Bidar | ಪೊಲೀಸ್ ಕಸ್ಟಡಿಯಿಂದ ಪರಾರಿಯಾಗಿದ್ದ ಕೊಲೆ ಪ್ರಕರಣದ ಆರೋಪಿಯ ಬಂಧನ

ಆರೋಪಿ ಕೈಲಾಸ್ ಬಿರಾದರ್
ಬೀದರ್: ಕೊಡಲಿಯಿಂದ ಕೊಚ್ಚಿ ಅನಿತಾ (32) ಎಂಬ ಮಹಿಳೆಯನ್ನು ಭೀಕರವಾಗಿ ಹತ್ಯೆ ಮಾಡಿದ ಘಟನೆ ಭಾಲ್ಕಿ ತಾಲೂಕಿನ ಹಾಳಗೋರ್ಟಾ ಗ್ರಾಮದಲ್ಲಿ ಶನಿವಾರ (ಜು.11) ಬೆಳಿಗ್ಗೆ ನಡೆದಿತ್ತು. ಘಟನೆ ಬಳಿಕ ಆರೋಪಿಯಾದ ಕೈಲಾಸ್ ಬಿರಾದರ್ ಎಂಬಾತನನ್ನು ಬಂಧನ ಕೂಡ ಮಾಡಲಾಗಿತ್ತು. ಆದರೆ, ಕಸ್ಟಡಿಯಲ್ಲಿದ್ದ ಆರೋಪಿಯು ಶನಿವಾರ ನಸುಕಿನ ಜಾವದಲ್ಲಿ ಪರಾರಿಯಾಗಿದ್ದನು. ನಂತರದಲ್ಲಿ ಆತನನ್ನು ಶನಿವಾರ ಸಾಯಂಕಾಲ ಪೊಲೀಸರು ಬಂಧಿಸಿದ್ದಾರೆ.
ಘಟನೆಯ ವಿವರ: ಅನಿತಾ ಶನಿವಾರ ಬೆಳಿಗ್ಗೆ ಮನೆಯಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ಆರೋಪಿ ಕೈಲಾಸ್ ಮನೆಗೆ ನುಗ್ಗಿ ಮಹಿಳೆಯನ್ನು ಕೊಡಲಿಯಿಂದ ಕೊಚ್ಚಿ ಕೊಲೆಗೈದಿದ್ದನು. ಪ್ರತಿ ವರ್ಷದಂತೆ ಈ ವರ್ಷ ಜಮೀನು ಕೊಡದಿದ್ದಕ್ಕೆ ಕೊಲೆ ಮಾಡಲಾಗಿದೆ ಎಂದು ಶಂಕಿಸಲಾಗಿತ್ತು. ಘಟನೆ ನಂತರದಲ್ಲಿ ಖಟಕಚಿಂಚೋಳಿ ಪೊಲೀಸ್ ಠಾಣೆಯ ಪೊಲೀಸರು ಆರೋಪಿಯನ್ನು ಬಂಧಿಸಿ, ಪೊಲೀಸ್ ಠಾಣೆಯ ಕಸ್ಟಡಿಯಲ್ಲಿ ಇರಿಸಿದ್ದರು.
ಆದರೆ, ಬಂಧಿಸಿದ ದಿನವೇ ನಸುಕಿನ ಜಾವದಲ್ಲಿ ಪೊಲೀಸ್ ಸಿಬ್ಬಂದಿ ಮಲಗಿದ್ದಾಗ ಆರೋಪಿ ಕೈಲಾಸ್ ಬಿರಾದಾರ್ ಕಸ್ಟಡಿಯಿಂದಲೇ ಪೊಲೀಸರ ಕಣ್ತಪ್ಪಿಸಿ ಪರಾರಿಯಾಗಿದ್ದನು. ಇದರಿಂದಾಗಿ ಜಿಲ್ಲಾ ಪೊಲೀಸರು ಹೈ ಅಲರ್ಟ್ ಆಗಿ ಆತನ ಬಂಧನಕ್ಕಾಗಿ ಬಲೆ ಬಿಸಿದ್ದರು. ಶನಿವಾರ ಸಾಯಂಕಾಲ ಸುಮಾರು 8 ಗಂಟೆಗೆ ಭಾಲ್ಕಿ ಹತ್ತಿರದ ಹೊಲವೊಂದರಲ್ಲಿ ಬಚ್ಚಿಟ್ಟುಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.




