ಹುಮನಾಬಾದ್ | ಬಲಿಷ್ಠ ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಮಹತ್ತರ: ರಾಜಶೇಖರ್ ಪಾಟೀಲ್

ಹುಮನಾಬಾದ್: ಬಲಿಷ್ಠ ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕರು ಸಲ್ಲಿಸುತ್ತಿರುವ ಸೇವೆ ಅತ್ಯಂತ ಮಹತ್ವದ್ದಾಗಿದೆ ಎಂದು ಮಾಜಿ ಸಚಿವ ರಾಜಶೇಖರ್ ಪಾಟೀಲ್ ಹೇಳಿದರು.
ಚಿಟಗುಪ್ಪ ಪಟ್ಟಣದ ಸಂತ ಶಿರೋಮಣಿ ಮಡಿವಾಳೇಶ್ವರ ಗವಿಯ ಕಲ್ಯಾಣ ಮಂಟಪದಲ್ಲಿ ಕಲ್ಯಾಣ ಕರ್ನಾಟಕ ಅನುದಾನ ರಹಿತ ಖಾಸಗಿ ಶಾಲಾ ಆಡಳಿತ ಮಂಡಳಿ ಸಂಘದ ವತಿಯಿಂದ ಗುರುವಾರ ಆಯೋಜಿಸಿದ್ದ 65ನೇ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಶೈಕ್ಷಣಿಕ ಕ್ಷೇತ್ರದ ಪ್ರಗತಿಗೆ ಖಾಸಗಿ ಶಾಲಾ ಶಿಕ್ಷಕರು ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ. ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಪಾತ್ರವೂ ಮಹತ್ವದ್ದಾಗಿದೆ ಎಂದು ಹೇಳಿದರು.
ಖಾಸಗಿ ಶಾಲೆಗಳು ಹಾಗೂ ಶಿಕ್ಷಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು, ಹಂತ ಹಂತವಾಗಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಅವರ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಲಾಗುವುದು ಎಂದು ರಾಜಶೇಖರ್ ಪಾಟೀಲ್ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಹಿರೇಮಠ ಸಂಸ್ಥಾನದ ಗುರುಲಿಂಗ ಶಿವಾಚಾರ್ಯ, ವಿಧಾನ ಪರಿಷತ್ ಸದಸ್ಯ ಡಾ. ಚಂದ್ರಶೇಖರ್ ಪಾಟೀಲ್, ಸುರೇಶ್ ಕುಂಬಾರ್, ಓಂಕಾರ್ ಮಠಪತಿ, ರಾಜೇಂದ್ರ ಮಣಗೀರೆ, ಗುರುನಾಥ್ ಚಿಂತಾಕಿ, ಅನಿಲಕುಮಾರ್ ಸಿಂಧೆ, ಸುರೇಂದ್ರನಾಥ್ ಹುಡಗಿಕರ್, ಸೈಯದ್ ಅಹ್ಮದ್, ಗುರುನಾಥ್ ದೇಶಮುಖ, ಧನರಾಜ್ ದೊಡ್ಡಮನಿ, ಲಿಂಗರಾಜ್ ಪಾಟೀಲ್, ಮಹಾರುದ್ರಪ್ಪ ಆಣದೂರೆ, ಚಂದ್ರಶೇಖರ್ ದಾನಪ್ಪ, ದಿಲೀಪಕುಮಾರ್ ಬಗದಲಕರ್, ಅಣ್ಣೇಪ್ಪ ವರನಾಳ್, ಓಂಕಾರ್ ತುಂಬಾ, ವಿಠಲರಾವ್ ಪಠಾಣಕರ್, ಮುಜಾಫರ್ ಪಟೇಲ್, ರಾಜದೀಪ್ ಜಾಬಾ, ಸಿದ್ದು ಪಾಟೀಲ್ ಬೆಳಕೇರಾ ಹಾಗೂ ಸಂದೀಪ್ ಶಟಗಾರ್ ಸೇರಿದಂತೆ ಅನೇಕರಿದ್ದರು.






