ಬೀದರ್: ಆರೆಸ್ಸೆಸ್ ಪಥ ಸಂಚಲನದಲ್ಲಿ ಭಾಗವಹಿಸಿದ ಶಿಕ್ಷಕರಿಗೆ ನೋಟಿಸ್ ಜಾರಿ

ಬೀದರ್: ಔರಾದ್(ಬಿ) ತಾಲೂಕಿನಲ್ಲಿ ಅ. 7 ಮತ್ತು 13 ರಂದು ನಡೆದ ಆರೆಸ್ಸೆಸ್ ಪಥ ಸಂಚಲನದಲ್ಲಿ ಭಾಗವಹಿಸಿದ್ದ ನಾಲ್ವರು ಶಿಕ್ಷಕರಿಗೆ ಕಾರಣ ಕೇಳಿ ಔರಾದ್ (ಬಿ) ಕ್ಷೇತ್ರ ಶಿಕ್ಷಣಾಧಿಕಾರಿ ನೋಟಿಸ್ ಜಾರಿ ಮಾಡಿದ್ದಾರೆ.
ದಲಿತ ಸೇನೆ ವತಿಯಿಂದ ಔರಾದ (ಬಿ) ನ ಆದರ್ಶ ವಿದ್ಯಾಲಯದ ಸಹ ಶಿಕ್ಷಕ ಮಹಾದೇವ್ ಚಿಟಗಿರೆ, BIERP ಬಿ.ಆರ್.ಸಿ ಕಛೇರಿಯ ಸಿಬ್ಬಂದಿ ಶಾಲಿವಾನ್ ಉದಗಿರಿ ಹಾಗೂ ಎಕಂಬಾ ಗ್ರಾಮದ ಸಿ ಆರ್ ಪಿ ಪ್ರಕಾಶ್ ಬರದಾಪೂರೆ ಅವರ ವಿರುದ್ಧ ದೂರು ನೀಡಲಾಗಿತ್ತು. ಹಾಗೆಯೇ ಬಹುಜನ ಸೇವಾ ಸಮಿತಿ ವತಿಯಿಂದ ಬಳತ್ (ಕೆ) ಸ.ಹಿ.ಪ್ರಾ.ಶಾಲೆಯ ಸಹ ಶಿಕ್ಷಕ ಸತೀಶ್ ಮಾನಕಾರಿ ಅವರ ವಿರುದ್ಧ ದೂರು ನೀಡಲಾಗಿತ್ತು. ಇದೀಗ ಈ ನಾಲ್ಕು ಜನ ಶಿಕ್ಷಕರಿಗೆ ಶಿಕ್ಷಣ ಇಲಾಖೆ ನೋಟಿಸ್ ಜಾರಿಗೊಳಿಸಿದೆ.
ಆರೆಸ್ಸೆಸ್ ಪಥ ಸಂಚಲನದಲ್ಲಿ ತಾವು ಭಾಗಿಯಾಗಿರುವ ಕುರಿತು ವಿಡಿಯೋ ಮತ್ತು ಭಾವಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿದಿವೆ. ತಾವು ಸರಕಾರಿ ನೌಕರರು ಆಗಿರುವದರಿಂದ ಯಾವುದೇ ಪ್ರಕಾರ ರಾಜಕೀಯ ಮತ್ತು ಧಾರ್ಮಿಕ ಚಟುವಟಿಕೆಯಲ್ಲಿ ಭಾಗವಹಿಸುವಂತಿಲ್ಲ. ತಾವು ಆರೆಸ್ಸೆಸ್ ಪಥ ಸಂಚಲನದಲ್ಲಿ ಭಾಗವಹಿಸಿ ಸರಕಾರದ ಸೇವಾ ನಿಬಂಧನೆಗೆ ವಿರುದ್ಧವಾಗಿ ಕರ್ತವ್ಯ ಮಾಡಿರುವಿರಿ ಎಂದು ನೋಟಿಸ್ ನಲ್ಲಿ ತಿಳಿಸಲಾಗಿದೆ.
ನೋಟಿಸ್ಗೆ ಲಿಖಿತ ಹೇಳಿಕೆಯನ್ನು ತಾವು ಖುದ್ದಾಗಿ ಬಂದು ಈ ಕಛೇರಿಗೆ ಸಲ್ಲಿಸಬೇಕು. ಇಲ್ಲವಾದಲ್ಲಿ ಏಕಪಕ್ಷಿಯವಾಗಿ ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು-1957ರ ಅನ್ವಯ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ನೋಟಿಸ್ ಅಲ್ಲಿ ತಿಳಿಸಲಾಗಿದೆ.







