ಹುಲಸೂರ್: ಮೃತ ಬಾಲಕಿ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ವಿತರಣೆ

ಹುಲಸೂರ್: ಕೆಲ ದಿನಗಳ ಹಿಂದೆ ಸುರಿದ ಭಾರಿ ಮಳೆ ಹಾಗೂ ಬಿರುಗಾಳಿಯಿಂದ ಪಟ್ಟಣದ ನಿವಾಸಿ ಇಸ್ಮಾಯಿಲ್ ಅವರ ಪುತ್ರಿ ಮಹೇರಾ ಮನೆ ಮೇಲಿಂದ ಕಲ್ಲು ಬಿದ್ದು ಮೃತಪಟ್ಟಿದ್ದಳು. ಮಹೇರಾ ಅವಳ ಕುಟುಂಬಕ್ಕೆ ಗುರುವಾರ ಶಾಸಕ ಶರಣು ಸಲಗರ್ ಸೇರಿದಂತೆ ಇತರರು ಭೇಟಿ 5 ಲಕ್ಷ ರೂ. ಪರಿಹಾರ ನೀಡಿ, ಸಾಂತ್ವನ ಹೇಳಿದರು.
ಬಿರುಗಾಳಿಯ ವೇಳೆ ಮನೆಯ ಮೇಲ್ಛಾವಣಿಯ ಕಲ್ಲುಗಳು ಯುವತಿಯ ಮೈಮೇಲೆ ಬಿದ್ದ ಪರಿಣಾಮ ಆಕೆ ಮೃತಪಟ್ಟಿದ್ದಳು. ಈ ಹಿನ್ನೆಲೆಯಲ್ಲಿ ಮೃತಳ ಮನೆಗೆ ಭೇಟಿ ನೀಡಿದ ಅವರು ಕುಟುಂಬದ ಸದಸ್ಯರಿಗೆ ಧೈರ್ಯ ತುಂಬಿ ಸರ್ಕಾರದಿಂದ ಮಂಜೂರಾದ 5 ಲಕ್ಷ ರೂ. ಪರಿಹಾರದ ಚೆಕ್ನ್ನು ಹಸ್ತಾಂತರಿಸಿದರು.
ದುರಂತದಿಂದ ಕುಟುಂಬಕ್ಕೆ ಉಂಟಾದ ನೋವಿನ ಬಗ್ಗೆ ಸಂತಾಪ ವ್ಯಕ್ತಪಡಿಸಿದ ಅವರು, ಸರ್ಕಾರವು ಸಂಕಷ್ಟದ ಸಮಯದಲ್ಲಿ ಅಗತ್ಯ ನೆರವು ನೀಡಲಿದೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಶಿವಾನಂದ್ ಮೇತ್ರೆ, ಕಂದಾಯ ನಿರೀಕ್ಷಕ ಶರಣು ಪವಾಡಶೆಟ್ಟಿ, ಜಗನ್ನಾಥ್ ಡೇಟ್ನೆ , ವಿದ್ಯಾಸಾಗರ್ ಬನಸೋಡೆ ಹಾಗೂ ಸುನಿಲ್ ಕಾಡಾದಿ ಸೇರಿದಂತೆ ಇತರರು ಉಪಸ್ಥಿತರಿದ್ದರು.




