ಹುಮನಾಬಾದ್ ಕೈಗಾರಿಕಾ ಪ್ರದೇಶದಲ್ಲಿ ಲೋಕಾಯುಕ್ತ ದಿಢೀರ್ ದಾಳಿ; ಮಾಲಿನ್ಯ ಉಲ್ಲಂಘನೆ ಪತ್ತೆ

ಹುಮನಾಬಾದ್: ಪಟ್ಟಣದ ಹೊರವಲಯದಲ್ಲಿರುವ ಕೈಗಾರಿಕಾ ಪ್ರದೇಶದ ಕಾರ್ಖಾನೆಗಳಿಂದ ವಾಯು ಮತ್ತು ಜಲ ಮಾಲಿನ್ಯ ಉಂಟಾಗುತ್ತಿದೆ ಎಂಬ ಸಾರ್ವಜನಿಕರ ದೂರುಗಳ ಹಿನ್ನೆಲೆಯಲ್ಲಿ ಕಲಬುರಗಿ ಲೋಕಾಯುಕ್ತ ಎಸ್ಪಿ ಸಿದ್ದರಾಜು ಎಸ್. ನೇತೃತ್ವದ ತಂಡ ಶುಕ್ರವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಕಾರ್ಮಿಕ ಇಲಾಖೆ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ತಹಸೀಲ್ದಾರ್, ಪುರಸಭೆ ಮುಖ್ಯಾಧಿಕಾರಿ ಹಾಗೂ ಡಿವೈಎಸ್ಪಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿದ ತಂಡ, ಆರ್. ಕೆಮಿಕಲ್, ಸತ್ಯದೀಪ ಫಾರ್ಮ, ವಿರೂಪಾಕ್ಷ ಆರ್ಗಾನಿಕ್ಸ್, ಕರ್ನಾಟಕ ಪೇಪರ್, ರೆಡಿಸನ್ ಲ್ಯಾಬ್ ಲಿಮಿಟೆಡ್, ಸ್ಪ್ರಿಂಗ್ ಐಸ್ ಕಂಪನಿ, ಲಕ್ಷ್ಮಿ ದುರ್ಗಾ ಡ್ರಗ್ಸ್ ಹಾಗೂ ಕೋರೆ ಕೆಮಿಕಲ್ ಸೇರಿದಂತೆ ಹಲವು ಕಾರ್ಖಾನೆಗಳಿಗೆ ಭೇಟಿ ನೀಡಿ ದಾಖಲೆಗಳು ಹಾಗೂ ಕಾರ್ಯವೈಖರಿಯನ್ನು ಪರಿಶೀಲಿಸಿತು.
ಪರಿಶೀಲನೆ ಬಳಿಕ ಮಾತನಾಡಿದ ಲೋಕಾಯುಕ್ತ ಎಸ್ಪಿ ಸಿದ್ದರಾಜು ಎಸ್., ಮಾಲಿನ್ಯದ ಪ್ರಮಾಣದ ಆಧಾರದ ಮೇಲೆ ಕೈಗಾರಿಕೆಗಳನ್ನು ವರ್ಗೀಕರಿಸಲಾಗಿದ್ದು, 18 ಕಾರ್ಖಾನೆಗಳು ‘ರೆಡ್ ಲಿಸ್ಟ್’, 24 ಕಾರ್ಖಾನೆಗಳು ‘ಆರೆಂಜ್ ಲಿಸ್ಟ್’ ಹಾಗೂ ಐದು ಕಾರ್ಖಾನೆಗಳು ಮಾತ್ರ ‘ಗ್ರೀನ್ ಲಿಸ್ಟ್’ನಲ್ಲಿ ಇರುವುದಾಗಿ ತಿಳಿಸಿದರು.
ರೆಡಿಸನ್ ಲ್ಯಾಬ್ ಸಮೀಪದ ಬಾವಿ, ಸ್ಪ್ರಿಂಗ್ ಐಸ್ ಕಂಪನಿಯ ಬೋರ್ವೆಲ್ ಹಾಗೂ ಮತ್ತೊಂದು ಸ್ಥಳದಿಂದ ನೀರಿನ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಬಂದ ಬಳಿಕ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ಪರಿಶೀಲನೆ ವೇಳೆ ಎರಡು ಕಾರ್ಖಾನೆಗಳು ಪರಿಸರ ನಿಯಮಗಳನ್ನು ಉಲ್ಲಂಘಿಸಿ ತ್ಯಾಜ್ಯ ವಿಲೇವಾರಿ ಮಾಡುತ್ತಿರುವುದು ಹಾಗೂ ಕೆಲವು ಕಾರ್ಖಾನೆಗಳಿಂದ ಅತಿಯಾದ ಹೊಗೆ ಹೊರಬರುತ್ತಿರುವುದು ಗಮನಕ್ಕೆ ಬಂದಿದೆ. ಮಾಣಿಕ್ ನಗರ ಗ್ರಾಮದ ಹಳ್ಳಕ್ಕೆ ರಾಸಾಯನಿಕ ತ್ಯಾಜ್ಯ ಸೇರುತ್ತಿರುವುದು ಕೂಡ ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ತಿಳಿಸಿದರು.
ವಿಶೇಷವಾಗಿ ಆರ್.ಕೆ.ಎಂ. ಪ್ರೈವೇಟ್ ಲಿಮಿಟೆಡ್ ಹಾಗೂ ಸತ್ಯದೀಪ್ತ ಕಂಪನಿ ಸರ್ಕಾರದ ಪರಿಸರ ನಿಯಮಗಳನ್ನು ಉಲ್ಲಂಘಿಸಿ ಕಾರ್ಯನಿರ್ವಹಿಸುತ್ತಿರುವುದು ಬೆಳಕಿಗೆ ಬಂದಿದ್ದು, ಸ್ಥಳ ಪರಿಶೀಲನೆ ಆಧಾರಿತ ಸಮಗ್ರ ವರದಿಯನ್ನು ಉಪ ಲೋಕಾಯುಕ್ತರಿಗೆ ಸಲ್ಲಿಸಲಾಗುವುದು. ಜುಲೈ 27ರಂದು ನಡೆಯಲಿರುವ ವಿಚಾರಣೆಗೆ ಮುನ್ನ ವರದಿ ನೀಡಲಾಗುತ್ತಿದ್ದು, ಅದರ ಆಧಾರದ ಮೇಲೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಲೋಕಾಯುಕ್ತ ಎಸ್ಪಿ ಸಿದ್ದರಾಜು ಎಸ್. ತಿಳಿಸಿದರು.






