ಬಿಎಸ್ಎಸ್ಕೆ ಉಳಿವಿಗಾಗಿ ಸೆ.16ರಂದು ಹುಮನಾಬಾದ್ನಲ್ಲಿ ಬೃಹತ್ ಹೋರಾಟ : ಶಾಸಕ ಡಾ.ಸಿದ್ದು ಪಾಟೀಲ್

ಹುಮನಾಬಾದ್: ತಾಲೂಕಿನ ರೈತರ ಜೀವನಾಡಿ, ಸಾವಿರಾರು ಷೇರುದಾರರು ಹಾಗೂ ಕಾರ್ಮಿಕರ ಜೀವನಾಧಾರವಾಗಿರುವ ಬೀದರ್ ಸಹಕಾರಿ ಸಕ್ಕರೆ ಕಾರ್ಖಾನೆ (ಬಿಎಸ್ಎಸ್ಕೆ) ಉಳಿವಿಗಾಗಿ ಸೆ.16ರಂದು ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಡಾ.ಸಿದ್ದು ಪಾಟೀಲ್ ತಿಳಿಸಿದ್ದಾರೆ.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿಸಿಸಿ ಬ್ಯಾಂಕ್ ಆವರಣದಲ್ಲಿ ನಡೆಯುತ್ತಿರುವ ಕಾರ್ಖಾನೆ ಹರಾಜು ಪ್ರಕ್ರಿಯೆ ವಿರುದ್ಧ ಈಗಾಗಲೇ ಪ್ರತಿಭಟನೆ ನಡೆಸಲಾಗಿದೆ. ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿ ಹೇಳಿದ್ದರೂ ಇದುವರೆಗೂ ಯಾವುದೇ ಸ್ಪಷ್ಟ ಮಾಹಿತಿ ನೀಡಿಲ್ಲ. ಹೀಗಾಗಿ ಬಿಎಸ್ಎಸ್ಕೆ ಪುನರಾರಂಭಕ್ಕೆ ಆಗ್ರಹಿಸಿ ಹೋರಾಟ ಅನಿವಾರ್ಯವಾಗಿದೆ ಎಂದು ಹೇಳಿದರು.
ಸೆಪ್ಟೆಂಬರ್ 16ರಂದು ಬೆಳಿಗ್ಗೆ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪಾದಯಾತ್ರೆಗೆ ಚಾಲನೆ ನೀಡಲಾಗುವುದು. ಪಾದಯಾತ್ರೆಯಲ್ಲಿ 5 ರಿಂದ 6 ಸಾವಿರ ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದು ತಿಳಿಸಿದರು.
ಇದು ಯಾವುದೇ ರಾಜಕೀಯ ಹೋರಾಟವಲ್ಲ. ಕಾರ್ಖಾನೆ ಪುನರಾರಂಭವಾಗಬೇಕು ಎಂಬುದೇ ನಮ್ಮ ಏಕೈಕ ಉದ್ದೇಶ. ಯಾವುದೇ ಪಕ್ಷದ ಮುಖಂಡರು ಅಥವಾ ಜನಪ್ರತಿನಿಧಿಗಳು ಭಾಗವಹಿಸಿದರೂ ಸ್ವಾಗತವಿದೆ. ಇದು ಸರ್ಕಾರ ಮತ್ತು ಡಿಸಿಸಿ ಬ್ಯಾಂಕ್ ವಿರುದ್ಧದ ಹೋರಾಟವಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವರ ನಿರ್ಲಕ್ಷ್ಯದಿಂದಲೇ ಕಾರ್ಖಾನೆ ಆರಂಭವಾಗುತ್ತಿಲ್ಲ ಎಂದು ಆರೋಪಿಸಿದರು.
ಸರ್ಕಾರ ಕಾರ್ಖಾನೆಯ ಸಾಲ ಮನ್ನಾ ಮಾಡಬೇಕು. ಡಿಸಿಸಿ ಮತ್ತು ಅಪೆಕ್ಸ್ ಬ್ಯಾಂಕ್ಗಳ ಬಡ್ಡಿ ಮನ್ನಾ ಮಾಡಬೇಕು. ಎಸ್ಬಿಐ ಬ್ಯಾಂಕ್ನ ಅಸಲು ಹಾಗೂ ಬಡ್ಡಿಯನ್ನೂ ಮನ್ನಾ ಮಾಡಿ ಬಿಎಸ್ಎಸ್ಕೆ ಪುನರಾರಂಭಕ್ಕೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಡಾ. ಸಿದ್ದು ಪಾಟೀಲ್ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಅನಿಲ್ ಪಸಾರ್ಗಿ, ಮುಖಂಡರಾದ ಗಜೇಂದ್ರ ಕನಕಟಕರ್, ಶಿವರಾಜ್ ಚಿನ್ಕೇರಿ, ಗೋಪಾಲಕೃಷ್ಣ ಮೋಹಳೆ, ನಾಗಭೂಷಣ ಸಂಗಮ್ ಹಾಗೂ ಇತರ ರೈತ ಮುಖಂಡರು ಉಪಸ್ಥಿತರಿದ್ದರು.






