ಬೀದರ್ | ಗಡಿ ಭಾಗದ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಸರಕಾರ ವಿಶೇಷ ಸೌಲಭ್ಯ ಕಲ್ಪಿಸಲಿ : ಕುಪೇಂದ್ರ ಎಸ್. ಹೊಸಮನಿ

ಬೀದರ್ : ಗಡಿ ಭಾಗದಲ್ಲಿ ಕನ್ನಡ ಮಾಧ್ಯಮದಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಸರಕಾರ ವಿಶೇಷ ಸೌಲಭ್ಯ ಕಲ್ಪಿಸಬೇಕು ಎಂದು ಕಲ್ಯಾಣ ಕರ್ನಾಟಕ ಅಶ್ವಿನಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕುಪೇಂದ್ರ ಎಸ್. ಹೊಸಮನಿ ತಿಳಿಸಿದರು.
ಬೀದರ್ ತಾಲೂಕಿನ ತೆಲಂಗಾಣದ ಗಡಿಯಲ್ಲಿರುವ ಬರೂರ್ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲ್ಯಾಣ ಕರ್ನಾಟಕ ಅಶ್ವಿನಿ ಶಿಕ್ಷಣ ಸಂಸ್ಥೆಯ ವತಿಯಿಂದ ಕನ್ನಡ ಚಿಂತನೆ–ಕನ್ನಡ ಭಾಷಾ ಜಾಗೃತಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬರೂರ್ ಗ್ರಾಮವು ಇತಿಹಾಸಪೂರ್ಣ ಗಡಿ ಪ್ರದೇಶವಾದ್ದರಿಂದ ಇಲ್ಲಿ ಕನ್ನಡ ಸಂಶೋಧನಾ ಕೇಂದ್ರಗಳು ಸ್ಥಾಪನೆಗೊಳ್ಳಬೇಕು. ಹಾಗೆಯೇ ಈ ಭಾಗದಲ್ಲಿ ಕನ್ನಡ ಮಾಧ್ಯಮದಲ್ಲಿ ಅಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ವಿಶೇಷವಾದ ಸೌಲಭ್ಯಗಳು ಒದಗಿಸಬೇಕು ಎಂದು ಹೇಳಿದರು.
ಶಾಲಾ ಉಸ್ತುವಾರಿ ಸಮಿತಿಯ ಅಧ್ಯಕ್ಷ ಕೃಷ್ಣ ಮಾತನಾಡಿ, ಬರೂರ್ ಗ್ರಾಮವು ತೆಲಂಗಾಣ ಗಡಿಯಲ್ಲಿರುವುದರಿಂದ ಸರಕಾರ ಶಾಲೆಗೆ ಹೆಚ್ಚಿನ ಸೌಲಭ್ಯ, ಪ್ರೋತ್ಸಾಹ ಹಾಗೂ ಕನ್ನಡ ಪಠ್ಯಕ್ರಮ ಬಲವರ್ಧನೆಗೆ ಆದ್ಯತೆ ನೀಡಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಉಮಾಕಾಂತ್ ಶಿವಪೂಜೆ, ಕನ್ನಡ ನಾಡಿನ ವೈಶಿಷ್ಟ್ಯವಾದ ಸಾಹಿತ್ಯ, ಕಲೆ, ಸಂಸ್ಕೃತಿ ಹಾಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ವೀರರ ಕೊಡುಗೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ಪರಿಚಯ ಮಾಡಿಕೊಟ್ಟರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಗೌಸೋದ್ಧಿನ್, ಕನ್ನಡ ಭಾಷಾ ಹೋರಾಟಗಳು, ಭಾಷಾ ಅಸ್ತಿತ್ವ ಮತ್ತು ಸಂರಕ್ಷಣೆ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಶಿಕ್ಷಕ ಜಗನಾಥ್ ಕುತ್ತಾ, ಶಿಕ್ಷಕಿಯರಾದ ಶಿಲ್ಪ, ಸಂಧ್ಯಾಕುಮಾರಿ, ಸುವರ್ಣ, ಮಂಗಳಾ ಸೇರಿದಂತೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.







