Bidar | ಘಾಟಬೋರಳ್ ಗ್ರಾಮದಲ್ಲಿ ಮಂಗ ದಾಳಿ: 25 ಜನರಿಗೆ ಗಾಯ

ಹುಮನಾಬಾದ್: ತಾಲೂಕಿನ ಘಾಟಬೋರಳ್ ಗ್ರಾಮದಲ್ಲಿ ಸುಮಾರು ದಿನಗಳಿಂದ ಮಂಗ ಒಂದು ಮನುಷ್ಯರ ಮೇಲೆ ನಿರಂತರ ದಾಳಿ ಮಾಡಿ ಕಚ್ಚುತ್ತಿದ್ದು, ಇಲ್ಲಿವರೆಗೆ ಸುಮಾರು 15ರಿಂದ 20ಜನರನ್ನು ಕಚ್ಚಿದೆ.
ಮಂಗ ದಾಳಿಯಿಂದಾಗಿ ಭಯಭಿತರಾದ ಜನ ಸ್ಥಳೀಯ ಪಂಚಾಯತಿ ಅಭಿವೃದ್ಧಿ ಅಧಿಕಾರಿ, ತಹಸೀಲ್ದಾರ್ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಆದರೆ, ಸಮಯಕ್ಕೆ ಮಂಗ ಸೆರೆ ಹಿಡಿಯುವ ಕಾರ್ಯಾಚರಣೆ ನಡೆದಿಲ್ಲ. ರವಿವಾರ ಮತ್ತೆ ಗ್ರಾಮದ ಐದು ಜನರಿಗೆ ಮಂಗ ಕಚ್ಚಿದ್ದು, ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ ಎಂದು ತಿಳಿದು ಬಂದಿದೆ.
ಅರಣ್ಯ ಇಲಾಖೆಯ ಸಿಬ್ಬಂದಿಗಳು ಮಂಗ ಹಿಡಿಯುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಮಂಗವು ಹೊಲ ಗದ್ದೆಗಳಲ್ಲಿ ಓಡಾಡುತ್ತಿರುವುದರಿಂದ ಹಿಡಿಯಲು ಆಗಲಿಲ್ಲ. ಇದೀಗ ಬೀದರ್ ನಿಂದ ತಂಡ ಕೂಡ ಕಾರ್ಯಾಚರಣೆಗೆ ಬಂದಿದ್ದು, ಮಂಗ ಹಿಡಿಯುವ ಕಾರ್ಯಾಚರಣೆ ಮುಂದುವರೆದಿದೆ. ಮಂಗ ಕಡಿತಕ್ಕೋಳಗಾದ ಜನರು ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಮಂಗವು ಗ್ರಾಮದ ಹಲವರನ್ನು ಕಚ್ಚಿದ್ದರಿಂದ ನಮ್ಮಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಮಕ್ಕಳನ್ನು ಸೇರಿದಂತೆ ಹಿರಿಯರಿಗೂ ಕೂಡ ಕಚ್ಚಿದೆ. ಮಂಗ ಹುಚ್ಚಾಗಿದೆಯೋ ಅಥವಾ ಒಂಟಿತನದಿಂದ ಸಿಟ್ಟಿಗೆ ಬಂದು ಜನರ ಮೇಲೆ ದಾಳಿ ಮಾಡುತ್ತಿದೆಯೋ ಗೊತ್ತಿಲ್ಲ. ಆದಷ್ಟು ಬೇಗ ಮಂಗ ಸೆರೆ ಹಿಡಿಯಬೇಕು ಎಂದು ಗ್ರಾಮಸ್ಥ ಶಿವಕುಮಾರ್ ಸಾಕ್ರೆ ಅವರು ಆಗ್ರಹಿಸಿದ್ದಾರೆ.
ಅಧಿಕಾರಿಗಳು ತಕ್ಷಣ ಕಾರ್ಯಾಚರಣೆ ಮುಂದುವರೆಸಿ ಮಂಗ ಸೆರೆ ಹಿಡಿದಿದ್ದರೆ ಇಷ್ಟು ಜನರ ಮೇಲೆ ದಾಳಿ ಆಗುತ್ತಿರಲಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಂದು ವಾರದಿಂದ ಮಂಗನ ಭಯದಲ್ಲಿ ನಾವು ಬದುಕುತ್ತಿದ್ದೇವೆ. ವಾರದಲ್ಲೇ 25ಜನರಿಗೆ ಮಂಗ ಕಚ್ಚಿದೆ. ನಾವು ಪಿಡಿಒ, ತಹಸೀಲ್ದಾರ್, ಅರಣ್ಯ ಅಧಿಕಾರಿಗಳಿಗೆ ದೂರು ನೀಡಿದರೂ ಕೂಡ ಮಂಗ ಹಿಡಿಯುವ ಕಾರ್ಯಾಚರಣೆಗೆ ಅವರು ಮುಂದಾಗಿಲ್ಲ. ರವಿವಾರದಂದು ತಂಡ ಬಂದು ಕಾರ್ಯಾಚರಣೆ ಮಾಡುತ್ತಿದ್ದಾರೆ. ಈಗಲಾದರೂ ಮಂಗ ಸೆರೆ ಹಿಡಿಯಲಿ.
- ತಾನಾಜಿ ಭೋಸಲೇ, ಗ್ರಾಮಸ್ಥ.
ಸುಮಾರು ಮೂರು ದಿನಗಳಿಂದ ನಾವು ಕಾರ್ಯಾಚರಣೆ ಮಾಡುತಿದ್ದೇವೆ. ಮಂಗ ಹೊಲ ಗದ್ದೆಗಳಲ್ಲಿ ಓಡಾಡುತ್ತಿರುವುದರಿಂದ ಮಂಗ ಹಿಡಿಯಲು ಆಗಲಿಲ್ಲ. ಇದೀಗ ಬೀದರ್ ನಿಂದ ತಂಡವು ಕೂಡ ಬಂದಿದ್ದು, ಕಾರ್ಯಾಚರಣೆ ಮುಂದುವರೆದಿದೆ.
- ರಾಜಶೇಖರ್ ಧೂಪದ್, ಅರಣ್ಯ ಅಧಿಕಾರಿ, ಹುಮನಾಬಾದ್.






