಿರಾದಾರ್, ಗೊವಿಂದ್ ಮೇತ್ರೆ, ಶಿವಕುಮಾರ್ ಪಾಟೀಲ್ ಹಾಗೂ ಸತೀಶ್ ಸ್ವಾಮಿ ಸೇರಿದಂತೆ ತಾಲೂಕಿನ ಗ್ರಾಮೀಣ ಭಾಗದ ರೈತರು ಭಾಗವಹಿಸಿದ್ದರು.






