ಕನ್ನೇರಿ ಸ್ವಾಮಿಯ ಮನ ಪರಿವರ್ತನೆಯಾಗಲಿ : ಬೆಲ್ದಾಳ ಶರಣರು

ಬೀದರ್ : ಡಾ. ಚನ್ನಬಸವಾನಂದ ಸ್ವಾಮೀಜಿಯವರು 'ತಾಲಿಬಾನಿ, ಕನ್ಹೇರಿ ಶ್ರೀ ಮತ್ತು ಲಿಂಗಾಯತ ಧರ್ಮ' ಎನ್ನುವ ಕೃತಿಯಲ್ಲಿ ವಚನಗಳ ಆಧಾರದ ಮೇಲೆ ಕನ್ನೇರಿ ಶ್ರೀಗಳಿಗೆ ಉತ್ತರ ನೀಡಿದ್ದಾರೆ. ಈ ಪುಸ್ತಕ ಓದಿ ಕನ್ನೇರಿ ಶ್ರೀಗಳ ಮನ ಪರಿವರ್ತನೆಯಾಗಲಿ ಎಂದು ಬಸವಕಲ್ಯಾಣದ ಬಸವ ಮಹಾಮನೆಯ ಡಾ. ಸಿದ್ಧರಾಮ ಬೆಲ್ದಾಳ ಶರಣರು ತಿಳಿಸಿದರು.
ನಗರದ ಬಸವ ಮಂಟಪದಲ್ಲಿ ರಾಷ್ಟ್ರೀಯ ಬಸವದಳ, ಲಿಂಗಾಯತ ಸಮಾಜ ಮತ್ತು ಕ್ರಾಂತಿ ಗಂಗೋತ್ರಿ ಅಕ್ಕನಾಗಲಾಂಬಿಕಾ ಮಹಿಳಾ ಗಣದ ವತಿಯಿಂದ ರವಿವಾರ ಆಯೋಜಿಸಿದ 'ತಾಲಿಬಾನಿ, ಕನ್ಹೇರಿ ಶ್ರೀ ಮತ್ತು ಲಿಂಗಾಯತ ಧರ್ಮ' ಪುಸ್ತಕ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.
ಕನ್ಹೇರಿ ಶ್ರೀಗಳು ಹಲವು ಕಡೆ ಮಾಡಿದ ಭಾಷಣಗಳಿಗೆ ಉತ್ತರದ ರೂಪದಲ್ಲಿ ವಚನಗಳನ್ನು ಆಧಾರವಾಗಿಟ್ಟುಕೊಂಡು ಈ ಪುಸ್ತಕ ರಚಿಸಲಾಗಿದೆ. ಲಿಂಗಾಯತ ಧರ್ಮ ಸ್ಥಾಪಕರು ಗುರು ಬಸವಣ್ಣ, ವಚನ ಸಾಹಿತ್ಯ ಧರ್ಮಗ್ರಂಥ, ಕೂಡಲ ಸಂಗಮ ಧರ್ಮರ್ಕ್ಷೇತ್ರ ಎಂಬುದು ಅವರು ಅರ್ಥಮಾಡಿಕೊಳ್ಳಬೇಕು ಎಂದರು.
ಅಖಿಲ ಭಾರತ ಲಿಂಗಾಯತ ಸಮನ್ವಯ ಸಮಿತಿಯ ರಾಜ್ಯ ಸಂಚಾಲಕ ಶ್ರೀಕಾಂತ್ ಸ್ವಾಮಿ ಅವರು ಮಾತನಾಡಿ, ಕಿರಿದಾದ ಕೃತಿಯಲ್ಲಿ ಹಿರಿದಾದ ಸಂದೇಶವನ್ನು ಮನಮುಟ್ಟುವಂತೆ ಪೂಜ್ಯ ಚನ್ನಬಸವಾನಂದ ಶ್ರೀಗಳು ಈ ಪುಸ್ತಕದಲ್ಲಿ ನೀಡಿದ್ದಾರೆ. ಕನ್ಹೇರಿ ಶ್ರೀಗಳ ಪ್ರತಿಯೊಂದು ಆಪಾದನೆಗೆ ಕೃತಿಯಲ್ಲಿ ಪ್ರತ್ಯುತ್ತರ ನೀಡಿದ್ದಾರೆ. ಬಸವಣ್ಣ ಹಿಂದೂ ಧರ್ಮದ ಕೊಳಕು ತೊಳೆದಿದ್ದಾರೆ. ವೇದ ಉಪನಿಷತ್ ಒಳಗಿರುವ ಅಂಶಗಳನ್ನೇ ಬಸವಾದಿ ಶರಣರು ಹೇಳಿದ್ದಾರೆ ಎಂದು ಕನ್ಹೇರಿ ಶ್ರೀಗಳು ಸುಳ್ಳು ಹೇಳಿದ್ದಕ್ಕೆ ಈ ಕೃತಿಯಲ್ಲಿ ಉತ್ತರ ನೀಡಲಾಗಿದೆ. ಪ್ರತಿಯೊಬ್ಬರೂ ಈ ಪುಸ್ತಕ ಖರೀದಿಸಿ ಓದಬೇಕು ಎಂದು ತಿಳಿಸಿದರು.
ಕೃತಿ ಲೇಖಕರಾದ ಜಗದ್ಗುರು ಡಾ. ಚನ್ನಬಸವಾನಂದ್ ಸ್ವಾಮೀಜಿ ಅವರು ಮಾತನಾಡಿ, ಕನ್ಹೇರಿಯ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಮಠ ಶರಣ ಪರಂಪರೆಯ ಮಠ. ಈ ಪೀಠದ ಮೇಲೆ ಕುಳಿತ ಕನ್ಹೇರಿ ಶ್ರೀಗಳು ಚಾತುರ್ವರ್ಣ ಪದ್ಧತಿ ಪಾಲಿಸುವ ವೈದಿಕ ಸಂಸ್ಕೃತಿ ಕಡೆಗೆ ವಾಲಿ, ಬಸವ ಭಕ್ತರಿಗೆ ಅಸಂವಿಧಾನಿಕವಾಗಿ ನಿಂದಿಸುತ್ತಿರುವುದು ನಿಜಕ್ಕೂ ಶೋಚನೀಯ. ಕನ್ಹೇರಿ ಶ್ರೀಗಳು ವಚನ ಸಾಹಿತ್ಯ ಅಧ್ಯಯನ ಮಾಡಲಿ ಎಂದರು.
ಈ ವೇಳೆ ಮೆಟ್ರಿಕ್ ಪರೀಕ್ಷೆಯಲ್ಲಿ ಶೇ.99.5 ರಷ್ಟು ಅಂಕ ಪಡೆದ ನಾಗೂರ್ (ಎಂ) ಗ್ರಾಮದ ದಿವ್ಯ ಗೆ ಸತ್ಕಾರ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತೆ ಸತ್ಯಾದೇವಿ, 371(ಜೆ)ಕಲಂ ಸಮಗ್ರ ಅನುಸ್ಥಾನ ಹೋರಾಟ ಸಮಿತಿಯ ಅಧ್ಯಕ್ಷ ಅಶೋಕಕುಮಾರ್ ನಾಗುರೆ, ಶಿವರಾಜ್ ಪಾಟೀಲ್ ಅತಿವಾಳ್, ಶಿವಶರಣಪ್ಪ ಪಾಟೀಲ್ ಹಾರೂರಗೇರಿ, ಕಾಶೀನಾಥ್ ಪಾಟೀಲ್, ಗುರುನಾಥ್ ನಿಡಗುಂದೆ ಹಾಗೂ ಮಲ್ಲಪ್ಪ ಗೌಡ ಸೇರಿದಂತೆ ಇತರರು ಉಪಸ್ಥಿತರಿದ್ದರು.






