ಹುಮನಾಬಾದ್ | ಐತಿಹಾಸಿಕ ಬಾಲಾಜಿ ಮಂದಿರ ಜೀರ್ಣೋದ್ಧಾರ ಆಗಬೇಕು : ಶಾಸಕ ಡಾ.ಸಿದ್ದು ಪಾಟೀಲ್

ಹುಮನಾಬಾದ್: ಪಟ್ಟಣದ ಹೃದಯಭಾಗದಲ್ಲಿರುವ ಐತಿಹಾಸಿಕ ಬಾಲಾಜಿ ದೇವಸ್ಥಾನದ ಜೀರ್ಣೋದ್ಧಾರ ಕಾಮಗಾರಿ ಶೀಘ್ರ ಆರಂಭವಾಗಬೇಕು ಎಂದು ಮುಜರಾಯಿ ಸಚಿವರು ಹಾಗೂ ಧಾರ್ಮಿಕ ದತ್ತಿ ಆಯುಕ್ತರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೇನೆ ಎಂದು ಶಾಸಕ ಡಾ.ಸಿದ್ದು ಪಾಟೀಲ್ ತಿಳಿಸಿದ್ದಾರೆ.
ಪಟ್ಟಣದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮ ಮನವಿ ಮೇರೆಗೆ ಅಧಿಕಾರಿಗಳು ದೇವಸ್ಥಾನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾಮಗಾರಿ ಆರಂಭವಾಗಲಿದೆ ಎಂಬ ಸುದ್ದಿ ತಿಳಿದು ಎಲ್ಲರೂ ಸಂತೋಷಪಟ್ಟಿದ್ದೇವೆ. ಆದರೆ ಈಗ ಮಾಜಿ ಶಾಸಕರು ಕಾಮಗಾರಿ ತಮ್ಮ ಪ್ರಯತ್ನದಿಂದ ಮಂಜೂರಾಗಿದೆ ಎಂದು ಹೇಳಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಮಾಜಿ ಶಾಸಕರು ಈ ಹಿಂದೆ ಮುಜರಾಯಿ ಸಚಿವರಾಗಿದ್ದಾಗಲೇ ದೇವಸ್ಥಾನ ಅಭಿವೃದ್ಧಿಗೆ ಮನವಿ ಸಲ್ಲಿಸಲಾಗಿತ್ತು. ಆಗ ಆಸಕ್ತಿ ತೋರದವರು ಈಗ ಕ್ರೆಡಿಟ್ ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಟೀಕಿಸಿದರು.
“ನಾನು ಶಾಸಕನಾದ ಬಳಿಕ ದೇವಸ್ಥಾನ ಅಭಿವೃದ್ಧಿಗೆ 30 ಲಕ್ಷ ರೂ. ಅನುದಾನ ತಂದಿದ್ದೇನೆ. ಅವರು ಸಚಿವರಾಗಿದ್ದಾಗ ಇನ್ನಷ್ಟು ಅನುದಾನ ತರಬಹುದಿತ್ತು. ತಾವು ತಂದ ಆದೇಶ ಸರಿಯೋ ಅಥವಾ ಜಿಲ್ಲಾಧಿಕಾರಿಗಳ ಆದೇಶ ಸರಿಯೋ ಎಂಬುದನ್ನು ಸ್ಪಷ್ಟಪಡಿಸಬೇಕು. ಯಾರ ಆದೇಶ ತಪ್ಪಿದ್ದರೆ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಬೇಕು” ಎಂದು ಮಾಜಿ ಸಚಿವ ರಾಜಶೇಖರ ಪಾಟೀಲ್ ವಿರುದ್ಧ ವಾಗ್ದಾಳಿ ನಡೆಸಿದರು.
ದೇವಸ್ಥಾನದ ಅಭಿವೃದ್ಧಿಗೆ ತಮ್ಮಿಂದ ಸಾಧ್ಯವಾದ ಎಲ್ಲ ನೆರವು ನೀಡುವುದಾಗಿ ಹೇಳಿದ ಅವರು, ವಿಧಾನ ಪರಿಷತ್ ಸದಸ್ಯ ಭೀಮರಾವ್ ಪಾಟೀಲ್ “ಶಾಸಕರು ಎಷ್ಟು ಕೊಡುತ್ತಾರೋ ಅದಕ್ಕಿಂತ ಒಂದು ಲಕ್ಷ ಹೆಚ್ಚು ಕೊಡುತ್ತೇನೆ” ಎಂದು ಹೇಳಿರುವುದನ್ನು ಉಲ್ಲೇಖಿಸಿ, “ದೇವಸ್ಥಾನದಲ್ಲಿ ರಾಜಕೀಯ ಬೇಡ ಎನ್ನುವವರು ಇದೇನು ರಾಜಕೀಯ ಅಲ್ಲವೇ?” ಎಂದು ಪ್ರಶ್ನಿಸಿದರು.
ಮಾಜಿ ಶಾಸಕರು ಬಾಲಾಜಿ ದೇವಸ್ಥಾನ ಸಮಿತಿಯ ಸದಸ್ಯರನ್ನು ಜೈಲಿಗೆ ಹಾಕುವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ ಅವರು, ಕಾಮಗಾರಿಗೆ ಬೇರೆ ಧರ್ಮದವರು ಅಡ್ಡಿಪಡಿಸಿರಲಿಲ್ಲ. ಕಾಂಗ್ರೆಸ್ ಸರ್ಕಾರ ಯಾವಾಗಲೂ ರಾಮನ ವಿರುದ್ಧದ ಧೋರಣೆ ಹೊಂದಿದೆ ಎಂದು ಕಿಡಿಕಾರಿದರು.
ವೀರಭದ್ರೇಶ್ವರ ದೇವಸ್ಥಾನ ಕಾಮಗಾರಿ ತಾವು ನಿಲ್ಲಿಸಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಡಾ. ಸಿದ್ದು ಪಾಟೀಲ್, “ವೀರಭದ್ರೇಶ್ವರ ದೇವಸ್ಥಾನ ಯಾರೊಬ್ಬರ ಖಾಸಗಿ ಆಸ್ತಿಯಲ್ಲ. ಪ್ರೋಟೋಕಾಲ್ ಪ್ರಕಾರ ಎಲ್ಲರೂ ಸೇರಿ ಗುದ್ದಲಿ ಪೂಜೆ ಮಾಡೋಣ ಎಂದು ಹೇಳಿದ್ದೇನೆ. ಆಗಿನ ಸಚಿವ ರಾಮಲಿಂಗಾರೆಡ್ಡಿ ಬರಲು ಸಿದ್ಧರಾಗಿದ್ದರು. ಆದರೆ ಮಾಜಿ ಶಾಸಕರೇ ಅವರನ್ನು ಬರದಂತೆ ತಡೆದಿದ್ದಾರೆ” ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಅನಿಲ್ ಪಸಾರ್ಗಿ, ಮುಖಂಡರಾದ ಗಜೇಂದ್ರ ಕನಕಟಕರ್, ಶಿವರಾಜ್ ಚಿನ್ಕೇರಿ, ಗೋಪಾಲಕೃಷ್ಣ ಮೋಹಳೆ ಹಾಗೂ ನಾಗಭೂಷಣ ಸಂಗಮ್ ಉಪಸ್ಥಿತರಿದ್ದರು.






