ಹುಮನಾಬಾದ್ | ರುಕ್ಕುದ್ದೀನ್ ಇಸ್ಲಾಂಪುರ್ ಸಮಾಜದ ಬಹುದೊಡ್ಡ ಆಸ್ತಿ: ರಾಜೇಂದ್ರ ಜಾಧವ್

ಹುಮನಾಬಾದ್: ಜಾತ್ಯತೀತ ಮನೋಭಾವ ಹೊಂದಿದ್ದ ಹಿರಿಯ ಸಾಹಿತಿ ರುಕ್ಕುದ್ದೀನ್ ಇಸ್ಲಾಂಪುರ್ ಅವರು ತಮ್ಮ ಬರಹಗಳ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡಿದ್ದರು. ಅವರು ಸಮಾಜದ ಬಹುದೊಡ್ಡ ಆಸ್ತಿಯಾಗಿದ್ದರು ಎಂದು ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಬೀದರ್ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಂದ್ರ ಬಿ. ಜಾಧವ್ ಹೇಳಿದರು.
ನಗರದ ಲಾಲಧರಿ ಆಶ್ರಮದಲ್ಲಿ ರವಿವಾರ ರುಕ್ಕುದ್ದೀನ್ ಇಸ್ಲಾಂಪುರ್ ಗೆಳೆಯರ ಬಳಗದ ವತಿಯಿಂದ ಆಯೋಜಿಸಿದ್ದ ‘ಸೌಹಾರ್ದತೆ ಸಂತ’ ಕವನ ಸಂಕಲನ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಾರಿಗೆ ಇಲಾಖೆಯಲ್ಲಿ ನಿರ್ವಾಹಕ, ಸಂಚಾರಿ ನಿಯಂತ್ರಕ ಹಾಗೂ ಸಂಚಾರಿ ನಿರೀಕ್ಷಕರಾಗಿ ಸೇವೆ ಸಲ್ಲಿಸಿದ್ದ ಇಸ್ಲಾಂಪುರ್ ಅವರು ನಿಷ್ಠೆ, ಶಿಸ್ತು, ಪ್ರಾಮಾಣಿಕತೆ ಮತ್ತು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಿ ಎಲ್ಲರಿಗೂ ಆದರ್ಶರಾಗಿದ್ದರು. ಮನುಷ್ಯತ್ವಕ್ಕೆ ಮಾದರಿಯಾಗಿದ್ದ ಅವರ ಬದುಕು ಸಮಾಜಕ್ಕೆ ಪ್ರೇರಣೆಯಾಗಿದೆ ಎಂದರು.
ಪುಸ್ತಕ ಪರಿಚಯ ಮಾಡಿದ ಬಸವರಾಜ ಮಯೂರ್, ಇಸ್ಲಾಂಪುರ್ ಅವರು ಬಹುತ್ವ ಭಾರತ ನಿರ್ಮಾಣಕ್ಕೆ ಅಗತ್ಯವಾದ ಮೌಲ್ಯಗಳನ್ನು ಪ್ರತಿಪಾದಿಸುವ ಸಾಹಿತ್ಯ ರಚಿಸಿದ್ದಾರೆ. ಅಪ್ಪಟ ದೇಶಪ್ರೇಮಿಯಾಗಿದ್ದ ಅವರು ಬೀದರ್ ಜಿಲ್ಲೆಯಲ್ಲಿ ಸೌಹಾರ್ದತೆಯ ಸಂತನಾಗಿ, ಸಾಮರಸ್ಯದ ಬದುಕಿಗೆ ಸಾಹಿತ್ಯದ ಮೂಲಕ ಬೆಳಕು ತೋರಿಸಿದ್ದಾರೆ ಎಂದರು.
84 ಕವಿಗಳು ತಮ್ಮ ವಿಭಿನ್ನ ಕಾವ್ಯ ಶೈಲಿಯ ಮೂಲಕ ಇಸ್ಲಾಂಪುರ್ ಅವರ ಸಾಹಿತ್ಯ, ಸಾಧನೆ ಹಾಗೂ ಸೇವೆಯನ್ನು ದಾಖಲಿಸಿರುವುದು ‘ಸೌಹಾರ್ದತೆ ಸಂತ’ ಸಂಕಲನದ ವಿಶೇಷತೆ ಎಂದು ತಿಳಿಸಿದರು.
ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಡಾ. ಸಂಜೀವಕುಮಾರ್ ಅತಿವಾಳೆ ಮಾತನಾಡಿ, ಜಾತ್ಯತೀತ ಮನೋಭಾವ ಹೊಂದಿದ್ದ ಇಸ್ಲಾಂಪುರ್ ಅವರು ಕಥೆ, ಕಾದಂಬರಿ ಹಾಗೂ ವ್ಯಕ್ತಿಚಿತ್ರಣಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಛಾಪು ಮೂಡಿಸಿದ್ದಾರೆ. ಅವರ ಸಾಹಿತ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಪ್ರಚಾರ ಮಾಡುವ ಮೂಲಕ ಅವರಿಗೆ ನಿಜವಾದ ಗೌರವ ಸಲ್ಲಿಸಬೇಕು ಎಂದರು.
ಸಂಕಲನದ ಸಂಪಾದಕ ರಮೇಶ್ ಬಿರಾದಾರ್ ಮಾತನಾಡಿ, ವೃತ್ತಿ ಜೀವನದ ಜವಾಬ್ದಾರಿಗಳೊಂದಿಗೆ ಕುಟುಂಬದ ಏಳಿಗೆಗೆ ಶ್ರಮಿಸುತ್ತಲೇ ಸಾಹಿತ್ಯ ಕ್ಷೇತ್ರದಲ್ಲೂ ಸಾಧನೆ ಮಾಡಿದ ರುಕ್ಕುದ್ದೀನ್ ಇಸ್ಲಾಂಪುರ್ ಅವರನ್ನು ಈ ಕೃತಿಯ ಮೂಲಕ ಸ್ಮರಿಸುವ ಪ್ರಯತ್ನ ಮಾಡಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಣಿಕರೆಡ್ಡಿ ಇಸ್ಲಾಂಪುರ್, ಯೋಜನಾ ನಿರ್ದೇಶಕ ಲಕ್ಷ್ಮಿಕಾಂತ್ ಅವಲಿ, ತಹಸೀಲ್ದಾರ್ ಜಗದೀಶ್ ಎಸ್. ಚೌರ್, ಪ್ರಾಂಶುಪಾಲ ಓಂಪ್ರಕಾಶ್ ದಡ್ಡೆ, ಸಾಮಾಜಿಕ ಹೋರಾಟಗಾರ ಗುರುನಾಥ್ ವಡ್ಡೆ, ಸಾಹಿತಿಗಳಾದ ಶಕೀಲ್ ಐ.ಎಸ್, ಓಂಕಾರ್ ಉಪ್ಪೆ, ದಿ. ಇಸ್ಲಾಂಪುರ್ ಅವರ ಧರ್ಮಪತ್ನಿ ಸುಹೀಲಾ ತಪಸ್ಸುಮ್, ಮಕ್ಕಳಾದ ರೋಷನ್, ನೂರ್ ಸೇರಿದಂತೆ ಹಲವು ಸಾಹಿತಿಗಳು, ಕುಟುಂಬಸ್ಥರು ಮತ್ತು ಇತರರು ಭಾಗವಹಿಸಿದ್ದರು.






