ಬೀದರ್ |ಕನಕದಾಸರು ಮೌಢ್ಯಕ್ಕೆ ಕೊಳ್ಳಿ ಇಟ್ಟ ವೈಚಾರಿಕ ಸಂತ : ಪಾರ್ವತಿ ಸೋನಾರೆ

ಔರಾದ್ : ಕೀರ್ತನೆಗಳ ಮೂಲಕ ವಿಶ್ವಪ್ರೇಮ ಸಾರಿದ ಕನಕದಾಸರು ಸಮಾಜದಲ್ಲಿ ಬೇರೂರಿದ ಮೌಢ್ಯಕ್ಕೆ ಕೊಳ್ಳಿ ಇಟ್ಟ ವೈಚಾರಿಕ ಸಂತರಾಗಿದ್ದಾರೆ ಎಂದು ಸಾಹಿತಿ, ಕಥೆಗಾರ್ತಿ ಪಾರ್ವತಿ ಸೋನಾರೆ ಅವರು ಅಭಿಪ್ರಾಯಪಟ್ಟರು.
ಇಂದು ಪಟ್ಟಣದ ತಹಸೀಲ್ ಕಚೇರಿಯಲ್ಲಿ ತಾಲೂಕು ಆಡಳಿತ ವತಿಯಿಂದ ಆಯೋಜಿಸಿದ ಕನಕದಾಸರ ಜಯಂತಿ ಸಮಾರಂಭದಲ್ಲಿ ಮಾತನಾಡಿದ ಪಾರ್ವತಿ ಸೋನಾರೆ, ಕನಕದಾಸರ ಕೀರ್ತನೆಗಳಲ್ಲಿ ಮಾನವೀಯತೆ, ಸರ್ವಧರ್ಮ ಸಮಾನತೆಯ ವಿಚಾರಗಳಿವೆ. ಕನಕದಾಸರು ಕನ್ನಡ ನಾಡು ಕಂಡ ಶ್ರೇಷ್ಠ ಚಿಂತಕರಾಗಿದ್ದಾರೆ. ಜಾತಿ ವ್ಯವಸ್ಥೆ, ಶೋಷಣೆ, ಅಸಮಾನತೆಯ ವಿರುದ್ಧ ಬಂಡಾಯವೆದ್ದ ಕನಕದಾಸರು ಅನಿಷ್ಠ ಪದ್ದತಿ, ಆಚರಣೆಗಳಿಂದ ಕೂಡಿದ ಭಕ್ತಿಯು ಮನುಕುಲಕ್ಕೆ ಮಾರಕ ಎಂಬುದನ್ನು ಎಚ್ಚರಿಸಿದ್ದರು ಎಂದರು.
ಸಾಹಿತ್ಯದ ದೃಷ್ಟಿಯಿಂದ ನೋಡಿದರೂ ಕನಕದಾಸ ಎಲ್ಲರಿಗಿಂತ ಮುಂಚೂಣಿಯಲ್ಲಿದ್ದಂತೆ ಕಾಣುತ್ತದೆ. ಕೀರ್ತನೆ, ಸುಳಾದಿ, ಉಗಾಭೋಗಗಳು, ಮುಂಡಿಗೆಗಳು, ಕಾವ್ಯ ಕೃತಿಗಳ ಮೂಲಕ ಕನ್ನಡವನ್ನು ಉಚ್ಛ್ರಾಯ ಸ್ಥಿತಿಗೆ ಕೊಂಡೊಯ್ದಿದ್ದಾರೆ ಎಂದು ತಿಳಿಸಿದರು.
ತಹಶೀಲ್ದಾರ್ ಮಹೇಶ್ ಪಾಟೀಲ್ ಅವರು ಮಾತನಾಡಿ, ಕನ್ನಡ ಸಾಹಿತ್ಯದ ತೂಕ ಹೆಚ್ಚಿಸಿದ ಕನಕದಾಸರು ಬರೆದ ರಾಮಧಾನ್ಯ ಚರಿತೆ ಕೃತಿ ಮೇಲು ಕೀಳು ಎಂಬ ಮನಸ್ಥಿತಿಗೆ ಉತ್ತರಿಸಿದಂತಿದೆ. ಶ್ರಮಿಕ ವರ್ಗದವರೇ ದೇವರಿಗೆ ಪ್ರೀಯವಾಗಿರುತ್ತಾರೆ. ಬದುಕಿನಲ್ಲಿ ಗಟ್ಟಿಯಾಗಿರುತ್ತಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಸರುಬಾಯಿ ಘುಳೆ, ಖಜಾನೆ ಅಧಿಕಾರಿ ಮಾಣಿಕ ನೇಳಗಿ, ಬಿಇಒ ರಂಗೇಶ್, ಶಿವಕುಮಾರ್ ಘಾಟೆ, ಪಟ್ಟಣ ಪಂಚಾಯತ್ ಸದಸ್ಯ ಗುಂಡಪ್ಪ ಮುದಾಳೆ, ಕಸಾಪ ಅಧ್ಯಕ್ಷ ಬಿ.ಎಂ ಅಮರವಾಡಿ, ರಾಮಣ್ಣ ವಡೆಯರ್, ಡಾ. ವೈಜಿನಾಥ್ ಬುಟ್ಟೆ, ಶಿವಕುಮಾರ್ ಮೇತ್ರೆ, ಶಿವರಾಜ್ ಅಲಮಾಜೆ, ಶಿವಾಜಿರಾವ್ ಪಾಮುದಾಳೆ, ಶ್ರಾವಣಕುಮಾರ್ ಭಂಡೆ, ರಾಜಕುಮಾರ್ ಮುದಾಳೆ, ಅರ್ಜುನ್ ಭಂಗೆ, ಸಂತೋಷ್ ಮುದಾಳೆ, ಕೃಷ್ಣ ಸಾಗಾವೆ, ಬೀರಪ್ಪ ರಕ್ಷಾಳೆ ಹಾಗೂ ಧನರಾಜ್ ಮಾನೆ ಸೇರಿದಂತೆ ಇತರರು ಉಪಸ್ಥಿತರಿದ್ದರು.







