ಶರಣರ ತ್ಯಾಗ, ಬಲಿದಾನ ಜಗತ್ತಿಗೆ ಪರಿಚಯಿಸುವ ಹೊಣೆಗಾರಿಕೆ ನಮ್ಮೆಲ್ಲರದಾಗಿದೆ : ಡಾ.ಬಸವಲಿಂಗ ಪಟ್ಟದೇವರು

ಬೀದರ್ : ಶರಣರ ತ್ಯಾಗ ಬಲಿದಾನ ಜಗತ್ತಿಗೆ ಪರಿಚಯಿಸುವ ಹೊಣೆಗಾರಿಕೆ ನಮ್ಮೆಲ್ಲರದಾಗಿದೆ ಎಂದು ನಾಡೋಜ ಡಾ.ಬಸವಲಿಂಗ ಪಟ್ಟದೇವರು ಹೇಳಿದರು.
ಭಾಲ್ಕಿಯ ಚನ್ನಬಸವಾಶ್ರಮದಲ್ಲಿ ವಿಜಯ ದಶಮಿ ನಿಮಿತ್ಯ ಮರಣವೇ ಮಹಾನವಮಿ ಹಾಗೂ ಕಲ್ಯಾಣ ಕ್ರಾಂತಿ ವಿಜಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
12ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರು ಸರ್ವಸಮಾನತೆಯ ಕಲ್ಯಾಣ ರಾಜ್ಯ ಕಟ್ಟಿದ್ದರು. ಬಸವಣ್ಣನವರ ಕ್ರಾಂತಿಯಲ್ಲಿ ಅನೇಕ ಮಹಾಶರಣರು ಭಾಗಿಯಾಗಿದ್ದರು. ಅದರಲ್ಲಿ ಶರಣ ಹರಳಯ್ಯ ಮತ್ತು ಶರಣ ಮಧುವಯ್ಯನವರು ಬಸವ ಸ್ಥಾಪಿತ ಸಮತಾ ರಾಜ್ಯ ನಿರ್ಮಾಣಕ್ಕಾಗಿ ಬಲಿದಾನ ನೀಡಿದರು. ಲಿಂಗಾಯತ ಧರ್ಮ ಸಾವಿರಾರು ಶರಣರ ತ್ಯಾಗ ಮತ್ತು ಬಲಿದಾನದ ಮೇಲೆ ನಿಂತಿದೆ ಎಂದರು.
ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ವತಿಯಿಂದ ಸೆ.1ರಿಂದ 31 ಜಿಲ್ಲೆಗಳಲ್ಲಿ ಸಾಗಿಬಂದ ಬಸವ ಸಂಸ್ಕೃತಿ ಅಭಿಯಾನ ಸಮಾರೋಪ ಸಮಾರಂಭವು ಅ.5 ರಂದು ಬೆಂಗಳೂರಿನ ಅರಮನೆ ಮೈದಾನ ಗೇಟ್ ಸಂಖ್ಯೆ 4 ರಲ್ಲಿ ಬೆಳಿಗ್ಗೆ 10 ಗಂಟೆಗೆ ಹಮ್ಮಿಕೊಳ್ಳಲಾಗಿದೆ. ಎಲ್ಲ ಬಸವ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಮಾರಂಭ ಯಶಸ್ವಿಗೋಳಿಸಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮಕ್ಕೂ ಮುಂಚೆ ಶ್ರೀಮಠದಿಂದ ಚನ್ನಬಸವಾಶ್ರಮದವರೆಗೆ ವಚನ ಸಾಹಿತ್ಯ ಪಲ್ಲಕಿಯ ಮೆರವಣಿಗೆ ಜರುಗಿತು.
ಈ ಸಂದರ್ಭದಲ್ಲಿ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ, ಮಾಜಿ ಶಾಸಕ ಪ್ರಕಾಶ್ ಖಂಡ್ರೆ, ಭಾಲ್ಕಿ ಪುರಸಭೆ ಅಧ್ಯಕ್ಷ ಶಶಿಕಲಾ ಅಶೋಕ್, ಉಪಾಧ್ಯಕ್ಷ ವಿಜಯಕುಮಾರ್ ರಾಜಭವನ್, ಪಾರ್ವತಿ ಧೂಮ್ಮನಸೂರೆ, ಪ್ರೊ.ಶಂಭುಲಿಂಗ್ ಕಾಮಣ್ಣ, ನವಲಿಂಗ್ ಪಾಟೀಲ್, ರಾಜು ಜುಬರೆ ಹಾಗೂ ಹರಳಯ್ಯ ಸಮಾಜದ ಅಧ್ಯಕ್ಷರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.







