ಜನಪದ ಕಲಾವಿದರು ಮನೋ ಖಿನ್ನತೆ ಬದಿಗಿಟ್ಟು ಮುಂದೆ ಸಾಗಬೇಕು : ಶಿವಪ್ರಸಾದ್ ಗೊಲ್ಲಹಳ್ಳಿ

ಬೀದರ್ : ಜನಪದ ಕಲಾವಿದರು ಮನೋ ಖಿನ್ನತೆಯನ್ನು ಬದಿಗಿಟ್ಟು ಆತ್ಮವಿಶ್ವಾಸದಿಂದ ಮುಂದೆ ಸಾಗಬೇಕು. ಜನಪದ ಕಲಾವಿದರೇ ಜಗತ್ತನ್ನು ಕಟ್ಟಿದವರು, ಸಂಸ್ಕೃತಿಯನ್ನು ಉಳಿಸಿದವರು ಹಾಗೂ ಜೋಗುಳ ಹಾಡುವ ಮೂಲಕ ವಿಶ್ವವನ್ನು ಬೆಳಗಿಸಿದವರು. ಆದ್ದರಿಂದ, ಜನಪದ ಕಲಾವಿದರು ಶ್ರೇಷ್ಠರು ಎಂದು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಶಿವಪ್ರಸಾದ್ ಗೊಲ್ಲಹಳ್ಳಿ ಹೇಳಿದರು.
ನಗರದ ನೆಹರು ಕ್ರೀಡಾಂಗಣ ಸಭಾಂಗಣದಲ್ಲಿ ಇತ್ತಿಚಿಗೆ ಕರ್ನಾಟಕ ಜಾನಪದ ಅಕಾಡೆಮಿ ವತಿಯಿಂದ ಆಯೋಜಿಸಿದ್ದ ಜನಪದ ಕಲಾವಿದರ ಮಾಸಾಶನ ಅರ್ಹತಾ ಪರಿಶೀಲನಾ ಸಂದರ್ಶನ ಕಾರ್ಯಕ್ರಮಕ್ಕೆ ಡೊಳ್ಳು ಬಾರಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಕಲಾವಿದರು ಯಾವುದೇ ಮಧ್ಯವರ್ತಿಗಳ ಮಾತಿಗೆ ಕಿವಿಗೊಡಬಾರದು. ನಿಜವಾದ ಕಲಾವಿದರ ದಾಖಲೆಗಳು ಸರಿಯಾಗಿದ್ದರೆ ಅವರಿಗೆ ಖಂಡಿತವಾಗಿಯೂ ಮಾಸಾಶನ ದೊರೆಯುತ್ತದೆ ಎಂದರು.
ಈ ಹಿಂದೆ ಮಾಸಾಶನದ ಸಂದರ್ಶನಗಳು ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿಯೇ ನಡೆಯುತ್ತಿದ್ದವು. ಆದರೆ, ರಾಜ್ಯದ ವಿವಿಧ ಭಾಗಗಳಿಂದ ಬೆಂಗಳೂರಿಗೆ ಬರುವುದು ಕಲಾವಿದರಿಗೆ ಕಷ್ಟಕರವಾಗಿದ್ದ ಹಿನ್ನೆಲೆಯಲ್ಲಿ, ಕಲಾವಿದರಿರುವ ಸ್ಥಳದಲ್ಲಿಯೇ ಸಂದರ್ಶನ ನಡೆಸುವ ಉದ್ದೇಶದಿಂದ ಈ ಬಾರಿ ಜಿಲ್ಲಾ ಮಟ್ಟದಲ್ಲಿ ಸಂದರ್ಶನಗಳು ಆಯೋಜಿಸಲಾಗಿದೆ ಎಂದು ಅವರು ಹೇಳಿದರು.
ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ವಿಜಯಕುಮಾರ್ ಸೋನಾರೆ ಅವರು ಮಾತನಾಡಿ, ಜನಪದ ಕಲಾವಿದರು ತಮ್ಮ ಕಲೆ, ನಾಡಿನ ನೆಲ, ಜಲ ಹಾಗೂ ಸಂಸ್ಕೃತಿಯನ್ನು ಉಳಿಸಿಕೊಂಡು ಬದುಕುತ್ತಿರುವ ಅಮೂಲ್ಯ ಸಂಪತ್ತುಗಳಾಗಿದ್ದಾರೆ. ಕಲಾವಿದರು ಯಾವುದೇ ಗೊಂದಲಗಳಿಗೆ ಒಳಗಾಗದೆ ಆತ್ಮವಿಶ್ವಾಸದಿಂದ ಸಂದರ್ಶನದಲ್ಲಿ ಭಾಗವಹಿಸಬೇಕು. ಸಂದರ್ಶನ ಪ್ರಕ್ರಿಯೆ ಸಂಪೂರ್ಣ ಪಾರದರ್ಶಕವಾಗಿ ಹಾಗೂ ಸಮರ್ಪಕವಾಗಿ ನಡೆಯಲಿದ್ದು, ನಿಜವಾದ ಕಲಾವಿದರಿಗೆ ನ್ಯಾಯ ದೊರೆಯುತ್ತದೆ ಎಂದು ಹೇಳಿದರು.
ರಾಜ್ಯದ ಜನಪದ ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುತ್ತಿರುವ ಕಲಾವಿದರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಅಕಾಡೆಮಿ ಕಾರ್ಯನಿರ್ವಹಿಸುತ್ತಿದ್ದು, ಅರ್ಹ ಕಲಾವಿದರಿಗೆ ಯಾವುದೇ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ ಸ್ವಾಗತಿಸಿ ಪ್ರಸ್ತಾವಿಕ ಮಾತನಾಡಿದರು. ಕಾರ್ಯಕ್ರಮದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಒಟ್ಟು 88 ಜಾನಪದ ಕಲಾವಿದರು ಸಂದರ್ಶನದಲ್ಲಿ ಭಾಗವಹಿಸಿ ತಮ್ಮ ಕಲಾ ಪ್ರತಿಭೆ ಹಾಗೂ ಸಾಧನೆಗಳ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ಜಾನಪದ ಅಕಾಡೆಮಿಯ ರಿಜಿಸ್ಟ್ರಾರ್ ಎನ್. ನಮೃತಾ, ಅಕಾಡೆಮಿ ಸದಸ್ಯರಾದ ರಾಯಚೂರಿನ ರಂಗಪ್ಪ ಮಾಸ್ಟರ್, ಕೊಪ್ಪಳದ ಮಹೇಬೂಬ್ ಸಾಬ್, ಕನ್ನಡ ಜಾಗೃತಿ ಸಮಿತಿಯ ಸದಸ್ಯ ಸುನೀಲ್ ಭಾವಿಕಟ್ಟಿ ಸೇರಿದಂತೆ ಸಮಿತಿ ಸದಸ್ಯರು, ಜಾನಪದ ಕಲಾವಿದರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಅಕಾಡೆಮಿ ಸಿಬ್ಬಂದಿ ಉಪಸ್ಥಿತರಿದ್ದರು.






