ಹುಮನಾಬಾದ್ | ಗುರುಗಂಗಾ ಹಳ್ಳಕ್ಕೆ ಕೈಗಾರಿಕಾ ವಿಷಕಾರಿ ತ್ಯಾಜ್ಯ : ಬೃಹತ್ ಪ್ರತಿಭಟನೆಯ ಎಚ್ಚರಿಕೆ

ಹುಮನಾಬಾದ್: ಪವಿತ್ರ ಗುರುಗಂಗಾ ಹಳ್ಳಕ್ಕೆ ಅಕ್ರಮವಾಗಿ ಕೈಗಾರಿಕಾ ತ್ಯಾಜ್ಯ ಹರಿಸುತ್ತಿರುವುದನ್ನು ಖಂಡಿಸಿ ಹಾಗೂ ಮಾಲಿನ್ಯವನ್ನು ಶಾಶ್ವತವಾಗಿ ತಡೆಗಟ್ಟುವಂತೆ ಒತ್ತಾಯಿಸಿ ಶ್ರೀ ಮಾಣಿಕಪ್ರಭು ಸಂಸ್ಥಾನದ ನೇತೃತ್ವದಲ್ಲಿ ಅಪಾರ ಸಂಖ್ಯೆಯ ಸಾರ್ವಜನಿಕರು ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
ಮುಂದಿನ 72 ಗಂಟೆಯೊಳಗೆ ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಇಲಾಖೆಗಳು ಸೂಕ್ತ ಕ್ರಮ ಕೈಗೊಳ್ಳದಿದ್ದರೆ, ಮಾಲಿನ್ಯದಿಂದ ಬಾಧಿತವಾಗಿರುವ ಎಲ್ಲ ಗ್ರಾಮಗಳ ಜನರನ್ನು ಒಗ್ಗೂಡಿಸಿ ಬೃಹತ್ ಜನಾಂದೋಲನ ಹಮ್ಮಿಕೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಹುಮನಾಬಾದ್ ಕೈಗಾರಿಕಾ ಪ್ರದೇಶದ ಕೆಲವು ಕಾರ್ಖಾನೆಗಳು ಸಂಸ್ಕರಿಸದ ವಿಷಕಾರಿ ತ್ಯಾಜ್ಯವನ್ನು ಗುರುಗಂಗಾ ಹಳ್ಳಕ್ಕೆ ಹರಿಸುತ್ತಿರುವುದರಿಂದ ನೀರು ಕಪ್ಪು ಬಣ್ಣಕ್ಕೆ ತಿರುಗಿದ್ದು, ತೈಲಯುಕ್ತ ಪದರ ನಿರ್ಮಾಣವಾಗಿ ಜಲಚರಗಳು ಸಾವಿಗೀಡಾಗುತ್ತಿವೆ. ಇದರಿಂದ ಪರಿಸರದ ಜೊತೆಗೆ ಸಾರ್ವಜನಿಕರ ಆರೋಗ್ಯದ ಮೇಲೂ ಗಂಭೀರ ಪರಿಣಾಮ ಉಂಟಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾಲಿನ್ಯವು ಅಂತರ್ಜಲಕ್ಕೂ ವ್ಯಾಪಿಸಿದ್ದು, ಮಾಣಿಕನಗರ, ಹುಮನಾಬಾದ್, ಗಡವಂತಿ, ಮೊಳಕೇರಾ, ಧುಮ್ಮನಸೂರ್, ಹುಡಗಿ ಸೇರಿದಂತೆ ಸುತ್ತಮುತ್ತಲಿನ ಸಾವಿರಾರು ಜನರ ಕುಡಿಯುವ ನೀರಿನ ಮೂಲ ಕಲುಷಿತಗೊಂಡಿದೆ. ಈ ನೀರನ್ನು ಬಳಸುವುದರಿಂದ ಚರ್ಮರೋಗ, ಜೀರ್ಣಾಂಗದ ಸೋಂಕು, ಮೂತ್ರಪಿಂಡ ಹಾನಿ, ನರಮಂಡಲದ ಸಮಸ್ಯೆಗಳು ಹಾಗೂ ಕ್ಯಾನ್ಸರ್ನಂತಹ ಗಂಭೀರ ಕಾಯಿಲೆಗಳ ಅಪಾಯ ಎದುರಾಗುವ ಸಾಧ್ಯತೆ ಇದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಪ್ರತಿವರ್ಷ ಮಾಣಿಕನಗರ ಕ್ಷೇತ್ರಕ್ಕೆ ಆಗಮಿಸುವ ಲಕ್ಷಾಂತರ ಭಕ್ತರು ಗುರುಗಂಗಾ ಹಾಗೂ ವಿರಜಾ ನದಿಗಳ ಸಂಗಮದಲ್ಲಿ ಪುಣ್ಯಸ್ನಾನ ಮಾಡಿ, ಆ ನೀರನ್ನು ಪವಿತ್ರ ತೀರ್ಥವೆಂದು ಸ್ವೀಕರಿಸುತ್ತಾರೆ. ಕೈಗಾರಿಕಾ ತ್ಯಾಜ್ಯದಿಂದ ಈ ಪವಿತ್ರ ಜಲಮೂಲ ಕಲುಷಿತವಾಗಿರುವುದು ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಅವರು ತಿಳಿಸಿದ್ದಾರೆ.
ಮಾಲಿನ್ಯಕ್ಕೆ ಕಾರಣವಾದ ಕೈಗಾರಿಕೆಗಳನ್ನು ಪತ್ತೆಹಚ್ಚಿ ಪರಿಸರ ಸಂರಕ್ಷಣಾ ಕಾನೂನುಗಳಡಿ ಕಠಿಣ ಕ್ರಮ ಜರುಗಿಸಬೇಕು. ಜೊತೆಗೆ ಗುರುಗಂಗಾ ಹಳ್ಳಕ್ಕೆ ಕೈಗಾರಿಕಾ ತ್ಯಾಜ್ಯ ಸೇರುವುದನ್ನು ಶಾಶ್ವತವಾಗಿ ತಡೆಯಬೇಕು ಎಂದು ಒತ್ತಾಯಿಸಲಾಗಿದೆ.
ಮುಂದಿನ 72 ಗಂಟೆಯೊಳಗೆ ಸ್ಪಷ್ಟ ಹಾಗೂ ಪರಿಣಾಮಕಾರಿ ಕ್ರಮ ಕೈಗೊಳ್ಳದಿದ್ದರೆ ಬಾಧಿತ ಗ್ರಾಮಗಳ ಜನರನ್ನು ಒಗ್ಗೂಡಿಸಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಶ್ರೀ ಮಾಣಿಕಪ್ರಭು ಸಂಸ್ಥಾನದ ನೇತೃತ್ವದಲ್ಲಿ ಎಚ್ಚರಿಕೆ ನೀಡಲಾಗಿದೆ.
ಪ್ರತಿಭಟನೆಯಲ್ಲಿ ಮಾಣಿಕಪ್ರಭು ಸಂಸ್ಥಾನದ ಕಾರ್ಯದರ್ಶಿ ಆನಂದರಾಜ್ ಪ್ರಭು, ಶಾಸಕ ಸಿದ್ದು ಪಾಟೀಲ್ ಹಾಗೂ ವಿಧಾನ ಪರಿಷತ್ ಸದಸ್ಯ ಭೀಮರಾವ್ ಪಾಟೀಲ್ ಸೇರಿದಂತೆ ವಿವಿಧ ಗ್ರಾಮದ ಗ್ರಾಮಸ್ಥರು, ಹೋರಾಟಗಾರರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.






